ಕೊರೊನಾ ಭಯ; ಬಿಬಿಎಂಪಿ ಕಚೇರಿ ಪ್ರವೇಶಕ್ಕೂ ನಿರ್ಬಂಧ
ಬೆಂಗಳೂರು, ಮಾರ್ಚ್ 18; ಕೊರೊನಾ ವೈರಸ್ (ಕೋವಿಡ್-19) ಸೋಂಕು ಬಗ್ಗೆ ಸ್ವಚ್ಛತೆ, ಮುಂಜಾಗ್ರತಾ ಕ್ರಮ ವಹಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಬುಧವಾರ ಪಾಲಿಕೆ ಕೇಂದ್ರ ಕಚೇರಿ ಆವರಣ, ಅನೆಕ್ಸ್ ಕಟ್ಟಡ, ಅನೆಕ್ಸ್ ಕಟ್ಟಡ 3 ಹಾಗೂ ಕೆಂಪೇಗೌಡ ಪೌರಸಭಾಂಗಣದ ಆವರಣ, ಕೊಠಡಿಗಳನ್ನು ತಪಾಸಣೆ ನಡೆಸಿದರು.
ಪಾಲಿಕೆ ಕೇಂದ್ರ ಕಚೇರಿ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಶುಚಿತ್ವ ಕಾಪಾಡಬೇಕು. ಪಾಲಿಕೆ ಕೇಂದ್ರ ಕಚೇರಿ, ಅನೆಕ್ಸ್ ಕಟ್ಟಡ, ಅನೆಕ್ಸ್ ಕಟ್ಟಡ-3, ಕೆಂಪೇಗೌಡ ಪೌರಸಭಾಂಗಣ(ಕೌನ್ಸಿಲ್ ಕಟ್ಟಡ)ದಲ್ಲಿರುವ ಎಲ್ಲಾ ಕಚೇರಿ, ಕೊಠಡಿಗಳಿಗೆ ಭೇಟಿ ನೀಡಿ ಎಲ್ಲಾ ಕಡೆ ಶುಚಿತ್ವ ಕಾಪಾಡಿಕೊಳ್ಳುವ ಜೊತೆಗೆ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಬಳಸುವಂತೆ ಮಹಾಪೌರರು ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೊನಾ ಕಂಟಕ: ಬೆಂಗಳೂರಿನ ಮಾಲ್, ಥಿಯೇಟರ್ ಗಳು ಖಾಲಿ ಖಾಲಿ
ಪಾಲಿಕೆ ಆವರಣದಲ್ಲಿ ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಲು ಅನುವು ಮಾಡಬೇಕು. ದ್ವಿಚಕ್ರ ವಾಹನ ನಿಲ್ಲಿಸುವ ಸ್ಥಳವನ್ನು ಕೂಡಲೆ ದುರಸ್ತಿಪಡಿಸಿ, ಸುತ್ತಲು ಸಸಿಗಳನ್ನು ನೆಡಲು ಸೂಚನೆ ನೀಡಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಶೌಚಾಲಯಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
3 ರಿಂದ ಸಂಜೆ 5 ರವರೆಗೆ ಮಾತ್ರ ಪ್ರವೇಶ
ಕೊರೋನಾ ವೈರೆಸ್ ಸೊಂಕು ಹರಡದಂತೆ ರಾಜ್ಯ ಸರ್ಕಾರ, ಬಿಬಿಎಂಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಪಾಲಿಕೆ ಕೇಂದ್ರ ಕಛೇರಿಗೆ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಮಾತ್ರ ಸಾರ್ವಜನಿಕರು ಪ್ರವೇಶಿಸುವಂತೆ ನೋಡಿಕೊಳ್ಳಬೇಕು. ಈಗಿರುವ ಭದ್ರತಾ ಸಿಬ್ಬಂದಿ ಜೊತೆಗೆ ಅವಶ್ಯಕ ಸಿಬ್ಬಂದಿ ನಿಯೋಜನೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಛೇರಿಗೆ ಬರುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗೆ ಸೂಚನೆ ನೀಡಿದರು.
ರಂಗೋಲಿ ಮೂಲಕ ಕೊರೋನಾ ಜಾಗೃತಿ
ಕೊರೊನಾ ವೈರಸ್ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಪಾಲಿಕೆ ಕೇಂದ್ರ ಕಛೇರಿ ಕೆಂಪೇಗೌಡ ಪೌರಸಭಾಂಗಣ ಆವರಣದಲ್ಲಿ ಖ್ಯಾತ ರಂಗೋಲಿ ಕಲಾವಿದರಾದ ಅಕ್ಷಯ್ ಜಲಿಹಾಳ್ ರವರು ಕೊರೋನಾ ವೈರೆಸ್ ಹರಡುವ ಹಾಗೂ ನಿಯಂತ್ರಿಸುವ ಬಗ್ಗೆ ರಂಗೋಲಿ ಮೂಲಕ ಚಿತ್ರ ಬರೆದಿದ್ದು, ಅದನ್ನು ಮೇಯರ್, ಹಾಗೂ ಆಯುಕ್ತರು ಮತ್ತು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ವೀಕ್ಷಿಸಿ ಕಲಾವಿದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಳ್ಳು ಸುದ್ದಿ
ಬೆಂಗಳೂರಿನಲ್ಲಿ ಕೊರೊನಾ ತಡೆಗಟ್ಟಲು ಗಾಳಿಯಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್ ಕುಮಾರ್ ಅವರು, ' ಆ ರೀತಿ ನಾವು ಔಷಧಿ ಸಿಂಪಡಣೆ ಮಾಡುತ್ತಿಲ್ಲ. ಇದು ಸುಳ್ಳು ಸುದ್ದಿ. ಯಾರೂ ನಂಬಬೇಡಿ. ಅನುಮಾನ ಇದ್ದರೆ 104 ಕ್ಕೆ ಕರೆ ಮಾಡಿ ಬಗೆಹರಿಸಿಕೊಳ್ಳಿ. ಕೊರೊನಾ ವೈರಸ್ ಬಗ್ಗೆ ಗಾಳಿ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ 14 ಜನಕ್ಕೆ
ಸದ್ಯ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಟ್ಟು 14 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರ ಮಾರ್ಚ್ 31 ರವೆರೆಗೆ ಸಾರ್ವಜನಿಕ ನಿರ್ಭಂಧಗಳನ್ನು ಮುಂದುವರೆಸಿದೆ.