ಗಾರೆ ಕೆಲ್ಸ ಮಾಡಿ ಬನ್ನಿ ಸರ್ ಸಂಕಟ ಗೊತ್ತಾಯ್ತದೆ: ಟ್ರಾಫಿಕ್ ಪೊಲೀಸರೆದುರು ಮಹಿಳೆಯ ಕಣ್ಣೀರು
ಬೆಂಗಳೂರು, ಡಿಸೆಂಬರ್ 30: ದೊಡ್ಡವರಿಗೆ ಇಲ್ಲದ ಕೊರೊನಾ ನಿಯಮ ಬಡವರಿಗೆ ಮಾತ್ರನಾ ಬನ್ನಿ ಸರ್ ಗಾರೆ ಕೆಲಸ ಮಾಡಿ ಗೊತ್ತಾಯ್ತದೆ ಎಂದು ಪೊಲೀಸರೆದುರು ಬಡ ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದಾರೆ.
ಮಹಿಳೆಯ ಕಣ್ಣೀರಿಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದೆ ಓದಿ..ತಾಯಿಯೊಬ್ಬರು ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ಗಾರೆ ಕೆಲಸಕ್ಕಾಗಿ ಬಂದಿದ್ದರು, ಕೊರೊನಾ ವಿರುದ್ಧ ಹೋರಾಟಕ್ಕಿಳಿದಿರುವ ಬಿಬಿಎಂಪಿ ಮಾಸ್ಕ್ ಇಲ್ಲವೆಂದು 250 ರೂ ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಇದಕ್ಕೆ ಮಹಿಳೆ ಪೊಲೀಸರಿಗೆ ಕಣ್ಣೀರ ಶಾಪ ಹಾಕಿದ್ದಾರೆ.
ದೊಡ್ಡವರಿಗೆ ಇಲ್ಲದ ಕೊರೊನಾ ನಿಯಮ ಬಡವರಿಗೆ ಮಾತ್ರನಾ, ಹಣ ವಸೂಲಿ ದಂಧೆಗೆ ಇಳಿದಿರುವ ಆಡಳಿತಕ್ಕೆ ಬುದ್ಧಿಹೇಳುವವರು ಯಾರಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲವರು ಬಿಬಿಎಂಪಿಯು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದೆ ಅವರ ಕೆಲಸವನ್ನು ಅವರು ನಿರ್ವಹಿಸಿದ್ದಾರೆ ಎಂದು ಹೇಳಿದರೆ, ಬಹುತೇಕ ಮಂದಿ ನಿಯಮಕ್ಕಿಂತ ಮಾನವೀಯತೆ ಮೇಲು, ಆಕೆಗೆ ಪೊಲೀಸರೇ ಮಾಸ್ಕ್ ಕೊಟ್ಟು, ಬಿಟ್ಟುಕಳುಹಿಸಬಹುದಿತ್ತು, ಅವರೆಲ್ಲರೂ ಅಂದು ದುಡಿದು ಅಂದು ತಿನ್ನುವವರು, 250ರೂ ದಂಡ ಅವರ ಕುಟುಂಬದ ಒಂದು ದಿನದ ಊಟವನ್ನು ಕಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸಂದರ್ಭದಲ್ಲೂ ನಿಯಮಗಳನ್ನು ಪಾಲಿಸುವುದು ಅಸಾಧ್ಯ, ಮಾನವೀಯತೆಯಿಂದ ಹಲವು ಜೀವವನ್ನು ಉಳಿಸಬಹುದು ಎಂದು ಹೇಳಿದ್ದಾರೆ.
ನಾವು ದುಡಿದು ತಿನ್ನುವವರು, ಸ್ವಲ್ಪ ಮಾನವೀಯತೆ ಇರಲಿ
ನಾವು ದುಡಿದು ತಿನ್ನುವವರು ಸ್ವಾಮಿ, ಸ್ವಲ್ಪ ಮಾನವೀಯತೆ ಇರಲಿ, ಆ ದುಡ್ಡಿಟ್ಟುಕೊಂಡು ನಾವು ಮನೆಯನ್ನು ಕಟ್ಟುವುದಿಲ್ಲ, ಒಂದು ದಿನದ ಆಹಾರಕ್ಕಾಗಿ ಕೆಲಸಕ್ಕೆ ಹೋಗುತ್ತೇವೆ, ಸ್ವಲ್ಪ ಮಾನವೀಯತೆಯಿಂದ ನಡೆದುಕೊಳ್ಳಿ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.
ಗಾರೆ ಕೆಲಸದಾಕೆಗೆ 250 ರೂ. ದಂಡ ವಿಧಿಸಿದ ಪೊಲೀಸರು
ಮಾಸ್ಕ್ ಧರಿಸಿಲ್ಲ ಎಂದು ಗಾರೆ ಕೆಲಸದಾಕೆಗೆ 250ರೂ. ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆಯಲ್ಲಿ ಮಗುವನ್ನು ಬಿಟ್ಟು ಒಪ್ಪೊತ್ತಿನ ಊಟಕ್ಕಾಗಿ ಕೆಲಸಕ್ಕೆ ಹೊರಟಿದ್ದ ಬಡ ಮಹಿಳೆಗೆ 250ರೂ. ದಂಡ ವಿಧಿಸಿದ್ದಾರೆ.
ನೀವೂ ಗಾರೆ ಕೆಲಸ ಮಾಡಿ, ಕಷ್ಟ ಗೊತ್ತಾಗುತ್ತೆ
ನೀವು ಗಾರೆ ಕೆಲಸ ಮಾಡಿ ನಮ್ಮ ಕಷ್ಟ ಏನು ಎಂದು ನಿಮಗೆ ಗೊತ್ತಾಗುತ್ತೆ, ನಾವು ಬಡವರು, ನಮ್ಮ ಬಳಿ ಈ ರೀತಿ ನಡೆದುಕೊಂಡಿದ್ದು ತಪ್ಪು ಎಂದು ಮಹಿಳೆ ಹೇಳಿದ್ದಾರೆ.
ಶಾಸಕರಿಗೊಂದು ಕಾನೂನು, ಬಡವರಿಗೊಂದು ಕಾನೂನು
ಮಾಸ್ಕ್ ಧರಿಸಿದೆ ಶಾಸಕರ ಭವನಕ್ಕೆ ತೆರಳುತ್ತಿದ್ದ ವೇಳೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿಗೆ ಪೊಲೀಸರು 250ರೂ. ದಂಡವಿಧಿಸಿದ್ದರು. ಅದಕ್ಕೆ ಕೋಪಗೊಂಡು ಗೃಹಸಚಿವರಿಗೆ ದೂರು ನೀಡಿರುವ ಘಟನೆ ನಡೆದಿದೆ. ಕಾನೂನನ್ನು ಬಡವರು ಮಾತ್ರ ಪಾಲಿಸಬೇಕೆ ಎನ್ನುವ ಪ್ರಶ್ನೆ ಎದುರಾಗಿದೆ.
Recommended Video