ಎಚ್ ಡಿಕೆ ಮಾಲೀಕತ್ವದ ಸುದ್ದಿ ವಾಹಿನಿ ಕಾರ್ಯಾಚರಣೆ ಸ್ಥಗಿತ?
ಬೆಂಗಳೂರು, ಏಪ್ರಿಲ್.13: ಕಸ್ತೂರಿ ಚಾನೆಲ್.. ಒಂದು ಕಾಲದಲ್ಲಿ ಕನ್ನಡಿಗರ ಮನೆ ಮನವನ್ನು ಗೆದ್ದ ಸುದ್ದಿ ವಾಹಿನಿ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾಲೀಕತ್ವದ ಕಸ್ತೂರಿ ಸುದ್ದಿ ವಾಹಿನಿಗೆ ಕೊರೊನಾ ವೈರಸ್ ಹೊಡೆತ ಕೊಡುವ ಲಕ್ಷಣಗಳು ಎದ್ದು ಕಾಣುತ್ತಿದೆ.
Recommended Video
ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾರತಕ್ಕೆ ಭಾರತವೇ ಲಾಕ್ ಡೌನ್ ಆಗಿದೆ. ಕೃಷಿ, ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳೆಲ್ಲ ಬಂದ್ ಆಗಿವೆ. ವ್ಯಾಪಾರ ವಹಿವಾಟುಗಳಿಲ್ಲದೇ ದೇಶದ ಆರ್ಥಿಕತೆಗೇ ಭಾರಿ ಹೊಡೆತ ಬೀಳುತ್ತಿದ್ದು, ಇದರ ಮೊದಲ ಪೆಟ್ಟು ಸಂವಿಧಾನದ ನಾಲ್ಕನೇ ಅಂಗ ಮಾಧ್ಯಮಕ್ಕೆ ಬಿದ್ದಿದೆ.
ವರ್ಷ ಪೂರೈಸಿದ ಕಸ್ತೂರಿ ನ್ಯೂಸ್, ನೀವೇನಂತೀರಾ?
2011ರಲ್ಲಿ ಮುಕ್ತ, ನಿರ್ಭೀತ, ನ್ಯಾಯಸಮ್ಮತ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಚಾನೆಲ್ ಟಿಆರ್ ಪಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ಪಾತಾಳಕ್ಕೆ ಕುಸಿದಿದೆ. ಕನ್ನಡಿಗರೊಬ್ಬರ ಮಾಲೀಕತ್ವದಲ್ಲಿ ಆರಂಭಗೊಂಡ ಕಸ್ತೂರಿ ಸುದ್ದಿ ವಾಹಿನಿ ಇದೀಗ ಬಾಗಿಲು ಹಾಕುವ ಹಂತಕ್ಕೆ ಬಂದು ನಿಂತಿದೆ.
"ಕಸ್ತೂರಿ ನ್ಯೂಸ್ ಚಾನಲೆ ಬಂದ್ ಆಗುತ್ತೆ ಸುದ್ದಿ ಏಕೆ"
ಸದ್ಯದಲ್ಲಿಯೇ ಕಸ್ತೂರಿ ನ್ಯೂಸ್ ತನ್ನ ಕಾರ್ಯವನ್ನು ನಿಲ್ಲಿಸಲಿದೆ. ಯಾರೂ ಏನು ಸುದ್ದಿಗಳನ್ನು ಹಾಕಬೇಡಿ ಎಂದು ಕಸ್ತೂರಿ ಸುದ್ದಿ ವಾಹಿನಿಯ ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶವನ್ನು ಹಾಕಲಾಗಿದೆ. ಇದರಿಂದ ಜಿಲ್ಲಾ ವರದಿಗಾರರಲ್ಲೂ ಆತಂಕ ಮನೆ ಮಾಡಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಈ ಸಂಬಂಧ ಸಭೆ ನಡಸಲಾಗುತ್ತಿದ್ದು, ಕಚೇರಿ ಸಿಬ್ಬಂದಿಯಲ್ಲೂ ಗೊಂದಲ ಸೃಷ್ಟಿಸಿದೆ.
ಮ್ಯೂಸಿಕ್ ಮತ್ತು ಮೂವೀಸ್ ಚಾನೆಲ್ ಲಾಂಚ್?
ಕಸ್ತೂರಿ ಮೂವೀಸ್ ಹಾಗೂ ಕಸ್ತೂರಿ ಮ್ಯೂಸಿಕ್ ಚಾನೆಲ್ ಗಳನ್ನು ಲಾಂಚ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಈ ಹಿನ್ನೆಲೆ ಸಾಕಷ್ಟು ನಷ್ಟದಲ್ಲಿ ಇರುವ ಕಸ್ತೂರಿ ಸುದ್ದಿ ವಾಹಿನಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಆತಂಕದಲ್ಲಿ ಕಸ್ತೂರಿ ನ್ಯೂಸ್ ಚಾನೆಲ್ ಸಿಬ್ಬಂದಿ
ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತಾ ದುಸ್ಥಿತಿಯಲ್ಲಿ ಕಸ್ತೂರಿ ನ್ಯೂಸ್ ಚಾನೆಲ್ ಸಿಬ್ಬಂದಿ ಇದ್ದಾರೆ. ಭಾರತ ಲಾಕ್ ಡೌನ್ ಆಗಿ ಕೈಯಲ್ಲಿ ಹಣವಿಲ್ಲದೇ, ತುತ್ತು ಅನ್ನಕ್ಕೂ ಸರ್ಕಾರ ನೀಡುವ ರೇಷನ್ ಎದುರು ನೋಡುತ್ತಾ ಜನರು ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ ನೆಚ್ಚಿಕೊಂಡಿದ್ದ ಕೆಲಸವೂ ಎಲ್ಲಿ ಹೊರಟು ಹೋಗುತ್ತದೆಯೋ ಎಂಬ ಆತಂಕದಲ್ಲಿ ಚಾನೆಲ್ ಸಿಬ್ಬಂದಿಯಿದ್ದಾರೆ.
ಮಾಧ್ಯಮ ರಂಗಕ್ಕೆ ಮೊದಲ ಪೆಟ್ಟು ಕೊಟ್ಟಿತಾ ಕೊರೊನಾ?
ಕೊರೊನಾ ವೈರಸ್ ನಿಂದಾಗಿ ಉತ್ಪಾದನೆ ಪ್ರಮಾಣ ಕುಂಠಿತವಾಗಿದ್ದು ದೇಶದ ಆರ್ಥಿಕತೆ ಹದಗೆಟ್ಟು ಹೋಗುತ್ತದೆ. ಸಾಕಷ್ಟು ಕಾರ್ಖಾನೆಗಳು ಬಾಗಿಲು ಮುಚ್ಚಿಕೊಳ್ಳುವ ಆತಂಕವಿದೆ ಎಂದು ಮೊದಲೇ ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದರು. ಭಾರತ ಲಾಕ್ ಡೌನ್ ನಿಂದ ಎದುರಾಗುವ ಆರ್ಥಿಕ ಅಸಮತೋಲನ ನಿವಾರಣೆಗೆ ಕನಿಷ್ಠ ಒಂದು ವರ್ಷವಾದರೂ ಬೇಕಾಗಬಹುದು. ಮೊದಲೇ ನಷ್ಟ ಎದುರಿಸುತ್ತಿರುವ ಸುದ್ದಿ ಸಂಸ್ಥೆ ಭಾರತ ಲಾಕ್ ಡೌನ್ ನಿಂದ ಆದಾಯವಿಲ್ಲದ ಸೊರಗುವ ಆತಂಕ ಎದುರಿಸುತ್ತಿದೆ. ಇದರ ಪರಿಣಾಮವೇ ರಾಜ್ಯದ ಮೊದಲ ಸುದ್ದಿ ವಾಹಿನಿಗೆ ಪೆಟ್ಟು ಕೊಟ್ಟಂತೆ ಕಾಣುತ್ತಿದೆ.
ಕಸ್ತೂರಿ ಸುದ್ದಿ ವಾಹಿನಿ ಸಿಬ್ಬಂದಿ ಹೆಚ್ ಡಿಕೆ ನೀಡುತ್ತಾರಾ ಆಸರೆ?
ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪದೇ ಪದೆ ಸರ್ಕಾರವನ್ನು ಪರಿಹಾರದ ವಿಷಯಕ್ಕೆ ಟೀಕಿಸುತ್ತಾರೆ. ಅದೆಷ್ಟೋ ಬಾರಿ ರೈತ ಕುಟುಂಬಗಳಿಗೆ ತಮ್ಮದೇ ಸ್ವಂತ ಹಣವನ್ನು ಪರಿಹಾರವಾಗಿ ನೀಡಿದ್ದಾರೆ. ಕಾರ್ಮಿಕರು, ಅಸಹಾಯಕರ ಪರ ಧ್ವನಿ ಎತ್ತುವ ಮುಖ್ಯಮಂತ್ರಿಗಳೇ ಇಂದು ನಿಮ್ಮದೇ ಸಂಸ್ಥೆಯ ನೂರಾರು ಜನರು ಬೀದಿಯಲ್ಲಿ ನಿಲ್ಲುವಂತಾ ಸ್ಥಿತಿ ನಿರ್ಮಾಣವಾಗಿದೆ. ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ಸಿಬ್ಬಂದಿಗೆ ಅದ್ಯಾವ ರೀತಿ ಪರಿಹಾರ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.