ಮುಂಚೂಣಿ ಸೇವೆಯಲ್ಲಿ ಕೊರೊನಾ ಆಂಬ್ಯುಲೆನ್ಸ್ ವಾರಿಯರ್ಸ್
ಬೆಂಗಳೂರು, ಏಪ್ರಿಲ್ 28: ಕೊರೊನಾ ವೈರಸ್ ಭೀತಿ ಇಡೀ ವಿಶ್ವವನ್ನೇ ಆವರಿಸಿರುವ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಜನತೆ ಒಂದಾಗಿ ಈ ಮಹಾಮಾರಿಯನ್ನು ಹೊಡೆದಟ್ಟಲು ಸಮರವನ್ನೇ ಸಾರಿದ್ದಾರೆ. ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿರುವುದು ಆರೊಗ್ಯ ಇಲಾಖೆಯ ಆಂಬ್ಯುಲೆನ್ಸ್ ತಂಡ. ಇವರಿಲ್ಲದಿದ್ದರೆ ರೋಗಿಗಳನ್ನು, ಶಂಕಿತರನ್ನು ಸಾಗಿಸಲು ಸಾಧ್ಯವೇ ಇಲ್ಲದಂತಾಗುತ್ತಿತ್ತು.
Recommended Video
ಏಕೆಂದರೆ ತಮ್ಮ ಮನೆ ಸಮೀಪ ಕ್ವಾರಂಟೈನ್ ನಲ್ಲಿರುವವರು ವಾಸಿಸುವುದಕ್ಕೂ, ಕೋವಿಡ್-19 ಪರೀಕ್ಷೆ ನಡೆಸಲೂ, ಕೊನೆಗೆ ಸತ್ತ ಹೆಣಗಳನ್ನು ಹೂಳಲೂ ಕೂಡ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಆಂಬ್ಯುಲೆನ್ಸ್ ಸಿಬ್ಬಂದಿ ಕೋವಿಡ್ ಶಂಕಿತರು, ಸೋಂಕಿತರನ್ನು ಸಾಗಿಸಲು ತಮ್ಮ ಜೀವವನ್ನೇ ಪಣಕ್ಕಿಡಬೇಕಾಗಿದೆ.
ಕೊರೊನಾ ಕಾರ್ಯಾಚರಣೆಗಾಗಿ ಆಂಬ್ಯುಲೆನ್ಸ್ ಮೀಸಲು
ಇದಕ್ಕೆ ಪೂರಕವಾಗಿ ಕಂಪನಿಯೂ ಕೂಡ ಎಲ್ಲ ಸಿಬ್ಬಂದಿಗಳಿಗೆ ಮದ್ಯಾಹ್ನ ಮತ್ತು ರಾತ್ರಿ ಉಚಿತ ಊಟ, ನೀರು ಒದಗಿಸಿಕೊಟ್ಟಿದೆ. ಈ ಕುರಿತು ಒನ್ಇಂಡಿಯಾ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ಜಿವಿಕೆ ಇಎಂಅರ್ಐ ನ ಕರ್ನಾಟಕ ವಿಭಾಗದ ಮುಖ್ಯಸ್ಥ ಹನುಮಂತ ಅವರು, ಕೋವಿಡ್ ಕಾಣಿಸಿಕೊಂಡ ಮೊದಲ ದಿನದಿಂದಲೇ ಸಿಬ್ಬಂದಿಗಳನ್ನು ಸುಸಜ್ಜಿತವಾಗಿ ಇರಿಸಲಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 56 ಆಂಬ್ಯುಲೆನ್ಸ್ ಗಳನ್ನು ಕೊರೊನಾ ಕಾರ್ಯಾಚರಣೆಗಾಗಿಯೇ ಮೀಸಲಿಡಲಾಗಿದೆ ಎಂದರು.
ದಿನದ ೧೨ ಗಂಟೆ ನಿರಂತರ ಸೇವೆ
ಇದರಲ್ಲಿ 50 ವಾಹನಗಳನ್ನು ಖಾಸಗಿ ಅವರಿಂದ ಪಡೆಯಲಾಗಿದೆ. ಮೈಸೂರಿಗೆ 6 ವಾಹನ ನೀಡಲಾಗಿದೆ ಎಂದ ಅವರು, ಒಟ್ಟು 400 ಸಿಬ್ಬಂದಿಗಳು ಸಂಪೂರ್ಣ ಕೋವಿಡ್ ಹೋರಾಟದಲ್ಲಿ ತೊಡಗಿದ್ದು, ಎಲ್ಲರಿಗೂ ಊಟದ, ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಿಬ್ಬಂದಿಗಳಿಗೆ 12 ಗಂಟೆಯ ಡ್ಯೂಟಿ ಇದ್ದರೂ, ಕೆಲವೊಮ್ಮೆ ತಡವಾದರೂ ಬೇಸರಿಸಿಕೊಳ್ಳದೆ, ವೀಕ್ಲಿ ಆಫ್ ಇದ್ದಾಗಲೂ ಕೂಡ ತುರ್ತು ಸೇವೆಗೆ ಹಾಜರಾಗುತಿದ್ದಾರೆ ಎಂದು ತಿಳಿಸಿದರು.
ಕ್ಲಿಷ್ಟಕರ ಸಂದರ್ಭದಲ್ಲೂ ಸೇವೆ
ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣದ ರೋಗಿಯನ್ನು ಮಾರ್ಚ್ 5 ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದಿನವರೆಗೂ ಒಟ್ಟು 700 ಕ್ಕೂ ಅಧಿಕ ಕೋವಿಡ್ ಸೋಂಕಿತ, ಶಂಕಿತರನ್ನು ಸಾಗಿಸಿರುವ ಹೆಗ್ಗಳಿಕೆ ಈ ಪಡೆಯದ್ದಾಗಿದೆ. ಈ ಕ್ಲಿಷ್ಟಕರ ಸಂದರ್ಭದಲ್ಲೂ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಜಿವಿಕೆ ಇಎಮ್ಅರ್ಐ ನ ಸಿಬ್ಬಂದಿ ಯಾವುದೇ ಹಿಂಜರಿಕೆ ಇಲ್ಲದೆ ತಮ್ಮನ್ನು ತಾವು ತೊಡಗಿಸಿಕೊಂಡು ಗಂಟೆಗಳ ಅವಧಿ ಲೆಕ್ಕಿಸದೆ ಸೇವೆ ಮಾಡಿ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ.
ಪಿಪಿಇ ಕಿಟ್ ಗಳನ್ನು ನೀಡಲಾಗಿದೆ
ಈ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಗಳು, ಸ್ಯಾನಿಟೈಸರ್ಸ್, ಎಲ್ಲ ಅಗತ್ಯ ವಸ್ತುಗಳನ್ನೂ ನೀಡಲಾಗಿದೆ. ಪ್ರತಿ ಶಂಕಿತರನ್ನು ಸಾಗಿಸಿದ ಕೂಡಲೇ ಪಿಪಿಇ ಕಿಟ್ ಗಳನ್ನು ನಾಶಪಡಿಸಿ ವಾಹನವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಲ್ಲಿಯವರೆಗೂ ಒಬ್ಬ ಸಿಬ್ಬಂದಿಯೂ ಕೋವಿಡ್ ಸೋಂಕಿಗೆ ಒಳಗಾಗಿಲ್ಲ ಎಂದು ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಎನ್.ಯತೀಶ್ ಹೇಳಿದರು.