ಗುತ್ತಿಗೆ ವೈದ್ಯರಿಗೆ ಮತ್ತೆ ಭರವಸೆ ಕೊಟ್ಟ ರಾಜ್ಯ ಸರ್ಕಾರ!
ಬೆಂಗಳೂರು, ಜು. 07: ಸರ್ಕಾರ ಕೊಟ್ಟ ಭರವಸೆಯಿಂದ ಗುತ್ತಿಗೆ ವೈದ್ಯರು ತಮ್ಮ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಸರ್ಕಾರಿ ಗುತ್ತಿಗೆ ವೈದ್ಯರ ಜತೆಗೆ ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಸರ್ಕಾರ ಮತ್ತೊಮ್ಮೆ ಯಶಸ್ವಿಯಾಗಿ ಗುತ್ತಿಗೆ ವೈದ್ಯರ ಮನವೊಲಿಸಿದೆ. ಆದರೆ ಕಾಯ್ದು ನೋಡುವುದಾಗಿ ಗುತ್ತಿಗೆ ವೈದ್ಯರ ಪ್ರತಿನಿಧಿ ಹೇಳಿದ್ದಾರೆ.
Recommended Video
ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸಭೆ ನಡೆಸಿ ಗುತ್ತಿಗೆ ಎಂಬಿಬಿಎಸ್ ವೈದ್ಯರಿಗೆ ಭರವಸೆ ಕೊಟ್ಟಿದ್ದಾರೆ. ಸರ್ಕಾರದ ಭರವಸೆಯ ಹೊರತಾಗಿಯೂ ಕಾಯ್ದು ನೋಡುವುದಾಗಿ ಗುತ್ತಿಗೆ ವೈದ್ಯರ ಸಂಘದ ಪ್ರತಿನಿಧಿ ಸ್ಪಷ್ಟಪಡಿಸಿದ್ದಾರೆ. ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಸಭೆಯಲ್ಲಿ ಭಾಗವಹಿಸಿದ್ದರು.
ಖಾಯಂ ಮಾಡಲು ಕ್ರಮ
2017ರಿಂದಲೂ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಕಾಯಂ ಮಾಡಬೇಕು ಎಂಬ ಒತ್ತಾಯ ಇದೆ. ಇದು ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ ಆಗಿದೆ. ನಮ್ಮ ಸರ್ಕಾರ 45 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ವೇತನವನ್ನು ಏರಿಕೆ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಚಿವ ಡಾ. ಸುಧಾಕರ್ ಗರಂ!
ಗುತ್ತಿಗೆ ಆಧಾರದ ಈ ಎಲ್ಲ 507 ವೈದ್ಯರೂ ಸಹ ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮುಷ್ಕರ ಮಾಡುವುದು ಸರಿಯಲ್ಲ. ಇವರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಹೀಗಾಗಿ ನೇಮಕ ನಿಯಮಾವಳಿಗೆ ತಿದ್ದುಪಡಿ ತರಲು ನಿರ್ಧಾರ ಮಾಡಿದ್ದೇವೆ ಎಂದು ಶ್ರೀರಾಮುಲು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ 507 ವೈದ್ಯರನ್ನು ಖಾಯಂ ಮಾಡಲು ಸರ್ಕಾರ ಒಪ್ಪಿದೆ.
ವೈದ್ಯರ ನೇಮಕಾತಿ
ರಾಜ್ಯದಲ್ಲಿ ವೈದ್ಯರ ಹುದ್ದೆ ಖಾಲಿ ಇವೆ. ಆ ಪೈಕಿ 500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಿದ್ದೇವೆ. ಹಾಲಿ ಗುತ್ತಿಗೆ ವೈದ್ಯರನ್ನು ಉಳಿದವರನ್ನು ನೇರ ನೇಮಕ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ಕೊಟ್ಟಿದ್ದಾರೆ.
ಈಗಾಗಲೇ ಮುಷ್ಕರ ಮಾಡುತ್ತಿದ್ದ ವೈದ್ಯರೊಂದಿಗೆ ಸಭೆ ನಡೆಸಿದ್ದು ಸಫಲವಾಗಿದೆ. ನಿಯಮಾವಳಿ ತಿದ್ದುಪಡಿಗೆ ಕಾಲಾವಕಾಶ ಬೇಕಾಗಿದೆ. ನಾಳೆಯಿಂದ ವೈದ್ಯರು ಮುಷ್ಕರ ಮಾಡುವುದಿಲ್ಲ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಹಿಂದಿನ ಸರ್ಕಾರದ ವೈಫಲ್ಯ
ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸಭೆಯ ಬಳಿಕ ಮಾತನಾಡಿದ್ದು, ಈ ಹಿಂದಿನ ಎರಡು ಸರ್ಕಾರಗಳಿಂದಲೂ ವೈದ್ಯರ ಬೇಡಿಕೆ ಈಡೇರಿರಲಿಲ್ಲ. ಇಂದು ನಡೆದ ಸಭೆ ಫಲ ಪ್ರದವಾಗಿದೆ. ಗುತ್ತಿಗೆ ಆಧಾರದ ವೈದ್ಯರನ್ನು ಕಾಯಂ ಮಾಡುತ್ತೇವೆ ಎಂದಿದ್ದಾರೆ.
ದಾವಣಗೆರೆ; ಬೀದಿನಾಟಕದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ 9ನೇ ದಿನದ ಮುಷ್ಕರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯಂತೆ ಸಭೆ ನಡೆಸಿದ್ದೇವೆ. ಕೋವಿಡ್ ಯೋಧರಿಗೆ ಆರೋಗ್ಯ ವಿಮೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ಕಾಲಾವಕಾಶ ಕೇಳಿದ್ದಾರೆ
ಮುಷ್ಕರದ ಬಗ್ಗೆ ಮಾತನಾಡಿದ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಅವರು, ನಾಳೆ ಮುಷ್ಕರ ವಾಪಸ್ ಪಡೆದು ವೈದ್ಯರು ಕೆಲಸಕ್ಕೆ ಹಾಜರಾಗುತ್ತಾರೆ. ಈ ಸಂದರ್ಭದಲ್ಲಿ ಮುಷ್ಕರಕ್ಕೆ ಮುಂದಾಗಿದ್ದಕ್ಕೆ ವಿಷಾದ ಇದೆ ಎಂದಿದ್ದಾರೆ.
ಇನ್ನು ಗುತ್ತಿಗೆ ವೈದ್ಯರ ಪ್ರತಿನಿಧಿ ಡಾ ವಿನಯ ಮಂಜುನಾಥ ಮಾತನಾಡಿ, ಸರ್ಕಾರ ಕಾಲಾವಕಾಶ ತೆಗೆದುಕೊಂಡಿದೆ. 20 ದಿನಗಳ ಕಾಲ ಏನು ತೀರ್ಮಾನ ಮಾಡುತ್ತದೆ ಕಾದು ನೋಡುತ್ತೇವೆ. ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ಸಚಿವರಾದ ಡಾ. ಸುಧಾಕರ, ಶ್ರೀರಾಮುಲು ಅವ್ರು ಭರವಸೆ ಕೊಟ್ಟಿದ್ದಾರೆ. ಅಲ್ಲಿವರೆಗೂ ಕಾಯುತ್ತೇವೆ. ಅಲ್ಲಿವರೆಗೂ ತಾತ್ಕಾಲಿಕವಾಗಿ ಹೋರಾಟ ಕೈಬಿಟ್ಟಿದ್ದೇವೆ ಎಂದಿದ್ದಾರೆ.