ಲಾಕ್ಡೌನ್ ಆರ್ಥಿಕ ಪ್ಯಾಕೇಜ್ ಘೋಷಿಸಿ, ಸಿಎಂಗೆ ಎಎಪಿ ಸಲಹೆ
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆ ಕೂಡ ಜನತೆಯನ್ನು ಭಯಕ್ಕೆ ತಳ್ಳಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ, ಆಂಬುಲೆನ್ಸ್ ಇಲ್ಲದೆ ಬಳಲಿ ಹೋಗಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ನಡುವೆ ರಾಜ್ಯ ಸರಕಾರ ಲಾಕ್ ಡೌನ್ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಆದರೆ ತಜ್ಞರ ಯಾವುದೇ ಸಲಹೆ ಸೂಚನೆಗಳನ್ನು ಆಲಿಸದೆ ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಕೆಲವು ಸಲಹೆಗಳನ್ನು ನೀಡಲು ಇಚ್ಚಿಸುತ್ತದೆ.
* ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಜಾರಿ ಮಾಡಿದ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ಜನತೆ ಹೊಟ್ಟೆಗಿಲ್ಲದೆ ಕಷ್ಟ ಪಟ್ಟಿದ್ದರು. ಇದಕ್ಕೆ ಪೂರ್ವ ತಯಾರಿ ಇಲ್ಲದೇ ಇದ್ದದ್ದೇ ಕಾರಣ. ಆದರೆ ಇಂದು ಸರಕಾರಕ್ಕೆ ಲಾಕ್ ಡೌನ್ ಅನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವಿದೆ. ಹೀಗಾಗಿ ಆಟೋ ಡ್ರೈವರ್, ಪೌರ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರಿಗೆ 5000 ರೂಪಾಯಿಗಳ ಸಹಾಯಧನವನ್ನು ನೀಡಬೇಕು. ಈ ಮೂಲಕ ಇನ್ನೊಮ್ಮೆ ಅವರು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬೇಕು, ಹೊಟ್ಟೆಗಿಲ್ಲದೆ ಜನ ಸತ್ತರೆ ನಾಗರಿಕ ಸಮಾಜ ತಲೆ ತಗ್ಗಿಸಬೇಕಾಗುತ್ತದೆ!
* ಇಂದಿರಾ ಕ್ಯಾಂಟೀನ್ನ ಊಟವನ್ನು ನಂಬಿ ಅನೇಕರು ಬದುಕುತ್ತಿದ್ದಾರೆ. ಈಗ ಇಂದಿರಾ ಕ್ಯಾಂಟೀನ್ ಮುಚ್ಚುವ ಮೂಲಕ ಅವರ ಹೊಟ್ಟೆಯ ಮೇಲೆ ಹೊಡೆದಂತೆ ಆಗಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಕನಿಷ್ಟ ಆಹಾರವಾದರೂ ಸಿಗುವಂತೆ ಮಾಡಲು ತಕ್ಷಣ ಇಂದಿರಾ ಕ್ಯಾಂಟೀನ್ ಅನ್ನು ತೆರೆಯಬೇಕು.
* ಪಡಿತರದಲ್ಲಿ ನೀಡುವ ಅಕ್ಕಿಯ ಪ್ರಮಾಣ 10 ಕೆಜಿ ಯಿಂದ ಈಗ 2 ಕೆಜಿ ಗೆ ಇಳಿಸಲಾಗಿದೆ. ಈ ಅಕ್ಕಿಯಿಂದ ಒಂದು ಕುಟುಂಬವನ್ನು ನಿರ್ವಹಿಸಲು ಸಾಧ್ಯವೇ? ಪಡಿತರ ಅಕ್ಕಿ ಪ್ರಮಾಣವನ್ನು ಸರಕಾರ ತಕ್ಷಣ ಏರಿಸಬೇಕು.
* ರಾಜ್ಯ ಸರಕಾರದ ಸದ್ಯದ ಗುರಿ ಕೊರೋನ ಸೋಂಕು ನಿಯಂತ್ರಿಸಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು. ಆದರೆ ಸರಕಾರ ಇನ್ನೂ ಸದ್ಯದ ಅಗತ್ಯವಲ್ಲದ ಕಾಮಗಾರಿಗಳ ಮೇಲೆ ಹಣ ವ್ಯಯಿಸುತ್ತಿದೆ. ಹೀಗಾಗಿ ಆಸ್ಪತ್ರೆಗಳು ಆಕ್ಸಿಜನ್, ಬೆಡ್, ಔಷಧ ಮೊದಲಾದ ಕೊರತೆಗಳನ್ನು ಎದುರಿಸುತ್ತಿವೆ. ಸರಕಾರ ಮೆಟ್ರೋ ಮೊದಲಾದ ಕಾಮಗಾರಿಗಳನ್ನು ನಿಲ್ಲಿಸಿ ಆ ಹಣವನ್ನು ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳಿ.
* ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದೆ. ನಿಮ್ಮದೇ ಪಕ್ಷದ ಮಂತ್ರಿಗಳು, ಎಂಎಲ್ಎ ಗಳು ತಮ್ಮ ಹಿಂಬಾಲಕರ ಜೊತೆ ಗುಂಪು ಗುಂಪಾಗಿ ಪ್ರಚಾರ ಮಾಡುತ್ತಿದ್ದಾರೆ. ಶ್ರೀ ರಾಮುಲು ಅವರು ನೂರಾರು ಜನ ಹಿಂಬಾಲಕರ ಜೊತೆ ಓಡಾಡುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿಯವರೂ ಇದಕ್ಕೆ ಹೊರತಾಗಿಲ್ಲ. ಈ ರೀತಿ ಹಿಂಡು ಹಿಂಡಾಗಿ ಸಂಚಾರ ಹೋಗುವುದನ್ನು ಮೊದಲು ನಿಮ್ಮ ಪಕ್ಷದ ನಾಯಕರು ನಿಲ್ಲಿಸಲಿ.
* ರಾಜ್ಯದಾದ್ಯಂತ ಎರಡು ದಿನಗಳಿಗೊಮ್ಮೆ ಸ್ಯಾನಿಟೇಷನ್ ಮಾಡಿಸಿ. ಇದರ ಜವಾಬ್ದಾರಿಯನ್ನು ಆಯಾ ಪ್ರದೇಶಗಳ ಎಂಎಲ್ಎಗಳಿಗೆ ನೀಡಿ.
* ಕೊರೊನಾ ಸೋಂಕಿನಿಂದ ಸತ್ತವರ ದೇಹವನ್ನು ಮುಖ ಸಮೇತ ಸಂಪೂರ್ಣವಾಗಿ ಮುಚ್ಚಿ ಮನೆಯವರಿಗೂ ಅವರ ಮುಖ ಕಾಣದ ಹಾಗೆ ಮಾಡಲಾಗುತ್ತಿದೆ. ಇದರಿಂದ ಕುಟುಂಬದವರಿಗೆ ಅಂತಿಮ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ! ಹೀಗಾಗಿ ಮೃತ ದೇಹದ ಮುಖವನ್ನು ಪಾರದರ್ಶಕ ವಸ್ತುವಿನಿಂದ ಹೊರಗೆ ಕಾಣುವಂತೆ ಮುಚ್ಚಬೇಕು.
Recommended Video
* ದೆಹಲಿ ಸರಕಾರ ಸೋಂಕು ನಿಯಂತ್ರಣಕ್ಕೆ ಕೈಗೊಂಡ ನಿರ್ಧಾರಗಳು, ಸೊಂಕಿತರ ಸಂಖ್ಯೆ, ಆರೋಗ್ಯ ಸೌಲಭ್ಯ ಮೊದಲಾದ ಮಾಹಿತಿಗಳನ್ನು ಸ್ವತಃ ಮುಖ್ಯಮಂತ್ರಿಗಳೇ ನೀಡುತ್ತಿದ್ದಾರೆ. ನಮ್ಮ ರಾಜ್ಯ ಸರಕಾರ ಯಾಕೆ ಯಾವುದೇ ಮಾಹಿತಿ ನೀಡುತ್ತಿಲ್ಲ? ರಾಜ್ಯ ಸರಕಾರ ಕೂಡ ಎಲ್ಲಾ ಮಾಹಿತಿಗಳನ್ನು ಜನತೆಯ ಮುಂದಿಡಬೇಕು ಎಂದು ಎಎಪಿ ಮುಖಂಡ ಲಕ್ಷ್ಮಿಕಾಂತ್ ರಾವ್ ಆಗ್ರಹಿಸಿದ್ದಾರೆ.