ಕಳಪೆ ರಸ್ತೆ ನಿರ್ಮಿಸಿ, ದಂಡ ಹಾಕಿಸಿಕೊಂಡವರಿಗೆ ಮತ್ತೆ 99 ಕೋಟಿಯ ಪ್ರಾಜೆಕ್ಟ್!
ಬೆಂಗಳೂರು, ಡಿ.02: ಸಿಲಿಕಾನ್ ಸಿಟಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಮಯದಲ್ಲಿ ರಸ್ತೆಗಳಿಗೆ ಟಾರು ಹಾಕಿ, ಗುಂಡಿ ಮುಚ್ಚಿ, ರಸ್ತೆಗಳಿಗೆ ಬಣ್ಣ ಬಳಿದು ಕಾಮಗಾರಿ ನಡೆಸಲಾಗಿತ್ತು. ಪ್ರಧಾನಿ ಅತ್ತ ಹೋಗುತ್ತಿದ್ದಂತೆ ಇತ್ತ ರಸ್ತೆಯೂ ಕಿತ್ತು ಹೋಗಿತ್ತು. ಕಾಮಗಾರಿ ನಡೆಸಿದ್ದ ಮಹಾತ್ಮನಿಗೆ ಮತ್ತು ಬಿಬಿಎಂಪಿಗೆ ಜನರು ಹಿಡಿ ಶಾಪ ಹಾಕಿದ್ದರು. ಆದರೆ, ಈಗ ಮತ್ತೆ ಅದೇ ಗುತ್ತಿಗೆದಾರನಿಗೆ ಕೋಟ್ಯಾಂತರ ರೂಪಾಯಿ ಪ್ರಾಜೆಕ್ಟ್ ಸಿಕ್ಕಿದೆ.
ಆಶ್ಚರ್ಯ ಆದರೂ ಇದು ಸತ್ಯನೇ ನೋಡಿ. ಕಳಪೆ ಕಾಮಗಾರಿ ಮಾಡಿ, ಜನರಿಂದ ಉಗಿಸಿಕೊಂಡು ಜೊತೆಗೆ 3 ಲಕ್ಷ ರೂಪಾಯಿ ದಂಡ ಕೂಡ ಕಟ್ಟಿದ್ದ ಗುತ್ತಿಗೆದಾರ ರಮೇಶ್ ಎಸ್ ಎನ್ನುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮತ್ತೆ 99 ಕೋಟಿ ಮೊತ್ತದ ಯೋಜನೆಯನ್ನು ವಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಕಳಪೆ ರಸ್ತೆ ಕಾಮಗಾರಿಗೆ ಇನ್ನೂ ಸರಿಯಾಗಿ ಮಣ್ಣು ಹಾಕಿಲ್ಲ ಅಷ್ಟರಲ್ಲೇ ಗುತ್ತಿಗೆದಾರ ರಮೇಶ್ ಎಸ್ ಅವರಿಗೆ ಹಲವಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಗುತ್ತಿಗೆ ನೀಡಲಾಗಿದೆ. ರಸ್ತೆಯ ಟಾರ್ ಕಿತ್ತು ಬಿಬಿಎಂಪಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
99 ಕೋಟಿ ಮೊತ್ತದ ಪ್ರಾಜೆಕ್ಟ್ ಪಡೆದ ಗುತ್ತಿಗೆದಾರ!
ಕೆಂಗೇರಿ ಮತ್ತು ಕೊಮ್ಮಘಟ್ಟದಲ್ಲಿ ಮಾಡಿದ ಕಳಪೆ ಕಾಮಗಾರಿಗಾಗಿ 3 ಲಕ್ಷ ರೂಪಾಯಿ ದಂಡ ವಿಧಿಸಿರುವ ರಮೇಶ್ ಎಸ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆ ತೆಗೆದುಕೊಂಡು ವಿಶ್ವೇಶ್ವರಯ್ಯ ಲೇಔಟ್ನ ಹಲವು ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ.
ಇವರು ವಿಶ್ವೇಶ್ವರಯ್ಯ ಲೇಔಟ್ನ ಚರಂಡಿಗಳು ಮತ್ತು ಮೋರಿಗಳನ್ನು ಅಭಿವೃದ್ಧಿಪಡಿಸುತ್ತಾರೆ. ಜೊತೆಗೆ ಫುಟ್ಪಾತ್ಗಳನ್ನು ಅಭಿವೃದ್ಧಿ ಪಡಿಸಲಿದ್ದು, ಒಟ್ಟು ಈ ಕಾಮಗಾರಿಗಳು 99 ಕೋಟಿ ರೂಪಾಯಿ ಮೌಲ್ಯದ್ದಾಗಿವೆ.
ಆರ್ಟಿಐ ಕಾರ್ಯಕರ್ತ ಮತ್ತು ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಸ್ ಅವರ ಪ್ರಕಾರ, ಗುತ್ತಿಗೆದಾರ ರಮೇಶ್ ಅವರು ವಿಶ್ವೇಶ್ವರಯ್ಯ ಲೇಔಟ್ ಬ್ಲಾಕ್ 1, 2, 3, 4, 5 ಮತ್ತು 7 ರಲ್ಲಿ (ಬಿಡಿಎ) ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಕಾಮಗಾರಿಗಳ ಗುತ್ತಿಗೆ ನೀಡುವುದರಲ್ಲಿ ಮೋಸ: ಆರೋಪ
''ಕೊಮ್ಮಘಟ್ಟದಲ್ಲಿ ಕಳಪೆ ಕಾಮಗಾರಿ ನಡೆಸಿ ಪಾಲಿಕೆ ಗೌರವಕ್ಕೆ ಧಕ್ಕೆ ತಂದಿದ್ದಕ್ಕೆ ದಂಡ ಪಾವತಿಸಿದ್ದಾರೆ. ಈಗ ಇದೇ ಗುತ್ತಿಗೆದಾರರು ಬ್ಲಾಕ್ 1 ರಿಂದ 9ರ ವರೆಗೆ ಚರಂಡಿ, ಮೋರಿ ಅಭಿವೃದ್ಧಿ, ಫುಟ್ ಪಾತ್ ಹಾಗೂ ಇತರೆ ಕಾಮಗಾರಿಗಳನ್ನು ಸುಧಾರಿಸುತ್ತಿದ್ದಾರೆ. ಆದರೂ ಬ್ಲಾಕ್ 6, 8 ಮತ್ತು 9ರಲ್ಲಿ ಕಾಮಗಾರಿ ಆರಂಭಿಸಿಲ್ಲ" ಎಂದು ಸುದರ್ಶನ್ ಆರೋಪಿಸಿದ್ದಾರೆ.
"ಅವರ ಕೆಲಸವನ್ನು ಅನುಮಾನಿಸಿ, ನಾನು ಆಗಸ್ಟ್ನಲ್ಲಿ ಈ ಯೋಜನೆಗಳ ವಿವರಗಳನ್ನು ಕೋರಿ ಆರ್ಟಿಐ ಪ್ರಶ್ನೆಯನ್ನು ಸಲ್ಲಿಸಿದೆ. ಆದರೆ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದರು. ಆದ್ದರಿಂದ ಸೆಪ್ಟೆಂಬರ್ನಲ್ಲಿ ನಾನು 'ಮೊದಲ ಮೇಲ್ಮನವಿ'ಗೆ ಹೋಗಿದ್ದೆ. ಇಲ್ಲಿಯೂ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ" ಎಂದು ಸುದರ್ಶನ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಯೋಜನೆಯ ಮಾಹಿತಿ ನೀಡಲು ಅಧಿಕಾರಿಗಳ ಹಿಂದೇಟು
ವಿವಿಧ ಪ್ಯಾಕೇಜ್ಗಳ ಅಡಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, 99 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಆರ್ಟಿಐಗೆ ಬಂದಿರು ಉತ್ತರಗಳೊಂದಿಗೆ ಲೋಕಾಯುಕ್ತರನ್ನು ಭೇಟಿ ಮಾಡುವುದಾಗಿ ಸುದರ್ಶನ್ ಹೇಳಿದ್ದಾರೆ.
"ಅಧಿಕಾರಿಗಳು ತಮ್ಮ ಹಗರಣ ಬಹಿರಂಗಗೊಳ್ಳುವ ಬಗ್ಗೆ ಯೋಚನೆಗೆ ಬಿದ್ದಿದ್ದಾರೆ. ಆದ್ದರಿಂದ, ಮಾಹಿತಿ ನೀಡುವಲ್ಲಿ ವಿಳಂಬವಾಯಿತು. ಹೀಗಾಗಿ ಮೊದಲ ಮೇಲ್ಮನವಿಗಾಗಿ ಹೋಗಬೇಕಾಯಿತು. ಇನ್ನು, 30 ದಿನಗಳಲ್ಲಿ ಮಾಹಿತಿ ನೀಡದಿದ್ದರೇಯೇ ತಿಳಿಯುತ್ತದೆ. ಈ ಕಾಮಗಾರಿ ಕಳಪೆಯಾಗಿದೆ ಮತ್ತು ಬಿಲ್ಗಳಲ್ಲಿ ವಂಚನೆ ನಡೆದಿದೆ ಎಂಬುದು" ಎಂದು ಸುದರ್ಶನ್ ತಿಳಿಸಿದ್ದಾರೆ.
ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ!
ಇದೇ ಗುತ್ತಿಗೆದಾರ ಬಿಡಿಎಗೆ ಕಾಮಗಾರಿ ನಿರ್ವಹಿಸುತ್ತಿರುವ ಬಗ್ಗೆ ಬಿಡಿಎ ಎಂಜಿನಿಯರ್ ಸದಸ್ಯ ಎಚ್.ಡಿ.ಶಾಂತರಾಜಣ್ಣ ಖಚಿತಪಡಿಸಿದ್ದಾರೆ. "ಗುತ್ತಿಗೆದಾರರು ನಿಜವಾಗಿಯೂ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ನಮ್ಮ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕಳಪೆ ಕೆಲಸವನ್ನು ಕಂಡಿಲ್ಲ. ಆಗಸ್ಟ್ನಲ್ಲಿ ಕಾಮಗಾರಿ ಆರಂಭವಾಗಿದ್ದು, ನಮ್ಮ ಎಂಜಿನಿಯರ್ಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಬಡಾವಣೆಗೆ ಮೂಲ ಸೌಕರ್ಯಗಳ ಅಗತ್ಯವಿದೆ. ಒಂದೊಮ್ಮೆ ಅಭಿವೃದ್ಧಿ ಪಡಿಸಿದರೆ ಅಧಿಕಾರ ವ್ಯಾಪ್ತಿಯನ್ನು ಬಿಬಿಎಂಪಿಗೆ ಹಸ್ತಾಂತರಿಸುತ್ತೇವೆ' ಎಂದು ಶಾಂತರಾಜಣ್ಣ ಹೇಳಿದ್ದಾರೆ.
ಇದೇ ವೇಳೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮಾತನಾಡಿ, ಕಳಪೆ ಕಾಮಗಾರಿಗಾಗಿ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದ್ದು, ಅದನ್ನು ಮಾತ್ರ ಸರಿಪಡಿಸಬೇಕಿದೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ. ಆದರೆ ದಂಡವನ್ನು ಪಾವತಿಸಲು ಮಾತ್ರ ಕೇಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪ್ರಧಾನಿ ಬಂದ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಬಳಿಯ ಮರಿಯಪ್ಪನಪಾಳ್ಯ ಮುಖ್ಯ ರಸ್ತೆಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಪ್ರಧಾನಿ ಬೆಂಗಾವಲು ಪಡೆ ಸಾಗಿದ ಕೆಲವೇ ದಿನಗಳಲ್ಲಿ ಡಾಂಬರು ಕಿತ್ತು ಹೋಗಿದೆ.
(ಮಾಹಿತಿ ಕೃಪೆ- ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್)