ಸಮಾನತೆ, ಹಕ್ಕಿಗಾಗಿ ಒಗ್ಗೂಡಲಿದ್ದಾರೆ ಕ್ಷೌರಿಕ ಸಮಾಜದವರು
ಬೆಂಗಳೂರು, ಜನವರಿ 09 : ಸ್ವಚ್ಛ, ಸದೃಢ ಮತ್ತು ಸ್ವಾವಲಂಬಿ ಕ್ಷೌರಿಕರ ಸಮಾಜವನ್ನು ಕಟ್ಟುವ ಮಹತ್ ಉದ್ದೇಶದಿಂದ ಕರ್ನಾಟಕದ ಸವಿತಾ ಸಮಾಜ ಬೆಂಗಳೂರಿನಲ್ಲಿ ಜನವರಿ 10, ಮಂಗಳವಾರದಂದು ಬೃಹತ್ ಸಮಾವೇಶವನ್ನು ಆಯೋಜಿಸಿದೆ.
ಜಾತಿ ಅಸಮಾನತೆ ಎದುರಾದಾಗ, ಜನಾಂಗದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ, ವೃತ್ತಿಯಲ್ಲಿ ಆತ್ಮಗೌರವಕ್ಕೆ ಧಕ್ಕೆ ಉಂಟಾದಾಗ, ದಕ್ಕಬೇಕಾದ ಹಕ್ಕಿಗೆ ಚ್ಯುತಿ ಉಂಟಾದಾಗ ಹೋರಾಟ ಮಾಡುವುದು ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘಟನೆ ಘೋಷಣೆ ಕೂಗಿದೆ.[ಮಂಗಳವಾರ ಕ್ಷೌರದಂಗಡಿ ಮುಚ್ಚದ್ದಕ್ಕೆ ಭುಗಿಲೆದ್ದ ಹಿಂಸಾಚಾರ]
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಬೆಳಿಗ್ಗೆ 10.30ಕ್ಕೆ ಸವಿತಾ ಸಮಾಜದ ರಾಜ್ಯ ಮಟ್ಟದ ತೃತೀಯ ಸಮಾವೇಶ ಜರುಗಲಿದೆ. ಸವಿತಾ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿದ್ದು, ಹೋರಾಡಲೇಬೇಕಾಗಿದೆ ಎಂದು ಸಂಘಟಕರು ಈ ಸಮಾವೇಶವನ್ನು ಕರೆದಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಕ್ಷೌರದಂಗಡಿ, ಬ್ಯೂಟಿ ಪಾರ್ಲರ್, ಸ್ಪಾ, ಮೆನ್ಸ್ ಸಲೂನ್ ಮುಂತಾದವುಗಳನ್ನು ಒಂದು ದಿನಕಾಲ ಮುಚ್ಚಿ (ಸಾಮಾನ್ಯವಾಗಿ ಮಂಗಳವಾರ ರಜಾ), ನಾದಸ್ವರ ಕಲಾವಿದರು, ಸವಿತಾ ಸಮಾಜದ ಎಲ್ಲ ವೇದಿಕೆಗಳು ಕುಟುಂಬ ಸಮೇತರಾಗಿ ಸಮಾವೇಶಕ್ಕೆ ಬರಬೇಕೆಂದು ಆಯೋಜಕರು ಕೋರಿದ್ದಾರೆ.[ತುಮಕೂರು ದಲಿತರಿಂದ ಕ್ಷೌರಿಕರಿಗೆ ಬಹಿಷ್ಕಾರ!]
ವೃತ್ತಿಯ ಏಳಿಗೆಗಾಗಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಸಾಮಾಜಿಕ ಸಮಾನತೆಗಾಗಿ, ಆರ್ಥಿಕ ಸ್ವಾವಲಂಬನೆಗಾಗಿ ಮತ್ತು ರಾಜಕೀಯದಲ್ಲಿ ಉನ್ನತ ಸ್ಥಾನಮಾನಕ್ಕಾಗಿ ಹೋರಾಟ ನಡೆಸುವ ಸದುದ್ದೇಶದಿಂದ ಕ್ಷೌರಿಕ ವರ್ಗದವರು ಬೆಂಗಳೂರಿನಲ್ಲಿ ಸೇರುತ್ತಿದ್ದಾರೆ.
ಅವರ ಬೇಡಿಕೆಗಳು ಕೆಳಗಿನಂತಿವೆ
1) ಸವಿತಾ ಸಮುದಾಯ ಮತ್ತು ಸಮಾನಾಂತರ ಜಾತಿಗಳನ್ನು, ಪ್ರವರ್ಗ 2ಎಯಿಂದ ಪ್ರತ್ಯೇಕಿಸಿ, ಪ್ರವರ್ಗ 1ಎಯನ್ನು ಸೃಷ್ಟಿಸಿ, 15/4 ಮತ್ತು 16/4ರಲ್ಲಿ ಸೂಚಿಸಿರುವಂತೆ ನ್ಯಾಯಬದ್ಧ ಮೀಸಲಾತಿಯನ್ನು ನೀಡಬೇಕು.
2) ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು.
3) ಬೈಗುಳ ಪದವಾಗಿ ಬಳಸುತ್ತಿದ್ದ ಪದವನ್ನು ಸರಕಾರಿ ಕಡತಗಳಿಂದ ತೆಗೆದಿರುವುದು ಶ್ಲಾಘನೀಯವಾದರೂ ಆ ಪದವನ್ನು ಬೈಗುಳಕ್ಕೆ ಬಳಸಿದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಕಾನೂನಿನ ಚೌಕಟ್ಟಿನಲ್ಲಿ ಅವಕಾಶ ಕಲ್ಪಿಸಬೇಕು.
ಈ ಸಮಾವೇಶದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು, ಪದ್ಮನಾಭನಗರ ವಾರ್ಡ್, ಚಿಕ್ಕಲ್ಲಸಂದ್ರ ವಾರ್ಡ್, ಕುಮಾರಸ್ವಾಮಿ ವಾರ್ಡ್, ಗಣೇಶ್ ಮಂದಿರ ವಾರ್ಡ್, ಯಡಿಯೂರು ವಾರ್ಡ್, ಹೊಸಕೆರೆಹಳ್ಳಿ ವಾರ್ಡ್ ಪದಾಧಿಕಾರಿಗಳು ಭಾಗವಹಿಸುತ್ತಿದ್ದಾರೆ.