ಕೊರೊನಾ ಭಯ; ಫುಟ್ಪಾತ್ ಆಹಾರ ತಾಣಗಳ ಮೇಲೆ ಬಿಬಿಎಂಪಿ ಕಾರ್ಯಾಚರಣೆ
ಬೆಂಗಳೂರು, ಮಾರ್ಚ್ 11: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹಾಗೂ ಕೆಲವು ಶಂಕಿತ ಕಾಲರಾ ಕಾಯಿಲೆಯ ಪ್ರಕಾರಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬೀದಿ ಬದಿಗಳ ತೆರದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ದಕ್ಷಿಣ ವಲಯದ ವಿಜಯನಗರ, ಚಿಕ್ಕಪೇಟೆ, ಜಯನಗರದ ಭಾಗದಲ್ಲಿ ಪಾದಚಾರಿ ಮಾರ್ಗದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಮಳಿಗೆಗಳನ್ನು ಪೊಲೀಸ್ ಹಾಗೂ ವಾರ್ಡ್ ಮಾರ್ಷಲ್ ಗಳ ಸಹಕಾರದಲ್ಲಿ ತೆರವುಗೊಳಿಸಲಾಗಿದೆ.
ಕೊರೊನಾ ಕಂಟಕ: ಬೆಂಗಳೂರಿನ ಮಾಲ್, ಥಿಯೇಟರ್ ಗಳು ಖಾಲಿ ಖಾಲಿ
ಪಶ್ಚಿಮ ವಲಯದಲ್ಲಿ ತೆರವು ಕಾರ್ಯಾಚರಣೆ ವೇಳೆ ಹಲವು ಹೋಟೆಲ್ ಉದ್ದಿಮೆಗಳ ತಪಾಸಣೆ ನೆಡೆಸಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಲಭ್ಯತೆ ಬಗ್ಗೆ ಖಚಿತ ಪಡಿಸಿಕೊಳ್ಳಲಾಯಿತು. ಅಲ್ಲದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಚ್ಛತೆಯಿಲ್ಲದೇ ಆಹಾರ ಪದಾರ್ಥಗಳನ್ನು ತೆರೆದ ರೀತಿಯಲ್ಲಿ ಮಾರಾಟ ಮಾಡುತ್ತಿದ್ದ ಹಲವು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತ ಕ್ರಮ ವಹಿಸುವ ಬಗ್ಗೆ ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿರವರು ಸುತ್ತೋಲೆ ಹೊರಡಿಸಿದೆ.