ಕೊರೊನಾ; ವಿಮಾನ ನಿಲ್ದಾಣದಿಂದ ಬರುವವರಿಗೆ ಸರ್ಕಾರದಿಂದಲೇ ದಿಗ್ಬಂಧನ!
ಬೆಂಗಳೂರು, ಮಾರ್ಚ್ 17: ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರಿಗೆ ದಿಗ್ಬಂಧನದ ಸೌಲಭ್ಯಗಳನ್ನು (Quarantine Facilities) ಅಂದರೆ ಶಂಕಾಸ್ಪದ ರೋಗಿಗಳನ್ನು ಇತರರಿಂದ ಪ್ರತ್ಯೇಕವಾಗಿ ಇಡುವ ಸರ್ಕಾರವೇ ಸೌಲಭ್ಯ ಕಲ್ಪಿಸಿದೆ.
ದೇವನಹಳ್ಳಿ ತಾಲೂಕಿನ ಪ್ರಸನ್ನಹಳ್ಳಿ ಗ್ರಾಮದಲ್ಲಿರುವ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ Quarantine Facilities ಕಲ್ಪಿಸಲಾಗಿದೆ.
ಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆ
ಮೇಲ್ವಿಚಾರಣೆಗಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಉಪತಹಶೀಲ್ದಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪುರಸಭೆಯ ಕಂದಾಯ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳ ಅಧೀನ ಸಿಬ್ಬಂದಿಗಳು, ಭೂ ಮಾಪಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡಂತೆ 24×7 ರಂತೆ ಪಾಳಿಯಲ್ಲಿ ಕಾರ್ಯನಿರ್ವಹಿಸಲು ತಂಡವನ್ನು ರಚಿಸಲಾಗಿದೆ ಎಂದು ದೇವನಹಳ್ಳಿ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಪಾಸಣೆಗೆ ಅಗತ್ಯ ಕ್ರಮ
ಈ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖುದ್ದು ಹಾಜರಿದ್ದು, ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಬಸ್ ಗಳ ಮೂಲಕ ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ಗ್ರಾಮದಲ್ಲಿ ಇರುವ ಆಕಾಶ್ ಆಸ್ಪತ್ರೆಗೆ ಕರೆದೊಯ್ದು ಕೊರೋನಾ ವೈರಸ್ ಇರುವ ಬಗ್ಗೆ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಕ್ಯಾಬ್ಗಳು ನಷ್ಟಕ್ಕೆ ಸಿಲುಕಿವೆ
ವಿದೇಶಗಳಿಂದ ಬರುವ ಪ್ರಯಾಣಿಕರು ಖಾಸಗಿ ಕ್ಯಾಬ್ಗಳನ್ನು ಅವಲಂಬಿಸಿದ್ದರು. ವಿದೇಶಗಳಿಂದ ಬರುವ ಪ್ರಯಾಣಿಕರು ಬರುತ್ತಿಲ್ಲವಾದ್ದರಿಂದ ಅವರನ್ನೇ ಅವಲಂಬಿಸಿದ್ದ ಖಾಸಗಿ ಕ್ಯಾಬ್ಗಳು ಈಗ ನಷ್ಟಕ್ಕೆ ಸಿಲುಕಿವೆ. ಇದರಿಂದ ಕೊರೊನಾ ವೈರಸ್ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ಏತನ್ಮದ್ಯೆ ಕೊರೊನಾ ಭಯದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಶೇ 75 ರಷ್ಟು ಇಳಿಮುಖವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಏರ್ಪೋರ್ಟ್ ನಲ್ಲಿ ಹೊಸ ಕ್ರಮ: ದಿಗ್ಬಂಧನದಿಂದ ತಪ್ಪಿಸಿಕೊಳ್ಳಲು ಚಾನ್ಸೇ ಇಲ್ಲ!
ದಿನದಿಂದ ದಿನಕ್ಕೆ ಕುಸಿತ
ಡಿಸೆಂಬರ್ನಲ್ಲಿ ಚೀನಾದಲ್ಲಿ ಕೋವಿಡ್ 19 ಕಾಣಿಸಕೊಂಡ ನಂತರ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಲಾಯಿತು. ವಿದೇಶ ಪ್ರವಾಸ ಕೈಗೊಳ್ಳದಂತೆ ಜಾಗೃತಿ ಮೂಡಿಸಲಾಯಿತು. ಇದರಿಂದ ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಕರಿನೆರಳು ಬೀರಿತು. ಫೆಬ್ರುವರಿಯಲ್ಲಿ ಶೇ 20ರಷ್ಟು ಕುಸಿತ ಕಂಡಿದ್ದ ಪ್ರಯಾಣಿಕರ ಸಂಖ್ಯೆ ಮಾರ್ಚ್ನಲ್ಲಿ ಮತ್ತಷ್ಟು ಕುಸಿದು ಶೇ 75 ಕ್ಕೆ ಇಳಿದಿದೆ. ಅಲ್ಲೊಬ್ಬರು ಇಲ್ಲೊಬ್ಬರು ಪ್ರಯಾಣಿಕರು ಕಾಣುತ್ತಿದ್ದಾರೆ.
ಶೇ 2ರಿಂದ ಶೇ 4ರಷ್ಟು ಇಳಿಕೆ
ಸಾಮಾನ್ಯ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಿತ್ಯ ಅಂದಾಜು 14 ರಿಂದ 15 ಸಾವಿರ ಪ್ರಯಾಣಿಕರು ಆಗಮಿಸುತ್ತಿದ್ದರು. ಆದರೆ, ಈ ಸಂಖ್ಯೆ ಈಗ 3 ಸಾವಿರದಿಂದ 2 ಸಾವಿರಕ್ಕೆ ಕುಸಿದಿದೆ. ದೇಶದೊಳಗಿನ ಪ್ರಯಾಣಿಕರ ಸಂಖ್ಯೆ ಯಲ್ಲೂ ಶೇ 2ರಿಂದ ಶೇ 2ರಷ್ಟು ಇಳಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.