ಕೊರೊನಾ ಭೀತಿ: ವಿಧಾನಸಭೆ ಬಜೆಟ್ ಅಧಿವೇಶನ ಮುಂದೂಡಿಕೆ
ಬೆಂಗಳೂರು, ಮಾರ್ಚ್ 24: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನ ಸಭೆ ಬಜೆಟ್ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಮಾರ್ಚ್ 31 ರ ತನಕ ನಡೆಯಬೇಕಿದ್ದ ಅಧಿವೇಶನ ಮಾರ್ಚ್ 24 ಕ್ಕೆ ಮೊಟಕುಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಸಕ್ತ ಅಧಿವೇಶನದ ಸಂಕ್ಷಿಪ್ತ ವರದಿಯನ್ನು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿಯವರು ಓದಿದರು. ""21 ದಿನದ 106 ಗಂಟೆಗಳ ಕಾಲ ಅಧಿವೇಶನ ನಡೆಸಿರುವುದಾಗಿ'' ಸದನಕ್ಕೆ ಸ್ಪೀಕರ್ ತಿಳಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ 25 ಸದಸ್ಯರು ಚರ್ಚೆ ಮಾಡಿದ್ದಾರೆ. ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ 47 ಸದಸ್ಯರು ಭಾಗಿಯಾಗಿದ್ದಾರೆ ಎಂದು ಹೇಳಿದರು.
27 ಗಂಟೆ 46 ನಿಮಿಷಗಳ ಕಾಲ ಸಂವಿಧಾನದ ಮೇಲೆ ಚರ್ಚೆ ಮಾಡಲಾಗಿದ್ದು, ವಿಧಾನ ಮಂಡಲ ಸಮಿತಿಗಳ 12 ಸಮಿತಿಗಳ ವರದಿಗಳು ಮಂಡನೆಯಾಗಿವೆ. ಈ ಅಧಿವೇಶನದಲ್ಲಿ 26 ವಿಧೇಯಕಗಳು ಮಂಡನೆಯಾಗಿದ್ದು, ಈ ಪೈಕಿ 25 ವಿಧೇಯಕಗಳು ಅಂಗೀಕಾರಗೊಂಡಿವೆ ಎಂದು ಮಾಹಿತಿ ನೀಡಿದರು.
ಹಾಗೆಯೇ ಎಲ್ಲರೂ ನಮ್ಮ ನಮ್ಮ ಕ್ಷೇತ್ರಗಳಿಗೆ ಹೋಗೋಣ, ಬಳಿಕ ಸರ್ಕಾರದ ಸೂಚನೆಗಳನ್ನು ಪಾಲಿಸಿ, ಜನರ ಕಷ್ಟಗಳಿಗೆ ನೆರವಾಗುವುದರ ನಮಗೆ ನಾವೇ ಸ್ವಯಂ ನಿಯಂತ್ರಣ ಹಾಕಿಕೊಳ್ಳೋಣವೆಂದರು. ಎಲ್ಲರೂ ಮನೆಯಲ್ಲೇ ಇರಿ ಅಂತಾ ಸರ್ಕಾರ ಹೇಳಿದೆ, ಅದನ್ನು ನಾವೂ ಪಾಲಿಸೋಣ ಎಂದು ಸ್ಪೀಕರ್ ಕಾಗೇರಿ ಕಿವಿಮಾತು ಹೇಳಿದರು.