ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ
ಬೆಂಗಳೂರು, ಮಾರ್ಚ್ 28: ಡೆಡ್ಲಿ ಕೊರೊನಾ ವೈರಸ್ ನ ತಡೆಗಟ್ಟಲು ಭಾರತವನ್ನು ಲಾಕ್ ಡೌನ್ ಮಾಡಲಾಗಿದೆ. ಏಪ್ರಿಲ್ 14 ರವರೆಗೂ ಭಾರತ ಲಾಕ್ ಡೌನ್ ಆಗಿರಲಿದ್ದು, ಬಡವರಿಗೆ, ಬೀದಿ ವ್ಯಾಪಾರಿಗಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವ್ಯವಸ್ಥೆ ಮಾಡಲಾಗಿದೆ.
ಉಚಿತ ಆಹಾರ ವಿತರಣೆಯಿಂದ ಹೆಚ್ಚು ಜನ ಸೇರುತ್ತಾರೆ. ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಇಂದಿರಾ ಕ್ಯಾಂಟೀನ್ ಬಂದ್ ಮಾಡುತ್ತೇವೆ ನಾಲ್ಕು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು.
ಲಾಕ್ ಡೌನ್ ಎಫೆಕ್ಟ್: ಇಂದಿರಾ ಕ್ಯಾಂಟೀನ್ ಬಂದ್
ಆದ್ರೆ, ಲಾಕ್ ಡೌನ್ ನಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿರುವ ಕಾರಣ, ಇಂದಿರಾ ಕ್ಯಾಂಟೀನ್ ತೆರೆಯಲು ಸಿಎಂ ಯಡಿಯೂರಪ್ಪ ಸಮ್ಮತಿ ಕೊಟ್ಟಿದ್ದಾರೆ.
ಇಂದಿರಾ ಕ್ಯಾಂಟೀನ್ ಟೈಮಿಂಗ್ಸ್
ಬೆಳಗ್ಗೆ 7.30 ರಿಂದ 10 ಗಂಟೆ, ಮಧ್ಯಾಹ್ನ 12.30 ರಿಂದ 3 ಗಂಟೆ, ರಾತ್ರಿ 7.30 ರಿಂದ 9 ಗಂಟೆವರೆಗೆ ಇಂದಿರಾ ಕ್ಯಾಂಟೀನ್ ತೆರೆದಿರುತ್ತದೆ. ಈ ಸಮಯದಲ್ಲಿ ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ಬಡ ನಾಗರೀಕರು ಉಚಿತವಾಗಿ ಊಟ ಸೇವಿಸಬಹುದು.
ನಾಗರೀಕರಿಗೆ ಸೂಚನೆ
ಆಹಾರ ಸೇವಿಸಲು ಇಂದಿರಾ ಕ್ಯಾಂಟೀನ್ ಗೆ ಬರುವವರು ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡಿಕೊಳ್ಳಬೇಕು. ಆಹಾರದ ಕೂಪನ್ ಪಡೆಯುವ ಸಂದರ್ಭದಲ್ಲಿ ನಾಗರೀಕರು ಕನಿಷ್ಟ 1 ಮೀಟರ್ ಅಂತರ ಕಾಯ್ದುಕೊಂಡು ಸಾಲಿನಲ್ಲಿ ನಿಲ್ಲಬೇಕು. ಜೊತೆಗೆ ನಾಗರೀಕರು ಮಾಸ್ಕ್ ಧರಿಸಿರಬೇಕು ಎಂಬ ಸೂಚನೆ ನೀಡಲಾಗಿದೆ.
ಸಾಬೂನು, ಹ್ಯಾಂಡ್ ಸ್ಯಾನಿಟೈಸರ್ ಇರಲೇಬೇಕು
ಇಂದಿರಾ ಕ್ಯಾಂಟೀನ್ ನಲ್ಲಿ ಸಾಬೂನು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಇರಿಸುವಂತೆ ಆದೇಶಿಸಲಾಗಿದೆ. ಆಹಾರ ವಿತರಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ಧರಿಸುವಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಕೊರೊನಾ
ಕರ್ನಾಟಕದಲ್ಲಿ ಇಲ್ಲಿಯವರೆಗೂ ಒಟ್ಟು 64 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 3 ಮಂದಿ ಈಗಾಗಲೇ ಸಾವನ್ನಪ್ಪಿದ್ದು, 5 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.