'ರೇಷ್ಮೆ ಸೇರಿ ಮೂವರು ಪತ್ರಕರ್ತರು ದೋಷಿಗಳು'
ಪತ್ರಕರ್ತರಾದ ರವೀಂದ್ರ ರೇಷ್ಮೆ, ಟಿ.ಕೆ.ತ್ಯಾಗರಾಜ್, ಗಂಗಾಧರ ಕುಷ್ಟಗಿ ದೋಷಿಗಳು ಎಂದು 2001ರಲ್ಲಿ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯ ಹಾಗೂ 2004ರಲ್ಲಿ 4ನೇ ತ್ವರಿತಗತಿ ನ್ಯಾಯಾಲಯ ನೀಡಿದ್ದ ಆದೇಶವನ್ನು ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಕಾಯಂಗೊಳಿಸಿದೆ.
ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಸ್ವಲ್ಪ ಸಡಿಲಿಸಿದೆ. ಅಧೀನ ನ್ಯಾಯಾಲಯ ಗಂಗಾಧರ ಕುಷ್ಟಗಿ ಅವರಿಗೆ ಆರು ತಿಂಗಳ ಸೆರೆವಾಸ ವಿಧಿಸಿತ್ತು. ಹೈಕೋರ್ಟ್ ಅದನ್ನು ರದ್ದುಗೊಳಿಸಿದೆ. ಅಲ್ಲದೆ, ರೇಷ್ಮೆ ಹಾಗೂ ತ್ಯಾಗರಾಜ್ ಅವರು ತಲಾ 15 ಸಾವಿರ ರು.ದಂಡ ನೀಡಬೇಕು, ದಂಡ ಕಟ್ಟುವಲ್ಲಿ ವಿಫಲರಾದರೆ ಮೂರು ತಿಂಗಳು ಸಾದಾ ಸಜೆ ಅನುಭವಿಸಬೇಕು. ಗಂಗಾಧರ ಕುಷ್ಟಗಿ 20 ಸಾವಿರ ರು. ದಂಡ ಕಟ್ಟಬೇಕು, ಇಲ್ಲವಾದರೆ 4 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಈ ಮೂವರು ನೀಡಿದ ದಂಡದ ರೂಪದ ಹಣದಿಂದ ಸಂಗ್ರಹವಾದ 45 ಸಾವಿರ ರುಗಳನ್ನು ಹರೀಶ್ ಗೌಡರಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಅಧೀನ ನ್ಯಾಯಾಲಯ ಮೂವರನ್ನು ದೋಷಿ ಎಂದು ಘೋಷಿಸಿರುವುದನ್ನು ರದ್ದುಗೊಳಿಸಲು ನಿರಾಕರಿಸಿರುವ ನ್ಯಾಯಪೀಠ, 'ಇವರು ಮತ್ತೆ ಮತ್ತೆ ಅಂತಹ ಅಪರಾಧ ಎಸಗುವುದಿಲ್ಲ ಎನಿಸುತ್ತದೆ. ಅವರು ಶಿಕ್ಷಿತರು, ಅವರು ಸುಧಾರಣೆಗೊಳ್ಳಲಿದ್ದಾರೆ. ಆರೋಪಿಗಳಿಗೆ ದೈಹಿಕ ಶಿಕ್ಷೆ ನೀಡಿ ಕಿರುಕುಳ ನೀಡುವುದಕ್ಕಿಂತ ಅವರ ಮನಸ್ಸು ಜಾಗೃತಗೊಂಡು ತಪ್ಪಿನ ಅರಿವಾದರೆ ಸಾಕು' ಎಂದೂ ನ್ಯಾಯಪೀಠ ಹೇಳಿದೆ. ರವೀಂದ್ರ ರೇಷ್ಮೆ ಅವರು ಲಂಕೇಶ್ ಪತ್ರಿಕೆ ನಂತರ ವಿಕ್ರಾಂತ ಕರ್ನಾಟಕ ಪತ್ರಿಕೆ ಸಂಪಾದಕರಾಗಿದ್ದರು ಈಗ ಬಿಎಸ್ ಆರ್ ಕಾಂಗ್ರೆಸ್ ವಕ್ತಾರರಾಗಿದ್ದಾರೆ. ಗಂಗಾಧರ ಕುಷ್ಟಗಿ ಅವರು ಪ್ರಜಾವಾಣಿ ಸೇರಿದ್ದಾರೆ. ತ್ಯಾಗರಾಜ್ ಟಿ.ಕೆ ಅವರು ಫ್ರೀಲ್ಯಾನ್ಸ್ ಜರ್ನಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.