ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಇಬ್ಬರು ವೈದ್ಯರು ಸೇರಿ ನಾಲ್ವರ ಬಂಧನ
ಬೆಂಗಳೂರು, ಮೇ. 05: ಕೊರೊನಾ ಸೋಂಕು ಸಂಬಂಧ ಸರ್ಕಾರದ ಕೋಟಾದ ಹಾಸಿಗೆ ಬ್ಲಾಕಿಂಗ್ ದಂಧೆ ಪ್ರಕರಣ ತನಿಖೆ ಕೈಗತ್ತಿಕೊಂಡಿರುವ ಸಿಸಿಬಿ ಪೊಲೀಸರು ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ವೈದ್ಯ ಡಾ. ರೆಹಾನ್, ಡಾ. ಸುರೇಶ್ ಬಂಧನಕ್ಕೆ ಒಳಗಾಗಿದ್ದಾರೆ. ಇದರ ಜತೆಗೆ ಬಿಬಿಎಂಪಿ ವಾರ್ ರೂಮ್ಗೆ ಸಿಬ್ಬಂದಿಯನ್ನು ಒದಗಿಸಿದ್ದ ಕ್ರಿಸ್ಟೆಲ್ ಇನ್ಫೋಟಿಕ್ ಕಂಪನಿ ಮಾಲೀಕ ವಿಜಯ ಕುಮಾರ್ ಸೇರಿದಂತೆ ಒಟ್ಟು ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ. ಇತರೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ತನಿಖೆ ಆರಂಭಿಸಿದ ಸಿಸಿಬಿ
ಮಂಗಳವಾರ ಬೆಡ್ ಬ್ಲಾಕ್ ದಂಧೆ ಹೊರ ಬರುತ್ತಿದ್ದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊರೊನಾ ಪರಿಸ್ಥಿತಿ ಲಾಭ ಮಾಡಿಕೊಂಡು ಬಡವರ ಜೀವದ ಜತೆ ಆಟ ವಾಡುತ್ತಿದ್ದ ಈ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದಾರೆ. ಸಿಸಿಬಿ ಪೊಲೀಸರು ತನಿಖೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್ ಮೇಲೆ ದಾಳಿ ನಡೆಸಿ ಈವರೆಗೂ ಕೊರೊನಾ ರೋಗಿಗಳಿಗೆ ಬೆಡ್ ಅಲಾಟ್ಮೆಂಟ್ ದಾಖಲೆಗಳು, ಬೆಡ್ ಕೋರಿ ಬಂದಿದ್ದ ಕರೆಗಳ ವಿವರ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಸೀಟುಗಳನ್ನು ಮಂಜೂರು ಮಾಡುತ್ತಿದ್ದ ಬೊಮ್ಮನಹಳ್ಳಿ ವಲಯದ ಡಾ. ಸುರೇಶ್ ಹಾಗೂ ದಕ್ಷಿಣ ವಲಯದ ಡಾ. ರೆಹಾನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Recommended Video
ಮಾಗಡಿ ರಸ್ತೆಯಲ್ಲಿರುವ 108 ಆರೋಗ್ಯ ಕವಚ ಆಂಬುಲೆನ್ಸ್ ಕಾಲ್ಸೆಂಟರ್ಗೆ ಭೇಟಿ ನೀಡಿರುವ ಸಿಸಿಬಿ ಪೊಲೀಸರು ಅಲ್ಲೂ ಸಹ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಂಸದ ತೇಜಸ್ವಿ ಸೂರ್ಯ ಪ್ರಸ್ತಾಪಿಸಿದ್ದ ದಕ್ಷಿಣ ವಲಯದ ಬಿಬಿಎಂಪಿ ವಾರ್ರೂಮ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹದಿನೇಳು ಸಿಬ್ಬಂದಿಯನ್ನು ಕೂಡ ಕೆಲಸದಿಂದ ವಜಾ ಮಾಡಲಾಗಿದೆ.