ಕನಕಪುರ, ಚಿಕ್ಕಬಳ್ಳಾಪುರ ಎರಡಕ್ಕೂ ಮೆಡಿಕಲ್ ಕಾಲೇಜು ಕೊಡಲಿ: ಎಚ್ಡಿಕೆ
ಬೆಂಗಳೂರು, ನವೆಂಬರ್ 2: ಕನಕಪುರ, ಚಿಕ್ಕಬಳ್ಳಾಪುರ ಎರಡಕ್ಕೂ ಮೆಡಿಕಲ್ ಕಾಲೇಜು ಕೊಡಲಿ, ಬೇಡ ಅಂದೋರ್ಯಾರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಶನಿವಾರ ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ದಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಅಂತಾ ಸಿದ್ದರಾಮಯ್ಯ ಕಾಲದಲ್ಲೇ ಘೋಷಣೆ ಆಗಿತ್ತು. ಆದರೆ ಹಣ ಇಟ್ಟಿರಲಿಲ್ಲ.
ಸಿದ್ದರಾಮಯ್ಯ ಸರ್ಕಾರ ಬಂದರೆ ಅವರಿಗೂ ಬೆಂಬಲ ಕೊಡ್ತೀನಿ: ಕುಮಾರಸ್ವಾಮಿ
ಕನಕಪುರ ಕ್ಕೆ ಕೊಟ್ಟ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರ ಕ್ಕೆ ಕೊಟ್ಟರು ಅಂತಾ ಡಿಕೆ ಶಿವಕುಮಾರ್ ಹೇಳುತ್ತಾರೆ.ಕನಕಪುರ ಮತ್ತು ಚಿಕ್ಕಬಳ್ಳಾಪುರ ಎರಡಕ್ಕೂ ಮೆಡಿಕಲ್ ಕಾಲೇಜು ಕೊಡಲಿ , ಬೇಡಾ ಅಂದೋರ್ಯಾರು ಎಂದು ಹೇಳಿದ್ದಾರೆ.
ಈಗ ಕೇವಲ ಚುನಾವಣಾ ಗಿಮಿಕ್ ಆಗಿ ಚಿಕ್ಕಬಳ್ಳಾಪುರ ದಲ್ಲಿ ಗುದ್ದಲಿ ಪೂಜೆ ಮಾಡಲು ಹೊರಟಿದ್ದಾರೆ. ದುಡ್ಡು ಎಲ್ಲಿಂದ ತರ್ತಾರೆ. ಚುನಾವಣೆ ನಂತರ ಮೆಡಿಕಲ್ ಕಾಲೇಜು ಕೆಲಸ ಮುಂದುವರೆಸ್ತಾರಾ ಇಲ್ಲಾ ನಿಲ್ಲಿಸ್ತಾರಾ ಎಂದು ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ಮತ್ತು ಕನಕಪುರ ಮೆಡಿಕಲ್ ಕಾಲೇಜು ಬಗ್ಗೆ ದೊಡ್ಡ ರಾಜಕಾರಣ ನಡೀತಿದೆ. ಎಲ್ಲಿಗೆ ಕಾಲೇಜು ಕೊಡಬೇಕು ಎಂಬುದಕ್ಕಿಂತ ಇದಕ್ಕೆ ದುಡ್ಡು ಮೀಸಲು ಆಗಿದೆಯಾ? ಎಂಬುದು ಮುಖ್ಯ. ಎಲ್ಲ ಬರೇ ಶಂಕುಸ್ಥಾಪನೆಗೆ ಅಷ್ಟೇ ಸೀಮಿತ ಆಗಿರುವ ಸರ್ಕಾರ ಇದು ಎಂದು ಖಾರವಾಗಿ ನುಡಿದಿದ್ದಾರೆ.
ಮೀನುಗಾರರು ಮತ್ತ ನೇಕಾರರ ಸಾಲ ಕೇವಲ ಜಾಹೀರಾತು ಮೇಲಿದೆ ಅಷ್ಟೇ. ಯಾವುದೇ ಸಾಲ ಈತನಕ ಮನ್ನಾ ಮಾಡಿಲ್ಲ. ಇದು ಬರೇ ಜಾಹೀರಾತಿನ ಸರ್ಕಾರ 100 ದಿನಗಳ ಈ ಸರ್ಕಾರ ಕೇವಲ ಜಾಹೀರಾತು ನೀಡಲಷ್ಟೇ ಸೀಮಿತ ಆಗಿದೆ.
ಅಧಿಕಾರಿಗಳು ಮತ್ತು ಸಿಎಂ ನಡುವೆ ಸಮನ್ವಯತೆ ಇಲ್ಲ. ಯಡಿಯೂರಪ್ಪ ವಿರುದ್ದ ಎಚ್ಡಿಕೆ ಚಾಟಿ ಬೀಸಿದ್ದಾರೆ.ನೆರೆ ಪೀಡಿತ ಉತ್ತರ ಕರ್ನಾಟಕದ ಜನತೆಯ ಹಿತ ದೃಷ್ಟಿಯಿಂದ ಮಾತ್ರವೇ ನಾನು ಮಧ್ಯಂತರ ಚುನಾವಣೆ ಬೇಡ ಎನ್ನುತ್ತಿದ್ದೇನೆ.
ನನ್ನ ಅಭಿಪ್ರಾಯದಲ್ಲಿ ಮತ್ತೆ ಚುನಾವಣೆ ಆದ್ರೆ, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರಲ್ಲ. ಮತ್ತೆ ಅತಂತ್ರ ವಿಧಾನಸಭೆ ನಿರ್ಮಾಣ ಆಗುತ್ತೆ. ಇದು ಬೇಕಾ ಅನ್ನೋದೇ ಪ್ರಶ್ನೆ ಮೂಡಿದೆ ಎಂದು ಹೇಳಿದರು.