Coronavirus Alert: ದುಬೈ To ಬೆಂಗಳೂರು ಪ್ರಯಾಣಿಕರೇ ಆಸ್ಪತ್ರೆಗೆ ಬನ್ನಿ!
ಬೆಂಗಳೂರು, ಮಾರ್ಚ್.19: ವಿದೇಶದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು ಇರುವುದು ನಾಲ್ಕು ದಿನಗಳ ನಂತರ ವೈದ್ಯಕೀಯ ತಪಾಸಣೆ ನಡೆಸಿದ ಬಳಿ ತಿಳಿದು ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಕೊಡಗು ಮೂಲದ 35 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಈ ವ್ಯಕ್ತಿಯ ಜೊತೆ ಪ್ರಯಾಣಿಸಿದ ಪ್ರಯಾಣಿಕರಿಗೂ ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಎಚ್ಚರಿಕೆ ಸಂದೇಶದ ಜೊತೆಗೆ ಸಲಹೆಯನ್ನು ನೀಡಿದೆ.
48 ಗಂಟೆ ಬಳಿಕ ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ಕನ್ಫರ್ಮ್!
ಕಳೆದ ಮಾರ್ಚ್.15ರಂದು ದುಬೈನಿಂದ ಹೊರಟು ಸಂಜೆ 4.15ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನ ಸಂಖ್ಯೆ 6E96ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಎಚ್ಚೆತ್ತುಕೊಳ್ಳಬೇಕು. ತಕ್ಷಣ ಸ್ವಯಂಪ್ರೇರಿತವಾಗಿ ಜಿಲ್ಲೆಗಳಲ್ಲಿ ತೆರೆದಿರುವ ಕೊರೊನಾ ವೈರಸ್ ಸೋಂಕು ತಪಾಸಣಾ ಕೇಂದ್ರಕ್ಕೆ ತೆರಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಕೆಎಸ್ಆರ್ ಟಿಸಿ ಬಸ್ ಏರಿದ ಪ್ರಯಾಣಿಕರೇ ಎಚ್ಚರ:
ಇನ್ನು, ಬೆಂಗಳೂರಿನ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ರಾತ್ರಿ 11.33 ನಿಮಿಷಕ್ಕೆ ಹೊರಟ ಕೊಡಗಿಗೆ ಹೊರಟ ಕೆಎಸ್ಆರ್ ಟಿಸಿಯ ರಾಜಹಂಸ KA 19, F.3170 ಬಸ್ ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಕೂಡಾ ಎಚ್ಚರಿಕೆ ವಹಿಸಬೇಕು. ವಿರಾಜಪೇಟೆ ಮುರ್ನಾಬಾದ್ ಮೂಲಕ ಸಂಚರಿಸಿದ ಈ ಬಸ್ ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಆದಷ್ಟು ಬೇಗ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.