ಬೆಂಗಳೂರಿನಲ್ಲೇ ಕೊವಿಡ್-19 ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರು, ಆಗಸ್ಟ್.28: ಕರ್ನಾಟಕದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಕೊವಿಡ್-19 ಆಸ್ಪತ್ರೆಯೊಂದು ಬೆಂಗಳೂರಿನಲ್ಲೇ ಆರಂಭವಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಇದರಿಂದ ಯಾವುದೇ ರೀತಿ ಆರ್ಥಿಕ ಹೊರೆ ಆಗುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
Recommended Video
ಕಳೆದ ಬುಧವಾರ ಬೆಂಗಳೂರು ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿರುವ ಚರಕ ಆಸ್ಪತ್ರೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಿದ್ದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದ್ದರು.
ಕೊವಿಡ್-19ನಿಂದ ಪ್ರಾಣ ಬಿಟ್ಟ 100ರಲ್ಲಿ 89 ಜನ ಈ ರಾಜ್ಯದವರು!
ಕಳೆದ ನಾಲ್ಕು ತಿಂಗಳ ಹಿಂದೆಯೇ ಇಂಥದೊಂದು ಆಲೋಚನೆ ಹೊಳೆಯಿತು. ಕೊವಿಡ್-19 ಸೋಂಕಿತರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಕರಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವಂತಾ ಆಸ್ಪತ್ರೆಯನ್ನು ತೆರೆಯುವುದಕ್ಕೆ ತೀರ್ಮಾನಿಸಲಾಯಿತು. ಈ ಬಗ್ಗೆ ಇನ್ಫೋಸಿಸ್ ಸಂಸ್ಥೆ ಕೂಡಾ ಆಸಕ್ತಿ ತೋರಿಸಿತ್ತು ಎಂದು ತಿಳಿಸಿದರು.
11 ಕೋಟಿ ರೂಪಾಯಿ ನೆರವು ನೀಡಿದ ಇನ್ಫೋಸಿಸ್
ಕೊವಿಡ್-19 ಕೇರ್ ಆಸ್ಪತ್ರೆ ತೆರೆಯುವುದಕ್ಕೆ ಸಹಾಯ ಮಾಡುವಂತೆ ಇನ್ಫೋಸಿಸ್ ಫೌಂಡೇಷನ್ ಗೆ ಸರ್ಕಾರವು ಮನವಿ ಮಾಡಿಕೊಂಡಿತ್ತು. ಸುಧಾಮೂರ್ತಿಯವರು ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಮತ್ತು ಆಸ್ಪತ್ರೆ ಸ್ಥಾಪನೆಗೆ 11 ಕೋಟಿ ರೂಪಾಯಿ ಹಣದ ನೆರವು ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಪ್ರೋದಿಂದ ವೈದ್ಯಕೀಯ ಸಿಬ್ಬಂದಿಯ ನೆರವು
ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಯನ್ನು ವಿಪ್ರೋ ಸಂಸ್ಥೆಯು ನೀಡುವುದಕ್ಕೆ ಮುಂದಾಗಿದೆ. ವೈದ್ಯಕೀಯ ಸಿಬ್ಬಂದಿಯ ವೆಚ್ಚವನ್ನು ಸಂಸ್ಥೆಯು ನೋಡಿಕೊಳ್ಳುವುದಕ್ಕೆ ಮುಂದಾಗಿದ್ದು, ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯನ್ನು ತಗ್ಗಿಸಿದೆ. ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ವೈದ್ಯಕೀಯ ಸೇವೆ ಒದಗಿಸಲು ನೆರವು ನೀಡಿದ ಎರಡೂ ಸಂಸ್ಥೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಧನ್ಯವಾದ ಅರ್ಪಿಸಿದರು.
ಕೊರೊನಾವೈರಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏನೇನಿದೆ?
ಬೆಂಗಳೂರಿನಲ್ಲಿ ಆರಂಭವಾಗಿರುವ ನೂತನ ಕೊರೊನಾವೈರಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 130 ಜನರಲ್ ಬೆಡ್, 20 ತುರ್ತು ನಿಗಾ ಘಟಕಗಳು, 20 ವೆಂಟಿಲೇಟರ್ ಗಳ ವ್ಯವಸ್ಥೆಯಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣ
ಕರ್ನಾಟಕದಲ್ಲಿ ಕೊರೊನಾವೈರಸ್ ಮತ್ತೊಮ್ಮೆ ದಾಖಲೆ ಬರೆದಿದ್ದು, ಕಳೆದ 24 ಗಂಟೆಗಳಲ್ಲೇ 9386 ಮಂದಿಗೆ ಕೊರೊನಾವೈರಸ್ ಸೋಂಕಿತರು ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 3.9 ಲಕ್ಷ ಗಡಿ ದಾಟಿದೆ. ಒಂದೇ ದಿನ ಮಹಾಮಾರಿಗೆ 141 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,232ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,09,792ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ