ಸರ್ಕಾರದ ಆದೇಶ ಕೈಸೇರುವವರೆಗೂ ದುಬಾರಿ ದಂಡ ಮುಂದುವರಿಕೆ: ಭಾಸ್ಕರ್ ರಾವ್
ಬೆಂಗಳೂರು, ಸೆಪ್ಟೆಂಬರ್ 14: ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೂ ದುಬಾರಿ ದಂಡ ಮುಂದುವರೆಸಲಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಳೆ ದಂಡವನ್ನೇ ವಿಧಿಸುವಂತೆ ರಾಜ್ಯ ಸರ್ಕಾರ ಹೇಳಿದೆ ಎನ್ನುವ ವಿಚಾರ ಇದೆ ಆದರೆ ಅಧಿಕೃತವಾಗಿ ಆದೇಶ ನಮಗೆ ಬಂದಿಲ್ಲ ಹಾಗಾಗಿ ಅಲ್ಲಿಯವರೆಗೂ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಪ್ರಕಾರ ಪರಿಷ್ಕೃತವಾಗಿರುವ ದಂಡವನ್ನೇ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?
ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡ ವಾಹನ ಸವಾರರಿಗೆ ಹೊರೆಯಾಗಿದೆ ಎನ್ನುವ ಆರೋಪ ಕೇಳಿಬಂದ ಬಳಿಕ ಶೀಘ್ರವೇ ದಂಡದ ಮೊತ್ತವನ್ನು ಕಡಿಮೆ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಬಳಿಕ ಸಾರಿಗೆ ಇಲಾಖೆಯು ಸೆಪ್ಟೆಂಬರ್ ಗೂ ಮುಂಚೆ ಇದ್ದ ದಂಡವನ್ನೇ ಮುಂದುವರೆಸುತ್ತೇವೆ ಎಂದು ತಿಳಿಸಿದೆ. ಆದರೆ ಇದುವರೆಗೂ ಆ ಆದೇಶ ಟ್ರಾಫಿಕ್ ಪೊಲೀಸರ ಕೈಗೆ ತಲುಪಿಲ್ಲ. ಅಲ್ಲಿಯವರೆಗೂ ದುಬಾರಿ ದಂಡವನ್ನೇ ಮುಂದುವರೆಸಲಾಗುವುದು ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.