ಬಡ ಅರ್ಚಕರು, ಪುರೋಹಿತರಿಗೆ ಸರ್ಕಾರದ ನೆರವು ನೀಡುವಂತೆ ಮನವಿ
ಬೆಂಗಳೂರು, ಏಪ್ರಿಲ್ 2: ಕೊರೊನಾ ವೈರಸ್ ತಡೆಯುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಡದ ದೇವಸ್ಥಾನಗಳ ಅರ್ಚಕರು ಮತ್ತು ಪುರೋಹಿತರಿಗೆ ಯಾವುದೇ ಆದಾಯವಿಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ.
ಆದ್ದರಿಂದ ಅಂಥವರಿಗೆ ಅಗತ್ಯ ನೆರವು ನೀಡುವಂತೆ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರಿಗೆ ವೈದಿಕ ಚಾರಿಟಬಲ್ ಟ್ರಸ್ಟ್ ಶ್ರೀ ಮಹಾಲಕ್ಷ್ಮಿ ಗುರುಕುಲ ಸಂಸ್ಥಾಪಕ ಅಧ್ಯಕ್ಷ ಡಾ. ಕೆ. ಎನ್. ರಾಜಕುಮಾರ್ ಶಾಸ್ತ್ರಿ ಅವರು ಮನವಿ ಮಾಡಿದ್ದಾರೆ. ಆ ಮನವಿಯಲ್ಲಿ ಒಳಗೊಂಡಿರುವ ವಿಚಾರ ಹೀಗಿದೆ.
ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ
ಸಣ್ಣ- ಪುಟ್ಟ ದೇವಸ್ಥಾನಗಳಲ್ಲಿ ಅರ್ಚಕರಾಗಿ ಹಾಗೂ ಭಕ್ತರ ಮನೆಗಳಲ್ಲಿ ನಿತ್ಯ ಪೂಜಾ ಕಾಯಕವನ್ನು ಮಾಡುತ್ತಾ ಕಷ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದೆವು. ನಗರ ಪ್ರದೇಶ ಹಾಗೂ ಹಳ್ಳಿಗಾಡುಗಳಲ್ಲಿ ಮನೆ ಬಾಡಿಗೆ, ನೀರು, ವಿದ್ಯುತ್ ಬಿಲ್, ಮಕ್ಕಳ ವಿದ್ಯಾಭ್ಯಾಸ ಇತರೆ ಖರ್ಚು ವೆಚ್ಚಗಳಿಗೆ ಭಕ್ತಾದಿಗಳು ನೀಡುವ ಕಾಣಿಕೆಗಳಿಂದ ಸಾಮಾನ್ಯ ದಿನಗಳಲ್ಲೇ ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿತ್ತು.
ಈಗ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಲಾಕ್ ಡೌನ್ ಮಾಡಲಾಗಿದೆ. ಹಾಗಾಗಿ ಬಡ ಅರ್ಚಕರು, ಪುರೋಹಿತರು, ಬ್ರಾಹ್ಮಣರು ಜೀವನ ಸಾಗಿಸಲು ಕಷ್ಟವಾಗಿ ಕಂಗಾಲಾಗಿದ್ದಾರೆ. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಅರ್ಚಕರು ಮತ್ತು ಪುರೋಹಿತರಿಗೆ ಮಾಸಿಕ ಧನ ಸರ್ಕಾರ ಕೊಡುತ್ತಿಲ್ಲ. ಇಂಥವರಿಗೂ ಜೀವನ ಸಾಗಿಸುವುದು ಕಷ್ಟಕರವಾಗಿದೆ.
ಹಾಗಾಗಿ ಹತ್ತಾರು ವರ್ಷಗಳ ಮೇಲೆ ಸೇವೆಯನ್ನು ಸಲ್ಲಿಸಿರುವ ಬಡ ಪುರೋಹಿತರಿಗೆ, ಅರ್ಚಕರಿಗೆ ಸರ್ಕಾರದಿಂದ ನೆರವು, ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘದ ರಾಜ್ಯಾಧ್ಯಕ್ಷ ವಿದ್ವಾನ್ ಚಂದ್ರಶೇಖರ ಶಾಸ್ತ್ರಿ, ಬ್ರಾಹ್ಮಣ ಅರ್ಚಕ ಪುರೋಹಿತರ ಒಕ್ಕೂಟದ ಅಧ್ಯಕ್ಷರಾದ ನರಸಿಂಹ ಗೋಪಾಲಕೃಷ್ಣ ಭಟ್ಟರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಕೋಡಿ ಕೊಪ್ಪಲು ಅವರು ಮನವಿ ಮಾಡಿದ್ದಾರೆ.