ಕಿರಾತಕ ಗುಂಡನ ಕಾಲಿಗೆ ಗುಂಡು ಹಾರಿಸಿ ಬಂಧನ
ಬೆಂಗಳೂರು, ಜನವರಿ 07: ರಾತ್ರಿ ವೇಳೆ ಓಡಾಡುವ ಸಾರ್ವಜನಿಕರಿಗೆ ಚಾಕುವಿನಿಂದ ಹೆದರಿಸಿ ದರೋಡೆ ಮಾಡುತ್ತಿದ್ದ ಕಿರಾತಕ ಕಾರ್ತಿಕ್ ಅಲಿಯಾಸ್ ಗುಂಡ ಎಂಬುವನ ಕಾಲಿಗೆ ಗುಂಡು ಹಾರಿಸಿ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಗುಂಡ ಅಲಿಯಾಸ್ ಕಾರ್ತೀಕ್ ತನ್ನ ಇಬ್ಬರು ಸಹಚರರ ಜತೆಗೂಡಿ ಯಶವಂತಪುರದ ಸಮೀಪ ಸಾರ್ವಜನಿಕರನ್ನು ಅಡ್ಡಗಟ್ಟಿ ಸರಣಿ ದರೋಡೆ ಮಾಡಿದ್ದ.
Recommended Video
ಈ ಕುರಿತು ಖಚಿತ ಮಾಹಿತಿ ಆಧರಿಸಿ ನಂದಿನಿ ಲೇಔಟ್ ಪೊಲೀಸರು ಬದ್ರಿ ಎಂಬಾತನನ್ನು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ತಲೆ ಮರೆಸಿಕೊಂಡಿದ್ದ ಕಾರ್ತಿಕ್ ಅಲಿಯಾಸ್ ಗುಂಡನ ಬಂಧನಕ್ಕೆ ನಂದಿನಿ ಲೇಔಟ್ ಪೊಲೀಸ್ ಇನ್ ಸ್ಪೆಕ್ಟರ್ ಲೋಹಿತ್ ಮತ್ತು ತಂಡ ಕಾರ್ಯಾಚರಣೆ ನಡೆಸಿತ್ತು. ಎಂಟು ದರೋಡೆ, ಕೊಲೆ ಯತ್ನ ಪ್ರಕರಣ ಎದುರಿಸುತ್ತಿರುವ ಕಾರ್ತೀಕ್ ಶ್ರೀರಾಂಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು.ಇದರ ಆಧಾರದ ಮೇಲೆ ಸಬ್ ಇನ್ಸ್ಪೆಕ್ಟರ್ ನಿತ್ಯಾನಂದಚಾರಿ ಮತ್ತು ತಂಡ ಕಾರ್ತೀಕ್ ಬಂಧನಕ್ಕೆ ತೆರಳಿತ್ತು. ಓಕಳೀಪುರಂ ಸಮೀಪ ಇದ್ದ ಕಾರ್ತಿಕ್ ನನ್ನು ಶರಣಾಗಲು ಪೊಲೀಸರು ಸೂಚಿಸಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದ ಕಾರ್ತೀಕ್ ಪೊಲೀಸ್ ಪೇದೆ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮ ರಕ್ಷಣೆಗಾಗಿ ಸಬ್ ಇನ್ ಸ್ಪೆಕ್ಟರ್ ನಿತ್ಯಾನಂದಚಾರಿ ಕಾರ್ತಿಕ್ ನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳು ಆರೋಪಿಯನ್ನು ಸಮೀಪದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪೇದೆ ಕೂಡ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ: ಬಂಧಿತ ಇಬ್ಬರು ಆರೋಪಿಗಳು ಮಧ್ಯ ರಾತ್ರಿ ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ನಡೆದುಕೊಂಡು ಹೋಗುವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಹಣ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಹಣ ಕೊಡಲು ನಿರಾಕರಿಸಿದವರಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡುತ್ತಿದ್ದರು. ಕಳೆದ ಭಾನುವಾರ ಆರ್ಎಂಸಿ ಯಾರ್ಡ್ ಬಳಿ ದರೋಡೆ ಮಾಡಿದ್ದಾರೆ. ಆನಂತರ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಅಪರಾಧ ಕೃತ್ಯ ಎಸಗಿದ್ದರು ಎಂದು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.