ಜಾರಕಿಹೊಳಿ ಸಿಡಿ ಪ್ರಕರಣಕ್ಕೂ ಕೊರೋನಾ ಹೊಡೆತ !
ಬೆಂಗಳೂರು, ಏಪ್ರಿಲ್ 20: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಕೋವಿಡ್ ಎರಡನೇ ಅಲೆಗೆ ತಣ್ಣಗಾಗಿದೆ. ಸತತ ನಲವತ್ತು ದಿನಗಳ ಕಾಲ ಸುದ್ದಿ ಮಾಧ್ಯಮವನ್ನು ಆವರಿಸಿಕೊಂಡಿದ್ದ ಸಿಡಿ ಪ್ರಕರಣ ಇದೀಗ ಯಾಕೋ ಸೈಲೆಂಟ್ ಆಗಿದೆ. ಶಂಕಿತ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು ಕೂಡ ಮೌನಕ್ಕೆ ಶರಣಾಗಿದ್ದಾರೆ. ಕೊರೋನಾ ಸೋಂಕಿನಿಂದ ಹಾಸಿಗೆ ಹಿಡಿದ್ದ ಜಾರಕಿಹೊಳಿಗೆ ಇದೀಗ ಕೊರೋನಾ ಅಲೆ ಮತ್ತಷ್ಟು ವಿಶ್ರಾಂತಿ ನೀಡಿದಂತಾಗಿದೆ.
ಜಾರಕಿಹೊಳಿ ಗೈರು ? : ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ದೂರುದಾರ ಯುವತಿ ನೀಡಿರುವ ಆರೋಪ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ವಿಚಾರಣೆಗೆ ಸೋಮವಾರ ಹಾಜರಾಗಿಲ್ಲ ಎನ್ನಲಾಗಿದೆ. ಸಿಡಿ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಿದ ಬಳಿಕ ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಲಾಗಿತ್ತು.
ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಸ್ಐಟಿ ವಿಚಾರಣೆಗೆ ವಿನಾಯಿತಿ ಕೋರಿದ್ದರು. ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇಲ್ಲಿಯ ವರೆಗೂ ನಾಲ್ಕು ನೋಟಿಸ್ ನೀಡಿರುವ ಎಸ್ಐಟಿ ಅಧಿಕಾರಿಗಳು ಇದೀಗ ರಮೇಶ್ ಜಾರಕಿಹೊಳಿ ವಿಚಾರಣೆಗಾಗಿ ಕಾದು ಕುಳಿತಿದ್ದಾರೆ.
ಡೆಡ್ ಲೈನ್ : ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎಸ್ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿಗೆ ಇತ್ತೀಚೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಮೂಲಕ ನೋಟಿಸ್ ತಲುಪಿಸಲಾಗಿತ್ತು. ಏ. 20 ರಂದು ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದರು.
ವಿಚಾರಣೆಗೆ : ನನಗೆ ಸರ್ಕಾರಿ ಕೆಲಸದ ಅಮಿಷೆ ಒಡ್ಡಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರುದಾರ ಯುವತಿ ಅರೋಪಿಸಿದ್ದರು. ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ಕೂಡ ದಾಖಲಿಸಿದ್ದರು. ಆನಂತರ ಆಕೆಯನ್ನು ಸ್ಥಳ ಮಹಜರು ನಡೆಸಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ರಮೇಶ್ ಜಾರಕಿಹೊಳಿ ವಿಚಾರಣೆಗೆ ಮುಂದಾಗಿದ್ದರು. ಇದೇ ವೇಳೆ ತನೆಗೆ ಕೊರೋನಾ ಸೋಂಕು ತಗುಲಿದೆ ಎಂದು ಜಾರಕಿಹೊಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಿಚಾರಣೆಗೆ ಹಾಜರಾಗ್ತಾರಾ ? ಇಲ್ಲವೇ ಎಸ್ಐಟಿ ಅಧಿಕಾರಿಗಳೇ ವಶಕ್ಕೆ ಪಡೆಯುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ. ಅಂತೂ ಮಾಧ್ಯಮಗಳಿಂದ ಪ್ರಕರಣ ಮರೆಯಾಗಿರುವುದು ಸಿಡಿ ಪ್ರಕರಣದಾರರಿಗೆ ಮಾತ್ರ ವಿಶ್ರಾಂತಿ ಕೊಟ್ಟಂತಾಗಿದೆ.
Recommended Video