'ರಾಹುಲ್ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬುದು ಕಾರ್ಯಕರ್ತರ ಆಸೆ': ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 12: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಮತ್ತೆ ರಾಹುಲ್ ಗಾಂಧಿ ತುಂಬಬೇಕು ಎಂದು ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ ಒಂದು ದಿನದ ಬಳಿಕ ಈಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್, "ರಾಹುಲ್ ಮತ್ತೆ ಕಾಂಗ್ರೆಸ್ನ ಅಧ್ಯಕ್ಷರಾಗಬೇಕೆಂದು ಕಾರ್ಯಕರ್ತರು ಬಯಸುತ್ತಾರೆ," ಎಂದು ಹೇಳಿದ್ದಾರೆ.
Recommended Video
ನವದೆಹಲಿಯಲ್ಲಿ ಅಕ್ಟೋಬರ್ 16 ರಂದು ಕಾಂಗ್ರೆಸ್ನ ಕಾರ್ಯಕಾರಿ ಸಭೆಯು ನಡೆಯಲಿದೆ. ಈ ನಡುವೆ ಕರ್ನಾಟಕ ಕಾಂಗ್ರೆಸ್ ನಾಯಕರು ಈ ಹೇಳಿಕೆಯನ್ನು ನೀಡಿದ್ದಾರೆ.
ಉಪಚುನಾವಣೆ, ಕೆಪಿಸಿಸಿ ಪದಾಧಿಕಾರಿ ನೇಮಕ ಕುರಿತು ಸೋನಿಯಾಗಾಂಧಿ ಜೊತೆ ಚರ್ಚೆ
"ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಬಳಿಕ ನಾವು ಮತ್ತೆ ಅಧ್ಯಕ್ಷ ಸ್ಥಾನವನ್ನು ಪಡೆಯಬೇಕು ಎಂದು ಒತ್ತಾಯ ಮಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಮತ್ತೆ ರಾಹುಲ್ ಗಾಂಧಿ ಅವರೇ ವಹಿಸಿಕೊಳ್ಳಬೇಕು ಎಂಬುವುದು ರಾಷ್ಟ್ರದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಳಿನ ಧ್ವನಿಯಾಗಿದೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
"ಈಗಾಗಲೇ ಕಾಂಗ್ರೆಸ್ ಪಕ್ಷದ ಶೇಕಡ 90 ರಷ್ಟು ಜವಾಬ್ದಾರಿಯನ್ನು ರಾಹುಲ್ ಗಾಂಧಿ ಅವರೇ ವಹಿಸಿಕೊಳ್ಳುತ್ತಿದ್ದಾರೆ. ಹಾಗಿರುವಾಗ ರಾಹುಲ್ ಗಾಂಧಿ ಅವರೇ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ನವದೆಹಲಿಯಲ್ಲಿ ಅಕ್ಟೋಬರ್ 16 ರಂದು ಕಾಂಗ್ರೆಸ್ನ ಕಾರ್ಯಕಾರಿ ಸಭೆಯು ನಡೆಯಲಿದೆ. ಆ ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಲಾಗುತ್ತದೆ, ನೋಡೋಣ," ಎಂದು ಕೂಡಾ ಡಿ ಕೆ ಶಿವಕುಮಾರ್ ಉಲ್ಲೇಖ ಮಾಡಿದ್ದಾರೆ.
ಈ ಹಿಂದೆ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, "ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸಮಸ್ಯೆಗಳು ಇರುವ ಕಾರಣದಿಂದಾಗಿ ರಾಹುಲ್ ಗಾಂಧಿ ಇನ್ನು ಮುಂದೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು," ಎಂದಿದ್ದರು.
ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
"ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ನೀವು ಆಗಬೇಕು ಎಂದು ನಾವು ರಾಹುಲ್ ಗಾಂಧಿ ಅವರಿಗೆ ಸಲಹೆಯನ್ನು ನೀಡಿದ್ದೇನೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿ ಅವರನ್ನು ಕೆಳಗಿಳಿಸುವುದು ಅವರು ಅಸಮರ್ಥರು ಎಂದು ಅಲ್ಲ. ಆದರೆ ಸೋನಿಯಾ ಗಾಂಧಿ ಆರೋಗ್ಯವು ಸರಿಯಾಗಿಲ್ಲ. ಆದ್ದರಿಂದ ಶೀಘ್ರದಲ್ಲೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳುವಂತೆ ನಾನು ರಾಹುಲ್ ಗಾಂಧಿಗೆ ಸಲಹೆ ನೀಡುವುದು," ಎಂದು ಕೂಡಾ ಸಿದ್ಧರಾಮಯ್ಯ ತಿಳಿಸಿದ್ದರು.
ಇನ್ನು ಈ ಸಂದರ್ಭದಲ್ಲೇ ಸಿದ್ಧರಾಮಯ್ಯರಿಗೆ ರಾಷ್ಟ್ರೀಯ ನಾಯಕತ್ವ ನೀಡುವ ಪ್ರಸ್ತಾಪ ಮಾಡಿದ್ದರು, ಆದರೆ ಸಿದ್ಧರಾಮಯ್ಯ ರಾಷ್ಟ್ರ ನಾಯಕತ್ವವನ್ನು ತಿರಸ್ಕಾರ ಮಾಡಿದ್ದರು ಎಂಬ ವದಂತಿಗಳ ಬಗ್ಗೆ ಇದೇ ಸಂದರ್ಭದಲ್ಲಿ ಮಾತನಾಡಿದ್ದ ಡಿ ಕೆ ಶಿವಕುಮಾರ್ "ಇದನ್ನು ನಾಯಕತ್ವವು ನಿರ್ಧಾರ ಮಾಡಬೇಕು. ಆದರೆ ಕಾಂಗ್ರೆಸ್ ರಾಜ್ಯ ನಾಯಕತ್ವದಲ್ಲಿ ಆ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ," ಎಂದು ಹೇಳಿದರು.
ಇನ್ನು ಈ ಬಗ್ಗೆ ಸ್ಪಷ್ಟಣೆ ನೀಡಿದ್ದ ಸಿದ್ಧರಾಮಯ್ಯ, "ನನ್ನನ್ನು ರಾಷ್ಟ್ರರಾಜಕಾರಣಕ್ಕೆ ಸೋನಿಯಾಗಾಂಧಿ ಅವರು ಆಹ್ವಾನ ಮಾಡಿದ್ದರು ಎಂಬುವುದು ಸುಳ್ಳು ಸುದ್ದಿ. ನಮ್ಮ ಮಾತುಕತೆಯ ಸಂದರ್ಭ ಈ ಬಗ್ಗೆ ಯಾವುದೇ ಪ್ರಸ್ತಾಪ ನಡೆದಿಲ್ಲ. ನಾನೂ ಸಹ ಈ ವಿಚಾರದಲ್ಲಿ ಮಾತನಾಡಿಲ್ಲ. ಈ ಹಿಂದೆ ರಾಹುಲ್ ಗಾಂಧಿ ಅವರು ನನ್ನನ್ನು ಕರೆದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗುವಂತೆ ಸೂಚಿಸಿದ್ದರು. ಆದರೆ, ನಾನು ಬೇಡ ಎಂದಿದ್ದೆ. ಬಳಿಕ ಅವರು ಕಾರ್ಯಕಾರಿ ಸಮಿತಿಯ ಸದಸ್ಯನನ್ನಾಗಿ ನೇಮಿಸಿದರು. ಕೆಲ ದಿನಗಳ ಬಳಿಕ ಅದಕ್ಕೂ ರಾಜೀನಾಮೆ ನೀಡಿದ್ದೆ. ಪಂಚರಾಜ್ಯದ ಚುನಾವಣೆಗೆ ನನ್ನನ್ನು ಬಳಸಿಕೊಳ್ಳುತ್ತಾರೆ ಎಂಬುದು ಸುಳ್ಳು. ಈ ಬಗ್ಗೆ ಚರ್ಚೆಯೇ ಆಗಿಲ್ಲ,'' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
(ಒನ್ಇಂಡಿಯಾ ಸುದ್ದಿ)