ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ: ಸಿಸಿಬಿ ಪೊಲೀಸರಿಂದ ಎಂಟು ವಾರ್ ರೂಮ್ ಡೇಟಾ ಅನ್ವೇಷಣೆ
ಬೆಂಗಳೂರು, ಮೇ. 06: ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿದ್ದ ಸರ್ಕಾರಿ ಕೋಟಾದ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆಗೆ ಚುರುಕು ಮುಟ್ಟಿಸಿದ್ದಾರೆ. ಬೆಂಗಳೂರಿನ ಎಂಟು ಕೋವಿಡ್ ವಾರ್ ರೂಮ್ಗಳ ಮೇಲೆ ದಾಳಿ ನಡೆಸಿ ಕೋವಿಡ್ ರೋಗಿಗಳ ಡಾಟಾ, ಪೋನ್ ಕರೆಗಳ ವಿವರವನ್ನು ಸಂಗ್ರಹಿಸಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಮೀಲಾಗಿರುವ ನಾಲ್ಕು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊರೊನಾ ಬೆಡ್ ಬ್ಲಾಕಿಂಗ್ ದಂಧೆ ಸಂಬಂಧ ಬೆಂಗಳೂರಿನ ಎಂಟು ಬಿಬಿಎಂಪಿ ಕೋವಿಡ್ ವಾರ್ ರೂಮ್ಗಳ ಮೇಲೆ ದಾಳಿ ನಡೆಸಿ ಡಾಟಾ ಸಂಗ್ರಹಿಸಲಾಗಿದೆ. ಪ್ರತಿ ವಲಯದ ಕಚೇರಿಯ ವಿವರಗಳನ್ನು ವಿಶ್ಲೇಷಣೆ ಮಾಡಿ ತನಿಖೆ ನಡೆಸಲು ಪೊಲೀಸ್ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಎಂಟು ತಂಡ ರಚನೆ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇನ್ನು ಬಂಧನಕ್ಕೆ ಒಳಗಾಗಿರುವ ನಾಲ್ವರನ್ನು ತನಿಖೆಗೆ ಒಳಪಡಿಸಲಾಗಿದೆ.
ಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು
ಯಾವ ರೀತಿಯ ದಂಧೆ: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಕೋವಿಡ್ ಬೆಡ್ಗಳನ್ನು ಮೀಸಲಿಡಲಾಗಿತ್ತು. ಆದರೆ ಈ ಬೆಡ್ಗಳನ್ನು ಪಡೆಯಬೇಕಾದರೆ ಬಿಬಿಎಂಪಿ ಕಂಟ್ರೋಲ್ ರೂಮ್ಗೆ ಕರೆ ಮಾಡಿದ ಕೋವಿಡ್ ಸೋಂಕಿತರಿಗೆ ಅವರ ಬಿಯು ನಂಬರ್ ಆಧಾರದ ಮೇಲೆ ಬೆಡ್ ನೀಡಬೇಕಿತ್ತು. ಆದರೆ, ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರದ ಕೋಟಾದಡಿಯ ಬೆಡ್ಗಳನ್ನು ತುಂಬದಂತೆ ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ವಾರ್ ರೂಮ್ನಲ್ಲಿ ಕೆಲಸ ಮಾಡುವ ಬಿಬಿಎಂಪಿ ಅಧಿಕಾರಿಗಳನ್ನು ಬುಕ್ ಮಾಡಿದ್ದರು.
ಹೀಗಾಗಿ ಸರ್ಕಾರದ ಕೋಟಾದಡಿಯ ಬೆಡ್ ಗಳು ಖಾಲಿಯಿಲ್ಲದಂತೆ ಬಿಬಿಎಂಪಿ ಪೋರ್ಟಲ್ ನಲ್ಲಿ ನಿರ್ವಹಣೆ ಮಾಡುತ್ತಿದ್ದರು. ವಾಸ್ತವದಲ್ಲಿ ಖಾಲಿಯಿರುತ್ತಿದ್ದ ಸರ್ಕಾರಿ ಕೋಟಾದಡಿಯ ಬೆಡ್ ಗಳನ್ನು ಖಾಸಗಿಯಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ನೀಡಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಬೆಂಗಳೂರಿನ ಎಂಟು ವಲಯದ ಕೋವಿಡ್ ವಾರ್ ರೂಮ್ಗಳ ಡಾಟಾ ಸಂಗ್ರಹಿಸಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸರ್ಕಾರಿ ಕೋಟಾದಡಿಯ ಬೆಡ್ಗಳನ್ನು ಜನ ಪ್ರತಿನಿಧಿಗಳೇ ತಮ್ಮ ಪ್ರಭಾವ ಬಳಿಸಿ ಪರಿಚಿತರಿಗೆ ಕೊಡಿಸಿದ್ದರು. ಹೀಗಾಗಿ ವಾಸ್ತವದಲ್ಲಿ ಯಾರಿಗೆ ಬೆಡ್ ಮಂಜೂರು ಮಾಡಲಾಗಿತ್ತೋ ಅವರು ಚಿಕಿತ್ಸೆಯೇ ಪಡೆದಿರರಿಲ್ಲ. ಹೀಗಾಗಿ ಈ ಅಕ್ರಮವನ್ನು ಜನ ಪ್ರತಿನಿಧಿಗಳೇ ಎಸಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಂತೂ ಸಿಸಿಬಿ ಪೊಲೀಸರು ಸಂಗ್ರಹಿಸಿರುವ ಡಾಟಾ ಅನ್ವೇಷಣೆ ಮಾಡಿದರೆ, ಈ ಅಕ್ರಮದ ಹೂರಣ ಬಯಲಿಗೆ ಬರಲಿದೆ.
Recommended Video
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಮೂಲಕ ಬಯಲಿಗೆ ಎಳೆದಿರುವ ಬೆಡ್ ಬ್ಲಾಕಿಂಗ್ ದಂಧೆ ಇದೀಗ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಕ್ಕೂ ನಾಂದಿ ಹಾಡಿದೆ. ಇದರಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರು ಕೇಳಿ ಬಂದಿದ್ದು, ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿಗೆ ಟಾಂಗ್ ನೀಡಿದೆ. ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕ್ ದಂಧೆ ಬಗ್ಗೆ ವಿವರ ನೀಡುವಾಗ ಶಾಸಕ ಸತೀಶ್ ರೆಡ್ಡಿ ಕೂಡ ಹಾಜರಿದ್ದರು. ಅವರು ಕೂಡ ಈ ಅಕ್ರಮದ ಬಗ್ಗೆ ಮಾತನಾಡಿದ್ದರು. ಸತೀಶ್ ರೆಡ್ಡಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.