ಕೊರೊನಾ ಸೋಂಕಿತರನ್ನು ಸುಲಿಗೆ ಮಾಡುತ್ತಿರುವ ಏಳು ದಂಧೆಗಳು
ಬೆಂಗಳೂರು, ಮೇ. 08: ಕೊರೊನಾ ಎರಡನೇ ಅಲೆ ಹಬ್ಬುತ್ತಿದ್ದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ದಂಧೆಗಳು ಶುರುವಾಗಿವೆ. ಆ್ರೋಗ್ಯ ಇಲಾಖೆ ಮಾಡಿದ ಎಡವಟ್ಟುಗಳಿಂದ ವೈದ್ಯಕೀಯ ಕ್ಷೇತ್ರದ ದಂಧೆಯ ಸುಳಿಗೆ ಸಿಲುಕಿ ಕೊರೊನಾ ಸೋಂಕಿತ ಕುಟುಂಬಗಳು ಇರುವ ದುಡ್ಡು ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವುದು ಒಂದೆರಡು ದಂಧೆಯಲ್ಲ. ಅವುಗಳ ಪಟ್ಟಿ ಇಲ್ಲಿದೆ ನೋಡಿ.
Recommended Video
ಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿ
ಬ್ಲಾಕ್ ಮಾರ್ಕೆಟ್ ನಲ್ಲಿ ಆಕ್ಸಿಜನ್ ಮಾರಾಟ
ಕೊರೊನಾ ಸೋಂಕಿತರ ಸಂಖ್ಯೇ ಏಕಾಏಕಿ ಹೆಚ್ಚಾಗುತ್ತಿದ್ದಂತೆ ಜೀವ ಕಾಪಾಡುವ ಆಕ್ಸಿಜನ್ ಗೆ ಎಲ್ಲಿಲ್ಲದ ಬೇಡಿಕೆ ಬಂತು. ರಾಜ್ಯಕ್ಕೆ ಅಗತ್ಯ ಆಕ್ಸಿಜನ್ ಇಲ್ಲಿ ತಯಾರಾದರೂ ಕೇಂದ್ರ ಸರ್ಕಾರದ ಕಪಿಮುಷ್ಠಿಗೆ ಒಳಗಾಗಿ ಅನೇಕ ಕಂಪನಿಗಳು ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಿದವು. ಆಕ್ಸಿಜನ್ ಇಲ್ಲದೇ ಚಾಮರಾಜನಗರ, ಗುಲ್ಬರ್ಗಾ, ಕೋಲಾರದಲ್ಲಿ ಸರಣಿ ಸಾವುಗಳು ಸಂಭವಿಸಿದವು. ಚಾಮರಾಜನಗರ ಪ್ರಕರಣ ಬೆಳಕಿಗೆ ಬಂದ ಕೂಡಲೇ ಹೈಕೋರ್ಟ್ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ರಾಜ್ಯಕ್ಕೆ ಅಗತ್ಯ ಇರುವಷ್ಟು ಆಕ್ಸಿಜನ್ ಪೂರೈಕೆ ಮಾಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿತ್ತು. ಇದರ ಮಧ್ಯೆ ರಾಜಧಾನಿಯಲ್ಲಿ ಆಕ್ಸಿಜನ್ ದಂಧೆ ಕೂಡ ಶುರುವಾಗಿದೆ.
ಸರ್ಕಾರದ ನಿಗಧಿಯಂತೆ 300 ರೂಪಾಯಿಗೆ ಮಾರಾಟ ಮಾಡಬೇಕಿದ್ದ 47 ಲೀಟರ್ ಆಕ್ಸಿಜನ್ ಸಿಲಿಂಡರ್ ಬೆಂಗಳೂರಿನ ಕಾಳಸಂತೆಯಲ್ಲಿ 3 ಸಾವಿರ ದಿಂದ 6 ಸಾವಿರಕ್ಕೆ ಮಾರಾಟವಾಗುತ್ತಿವೆ. ಇಷ್ಟು ದುಟ್ಟು ಕೊಟ್ಟು ಖಾಸಗಿ ಆಸ್ಪತ್ರೆಗಳು ಖರೀದಿಗೆ ಸರದಿ ಸಾಲಲ್ಲಿ ನಿಂತಿವೆ. ಇಷ್ಟು ದುಬಾರಿ ಮೊತ್ತ ಕೊರೊನಾ ಸೋಂಕಿಗಳ ಮೇಲೆ ಹಾಕಿ ಆಸ್ಪತ್ರೆಗಳು ವಸೂಲಿಗೆ ಇಳಿದಿವೆ. ಸದ್ದಿಲ್ಲದೇ ನಡೆಯುತ್ತಿದ್ದ ಆಕ್ಸಿಜನ್ ಮಾರಾಟ ದಂಧೆಯ ಮೇಲೆ ಇದೀಗ ಸಿಸಿಬಿ ಪೊಲೀಸರು ಕಣ್ಣು ಇಟ್ಟಿದ್ದಾರೆ. ಇದೇ ಮೊದಲ ಬಾರಿಗೆ ದುಬಾರಿಗೆ ಬೆಲೆಗೆ ಆಕ್ಸಿಜನ್ ಮಾರಾಟ ಮಾಡುತ್ತಿದ್ದ ಆಕ್ಸಿಜನ್ ತಯಾರಿಕಾ ಕಂಪನಿಯ ಮ್ಯಾನೇಜರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಲಿಂಡರ್ ದಂಧೆಕೋರರ ಸೆರೆ
ಸಿಗಾ ಗ್ಯಾಸ್ ನ ಮ್ಯಾನೇಜರ್ ರವಿ ಕುಮಾರ್ ಬಂಧಿತ ಆರೋಪಿ. ಈತ 300 ರೂ. ಬೆಲೆಯ ಆಕ್ಸಿಜನ್ ಸಿಲಿಂಡರ್ ಗಳನ್ನು 3 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. ಎರಡು ಸಿಲಿಂಡರ್ ಗಳನ್ನು ಹೆಚ್ಚಿನ ಬೆಲೆಗೆ ಮಾಆಟ ಮಾಡುತ್ತಿದ್ದ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿ ಪೀಣ್ಯ ಪೊಲೀಸ್ ಠಾಣೆ ಯಲ್ಲಿ ಕೇಸು ದಾಖಲಿಸಿದ್ದಾರೆ. ದುಬಾರಿ ಬೆಲೆಗೆ ಆಕ್ಸಿಜನ್ ಮಾರಾಟ ಮಾಡುವ ದಂಧೆ ನಿರಂತವಾಗಿ ನಡೆಯುತ್ತಿದೆ. ಇದೀಗ ಸಿಸಿಬಿ ಪೊಲೀಸರು ಇದರ ಮೇಲೂ ಕಣ್ಣಿಟ್ಟಿದ್ದಾರೆ.
ರೆಮ್ಡಿಸಿವಿಆರ್ ಅಕ್ರಮ ದಂಧೆ
ಕೊರೊನಾ ಸೋಂಕಿತರು ರೋಗದಿಂದ ಜೀವ ಉಳಿಸಿಕೊಳ್ಳಲು ರೆಮ್ಡಿಸಿವಿಆರ್ ಬಳಕೆಗೆ ಮುಂದಾಗಿದ್ದೇ, ಆರು ಸಾವಿರ ಮುಖ ಬೆಲೆಯ ಈ ಚುಚ್ಚುಮದ್ದನ್ನು ಬೆಂಗಳೂರಿನಲ್ಲಿ 80 ಸಾವಿರಕ್ಕೂ ಮಾರಾಟ ಮಾಡಲಾಗಿದೆ. ಜೀವಕ್ಕಾಗಿ ಸೆಣಸಾಡುವುದನ್ನೇ ಬಂಡವಾಳ ಮಾಡಿಕೊಂಡ ದುರಾಳರು ರೆಮ್ಡಿಸಿವಿಆರ್ ಗೆ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಳ್ಳುತ್ತಿದ್ದು, ಮೆಡಿಕಲ್ ಸ್ಟೋರ್, ಆಸ್ಪತ್ರೆಯ ಪ್ರತಿನಿಧಿಗಳೇ ಈ ದಂಧೆಯಲ್ಲಿ ಶಾಮೀಲಾಗಿ ಬಂಧನಕ್ಕೆ ಒಳಗಾಗಿದ್ದಾರೆ. ಇನ್ನು ರೆಮ್ಡಿಸಿವಿಆರ್ ಚುಚ್ಚು ಮದ್ದು ದಂಧೆ ಸಂಬಂಧ ಸಿಸಿಬಿ ಪೊಲೀಸರು ಹತ್ತಕ್ಕೂ ಹೆಚ್ಚು ಕೇಸು ದಾಖಲಿಸಿದ್ದಾರೆ. ನೂರಕ್ಕೂ ಹೆಚ್ಚು ಚುಚ್ಚು ಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ :
ರಾಜಧಾನಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಸರ್ಕಾರದ ಕೋಟಾದಡಿ ಖಾಸಗಿ ಆಸ್ಪತ್ರೆಗಳು ಮೀಸಲಿಟ್ಟಿದ್ದ ಬೆಡ್ ಗಳನ್ನು ಬ್ಲಾಕ್ ಮಾಡುವ ದಂಧೆಯಲ್ಲಿ ತೊಡಗಿದ ಬಿಬಿಎಂಪಿ ಕೋವಿಡ್ ವಾರ್ ರೂಮ್ ಅಧಿಕಾರಿಗಳು ಇದೀಗ ಸಿಸಿಬಿ ತನಿಖೆ ಎದುರಿಸುತ್ತಿದ್ದಾರೆ. ಸರ್ಕಾರದ ಕೋಟಾದಡಿ ಮೀಸಲಿಟ್ಟಿದ್ದ ಬೆಡ್ ಗಳನ್ನು ಬ್ಲಾಕ್ ಮಾಡಿ ಅವನ್ನು ಖಾಸಗಿಯಾಗಿ ಮಾರಾಟ ಮಾಡಿ ಹೆಚ್ಚಿನ ದುಡ್ಡು ಪಡೆಯುವ ದಂಧೆಯಲ್ಲಿ ಈಗಾಗಲೇ ನಾಲ್ವರು ಜೈಲು ಸೇರಿದ್ದಾರೆ. ಎಂಟು ಕೋವಿಡ್ ವಾರ್ ರೂಮ್ ಗಳಲ್ಲಿ ನಡೆದಿದೆ ಎನ್ನಲಾದ ಈ ದಂಧೆಯ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು ದೊಡ್ಡ ದೊಡ್ಡ ಆಸ್ಪತ್ರೆಗಳು ಶಾಮೀಲಾಗಿರುವ ವಾಸನೆ ಬರುತ್ತಿದೆ. ಜನ ಪ್ರತಿನಿಧಿಗಳು ಕೂಡ ತಮ್ಮ ಪ್ರಭಾವ ಬಳಿಸಿ ಬೆಡ್ ಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ವಿವಾದಕ್ಕೆ ನಾಂದಿ ಹಾಡಿರುವುದು ಗಮನಾರ್ಹ.
ಸಿಟಿ ಸ್ಕ್ಯಾನಿಂಗ್ ದಂಧೆ
ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುವ ಆರ್ಟಿಪಿಸಿಆರ್ ಮತ್ತು ಆಂಟಿಜನ್ ಪರೀಕ್ಷೆಗಳು ನೆಗಟೀವ್ ಬಂದರೂ ಸಿಟಿ ಸ್ಕ್ಯಾನ್ ನಲ್ಲಿ ಪಾಸಿಟೀವ್ ಬರಲಾರಂಭಿಸಿತು. ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಆರ್ಟಿಪಿಸಿಆರ್ ಮತ್ತು ಆಂಟಿಜನ್ ಪರೀಕ್ಷೆಗಳ ಫಲಿತಾಂಶ ಎಡವಟ್ಟಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಡಯೋಗ್ನಸ್ಟಿಕ್ ಸೆಂಟರ್ ಗಳ ಮುಂದೆ ಜನರ ಸಾಲು ನಿಂತರು. ಕೇವಲ 1500 ರೂ.ಗೆ ಮಾಡುತ್ತಿದ್ದ ಸಿಟಿ ಸ್ಕ್ಯಾನಿಂಗ್ ಪರೀಕ್ಷೆ ಶುಲ್ಕ ಏಕಾಏಕಿ 6 ಸಾವಿರಕ್ಕೆ ಏರಿಕೆ ಮಾಡಿದರು. ನಾಲ್ಕು ಪಟ್ಟು ಹೆಚ್ಚಳ ಮಾಡಿ ಅಧಿಕೃತವಾಗಿಯೇ ಸಾಕಷ್ಟು ಆಸ್ಪತ್ರೆಗಳು ಕೊರೊನಾ ಸೋಂಕಿತರನ್ನು ಹಿಂಡಿ ಹಿಪ್ಪೆ ಮಾಡಿದವರು. ಕೊಳ್ಳೆ ಹೊಡೆದ ಮೇಲೆ ಕೋಟೆಗೆ ಬಾಗಿಲು ಹಾಕಿದಂತೆ ಸರ್ಕಾರ ಇದೀಗ ಸಿಟಿ ಸ್ಕ್ಯಾನ್ ದರವನ್ನು 1500 ನಿಗಧಿ ಮಾಡಿ ಆದೇಶಿಸಿದೆ. ಈ ಕೆಲಸವನ್ನು ಮೊದಲೇ ಮಾಡಿದ್ದಲ್ಲಿ ಎಷ್ಟೋ ಬಡವರು ಹಣ ಕಳೆದುಕೊಳ್ಳುತ್ತಿರಲಿಲ್ಲ. ಇದೀಗ ಸಿಟಿ ಸ್ಕ್ಯಾನ್ ಬೆಲೆ ನಿಗಧಿ ಮಾಡಲಾಗಿದೆ.
ಐಸಿಯು ವೆಂಟಿಲೇಟರ್ ಕೇಳುವರೇ ಗತಿ ಇಲ್ಲ
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಕಥೆ ಕೇಳುವಂತಯೇ ಕೇಳವುಂತಿಲ್ಲ. ಐಸಿಯು ಬೆಡ್ ನ್ನು ಪ್ಯಾಕೇಜ್ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೇವಲ 3 ಸಾವಿರಕ್ಕೆ ಸಿಗುತ್ತಿದ್ದ ಸಾಮಾನ್ಯ ಬೆಡ್ 15 ಸಾವಿರ ಆಗಿದೆ. ವೆಂಟಿಲೇಟರ್ ಜತೆಗೆ ಐಸಿಯು ಬೆಡ್ ಸಣ್ಣ ನರ್ಸಿಂಗ್ ಹೋಮ್ ನಲ್ಲೂ 40 ಸಾವಿರ ರೂ. ದರ ವಿಧಿಸಲಾಗುತ್ತಿದೆ. ಇನ್ನು ಸ್ಪರ್ಶ , ಅಪೋಲೋ, ಬಿಜಿಎಸ್ ನಂತರ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವಿತ್ ಐಸಿಯು ಪ್ಯಾಕೇಜ್ ದರಕ್ಕೆ ಬಿಕರಿಯಾಗುತ್ತಿವೆ. ವಿಪರ್ಯಾಸವೆಂದರೆ ಸರ್ಕಾರದ ಕೋಟಾದಡಿ ಐಸಿಯು ವೆಂಟಿಲೇಟರ್ ಚಿಕಿತ್ಸೆ ಕೊಡುವ ರೋಗಿಗೆ ಸರ್ಕಾರ ನೀಡುವುದು ಕೇವಲ 9 ಸಾವಿರ ಮಾತ್ರ. ಅದೇ ಬೆಡ್ ನ್ನು ಖಾಸಗಿಯಾಗಿ ಪಡೆದರೆ ಕನಿಷ್ಠ 40 ಸಾವಿರದಿಂದ 1 ಲಕ್ಷ ರೂ. ! ಕೊರೊನಾ ಒಂದು ಸಾಂಕ್ರಾಮಿಕ ರೋಗ, ಜನರ ಸೇವೆ ಮಾಡುವ, ದೇಶವನ್ನು ಉಳಿಸುವ ಮನಸ್ಥಿತಿಯಿಂದ ಖಾಸಗಿ ಆಸ್ಪತ್ರೆಗಳು ದೂರ ಉಳಿದಿವೆ. ಸಿಕ್ಕ ಈ ಅವಕಾಶ ಮತ್ತೆ ಸಿಗದು ಎಂಬಂತೆ ಮನಸೋ ಇಚ್ಛೆ ದರವನ್ನು ವಿಧಿಸಲಾಗುತ್ತಿವೆ. ಕೊರೊನಾ ಸೋಂಕಿತರ ಸಂಖ್ಯೆ ದಿನಕ್ಕೆ 50 ಸಾವಿರ ಗಡಿ ದಾಟುತ್ತಿದೆ.
ಹೀಗಾಗಿ ಜೀವ ಉಳಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ. ಐಸಿಯು , ವೆಂಟಿಲೇಟರ್ ಗಳ ಮೇಲೆ ಸರ್ಕಾರದ ಯಾವುದೇ ನಿರ್ಬಂಧ ವಿಧಿಸಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿವೆ. ಈಗಲಾದರೂ ಸರ್ಕಾರ ಎಚ್ಚೆತ್ತು ಕೊರೊನಾ ಸೋಂಕಿತರಿಗೆ ನೀಡುವ ಐಸಿಯು , ವೆಂಟಿಲೇಟರ ದರವನ್ನು ಆಸ್ಪತ್ರೆಗಳ ವರ್ಗೀಕರಣ ಆಧಾರದ ಮೇಲೆ ನಿಗದಿ ಮಾಡದಿದ್ದರೆ ಕೊರೊನಾ ಸೋಂಕಿತರು ಬೆತ್ತಲೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಸತ್ತವರ ಕಾರ್ಯಕ್ಕೂ ಸ್ಮಶಾನದಲ್ಲಿ ಕಾಸು
ಇನ್ನು ಕೊರೊನಾ ಸೋಂಕಿತರು ಸಾವಿಗೀಡಾದರೆ ಅವರನ್ನು ಸ್ಮಶಾನಕ್ಕೆ ಸಾಗಿಸಿ ಕಾರ್ಯ ಮುಗಿಸಿ ಬೂದಿ ಕೊಡಲು 25 ಸಾವಿರ ಕೊಡಬೇಕು. ಇಲ್ಲದಿದ್ದರೆ ಮೃತರ ಹೆಣವನ್ನು ಸರಿಯಾಗಿ ಸುಡದೇ ನಾಯಿಗಳು ಎಳೆದಾಡಲು ಅವಕಾಶ ಮಾಡಿಕೊಡುತ್ತಾರೆ. ಇನ್ನೂ ಸರತಿ ಸಾಲಲ್ಲಿ ನಿಂತು ಹೆಣ ಸುಡುವ ತಾಳ್ಮೆ ಇಲ್ಲದೇ ಜನರೂ ಪ್ಯಾಕೇಜ್ ಹೆಸರಿನಲ್ಲಿ ಹಣ ಕೊಟ್ಟು ಕೊರೊನಾ ಸೋಂಕಿತರಿಗೆ ಬಲಿಯಾದವರ ಕಾರ್ಯವನ್ನು ಮಾಡಬೇಕಾದ ಪರಿಸ್ಥಿತಿ ಬೆಂಗಳೂರಿನಲ್ಲಿ ಎದುರಾಗಿದೆ. ಇತ್ತೀಚೆಗೆ ಟಿ.ಆರ್. ಮಿಲ್ ಬಳಿ ಖಾಸಗಿ ವಾಹಿನಿಯೊಂದು ಅಲ್ಲಿನ ಸ್ಮಶಾನ ಸಿಬ್ಬಂದಿ ಹಣ ಪಡೆದು ಅಂತ್ಯ ಸಂಸ್ಕಾರ ಮಾಡಿಸುವ ದಂಧೆಯನ್ನು ಬಯಲಿಗೆ ಎಳೆದಿದ್ದನ್ನು ಸ್ಮರಿಸಬಹುದು.
ಕೊರೊನಾ ಚಿಲ್ಲರೆ ದಂಧೆಗಳು
ಇದರ ಜತೆಗೆ ಇನ್ನು ಐಸಿಯು ಬೆಡ್ ಖಾಲಿ ಯಿರುವ ಆಸ್ಪತ್ರೆಯ ವಿವರಗಳನ್ನು ನೀಡಿ ಕಮೀಷನ್ ಪಡೆಯುವ ದಂಧೆ ಮುಂದುವರೆದಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದಾಶಿವನಗರ ಪೊಲೀಸರು ಮತ್ತು ಜಯನಗರ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಸಂಬಂಧ ರಾಜ್ಯದಲ್ಲಿ ಏಕ ರೂಪದ ವ್ಯವಸ್ಥೆಯನ್ನು ಚಿಕಿತ್ಸಾ ವೆಚ್ಚವನ್ನು ಜಾರಿ ಮಾಡುವಲ್ಲಿ ಕೂಡ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಈಗಲಾದರೂ ನಿದ್ದೆಯಿಂದ ಎದ್ದು ಅವೈಜ್ಞಾನಿಕ ತೀರ್ಮಾನ ಕೈಗೊಳ್ಳುವ ಬದಲಿಗೆ ಜನ ಸ್ನೇಹಿ ನಿರ್ಧಾರ ಕೈಗೊಳ್ಳುತ್ತದೆಯೇ ಎಂದು ಕಾದು ನೋಡಬೇಕು.