ಶಾಂತಿನಗರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸಂಚು?
ಬೆಂಗಳೂರು, ಏಪ್ರಿಲ್ 29: ನಗರದ ಶಾಂತಿನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಎನ್.ಎ.ಹ್ಯಾರಿಸ್ ರನ್ನು ಈ ಬಾರಿ ಸೋಲಿಸಲೇಬೇಕು ಎಂದು ಬಿಜೆಪಿ ಮತ್ತು ಕಳೆದ ಬಾರಿ ಎರಡನೇ ಸ್ಥಾನ ಪಡೆದಿದ್ದ ಜೆಡಿಎಸ್ ಪಣತೊಟ್ಟಿದೆ.
ಇದರ ನಡುವೆ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸಂಚು ನಡೆದಿದೆ ಎಂಬ ವರದಿಗಳು ಹೊರಬಿದ್ದಿದ್ದವು. ತಡರಾತ್ರಿ ಲಾಂಗ್ ಹಿಡಿದು ಶ್ರೀಧರ್ ರೆಡ್ಡಿ ಮನೆಗೆ ಬಂದಿದ್ದ ಫಸರ್ ಖಾನ್ ಎಂಬಾತ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಮನೆಗೆ ಬಂದಿದ್ದ ಫಸರ್ ಖಾನ್, ಶ್ರೀಧರ್ ರೆಡ್ಡಿ ಎಲ್ಲಿ..? ಯಾವ ಟೈಂಗೆ ಬರ್ತಾರೆ? ಎಂದೆಲ್ಲಾ ವಿಚಾರಿಸಿದ್ದ. ಆದರೆ ಈ ಪ್ರಕರಣಕ್ಕೀಗ ತಿರುವು ಸಿಕ್ಕಿದ್ದು ಪ್ರಚಾರದ ಹಣಕ್ಕಾಗಿ ಆತ ಮನೆಗೆ ಬಂದಿದ್ದ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನಂತೆ.
ಕಳೆದ ಕೆಲ ದಿನಗಳ ಹಿಂದೆ ಫಸರ್ ಖಾನ್ ಜೆಡಿಎಸ್ ಪಕ್ಷದ ಪ್ರಚಾರಕ್ಕೆ ಹೋಗಿದ್ದ. ಈ ಹಿನ್ನೆಲೆಯಲ್ಲಿ ಹಣ ಕೇಳಲು ಶ್ರೀಧರ್ ರೆಡ್ಡಿ ಮನೆ ಮುಂದೆ ಹೋಗಿದ್ದೆ. ಯಾರನ್ನೂ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾನಂತೆ.
ನಾನು ಮೂರು ಪಕ್ಷಗಳೂ ಪ್ರಚಾರಕ್ಕೆ ಕರೆದರೂ ಹೋಗುತ್ತೇನೆ. ಕಾಂಗ್ರೆಸ್, ಬಿಜೆಪಿ ಪಕ್ಷದ ಪ್ರಚಾರವನ್ನೂ ಮಾಡಿದ್ದೇನೆ. ಹಾಗಾಗಿ, ಹ್ಯಾರಿಸ್ ಫೋಟೋವನ್ನು ಇಟ್ಟುಕೊಂಡಿದ್ದೆ ಎಂದು ಆತ ವಿವರಣೆ ನೀಡಿದ್ದಾನಂತೆ.
ಆದರೆ ಲಾಂಗ್ ಇಟ್ಟುಕೊಂಡಿದ್ದು ಯಾಕೆ ಎಂದು ಫಸರ್ ಹೇಳಿಲ್ಲ.