ಬಿಜೆಪಿಯ ಪ್ರಮುಖ ಒಕ್ಕಲಿಗ ಮುಖಂಡನಿಗೆ ಕಾಂಗ್ರೆಸ್ ಗಾಳ?
ಚನ್ನಪಟ್ಟಣ, ಅಕ್ಟೋಬರ್ 10: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ನ ಶಾಸಕರನ್ನು ಸೆಳೆದು ಸರ್ಕಾರ ರಚಿಸಿ ಬೀಗುತ್ತಿರುವ ಬಿಜೆಪಿಗೆ ಅವರದ್ದೇ ದಾಟಿಯನ್ನು ಸೆಡ್ಡು ಹೊಡೆಯಲು ಕಾಂಗ್ರೆಸ್ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಿದೆ.
ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕರೊಬ್ಬರನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವ ಪ್ರಯತ್ನ ಆರಂಭಿಸಿದೆ. ಮಾಜಿ ಶಾಸಕ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಸೋಲಪ್ಪಿದ್ದ ಸಿ.ಪಿ.ಯೋಗೇಶ್ವರ್ ಅನ್ನು ಕಾಂಗ್ರೆಸ್ಗೆ ಸೆಳೆಯುವ ಯತ್ನ ಮಾಡಲಾಗಿದೆ.
ರಾಮನಗರ ರಾಜಕೀಯದಲ್ಲಿ ದಾಳ ಉರುಳಿಸಿದ ಸಿದ್ದರಾಮಯ್ಯ!
ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಸಿ.ಪಿ.ಯೋಗೇಶ್ವರ್ ಬಹು ಮಹತ್ವದ ಪಾತ್ರ ವಹಿಸಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಅಸಮಾಧಾನ ಅವರಿಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಬಿಜೆಪಿಯಿಂದ ಕದಲಿಸುವ ಯತ್ನಕ್ಕೆ ಕೈ ಹಾಕಲಾಗಿದೆ. ಈ ಬಗ್ಗೆ ಚನ್ನಪಟ್ಟಣದಲ್ಲಿ ಕೆಲವು ದಿನಗಳಿಂದ ಚರ್ಚೆ ಆರಂಭವಾಗಿದೆ.
ಸಿ.ಪಿ.ಯೋಗೇಶ್ವರ್ ಅವರಿಗೆ ಪಕ್ಷಾಂತರ ಹೊಸದೇನಲ್ಲ
ಸಿಪಿ.ಯೋಗೇಶ್ವರ್ ಅವರಿಗೆ ಪಕ್ಷಾಂತರ ಹೊಸದೇನೂ ಅಲ್ಲ, ಅವರು ಈಗಾಗಲೇ ಹಲವು ಬಾರಿ ಪಕ್ಷ ಬದಲಾವಣೆ ಮಾಡಿದ್ದಾರೆ. ಹಿಂದೆ ಕಾಂಗ್ರೆಸ್ನಲ್ಲೂ ಸಿ.ಪಿ.ಯೋಗೀಶ್ವರ್ ಇದ್ದರು. ಸಮಾಜವಾದಿ ಪಕ್ಷದಿಂದಲೂ ಒಮ್ಮೆ ಶಾಸಕರಾಗಿ ಆಯ್ಕೆ ಆಗಿದ್ದರು. ಆನಂತರ ಬಿಜೆಪಿ ಸೇರ್ಪಡೆ ಆಗಿದ್ದರು.
ಸಮಯ ಸದುಪಯೋಗಪಡಿಸಿಕೊಳ್ಳುತ್ತಾರೆಯೇ ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣದಲ್ಲಿ ಹಿಡಿತವಿರುವ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದು, ಡಿ.ಕೆ.ಸುರೇಶ್ ಸಹ ಬಹುಸಮಯ ದೆಹಲಿಯಲ್ಲಿಯೇ ಕಳೆಯುತ್ತಿದ್ದಾರೆ. ಹಾಗಾಗಿ ಕ್ಷೇತ್ರದ ಕಾಂಗ್ರೆಸ್ನಲ್ಲಿ ಶೂನ್ಯ ಭಾವ ಆವರಿಸಿದೆ. ಹಾಗಾಗಿ ಈ ಸಮಯದ ಸದುಪಯೋಗ ಪಡಿಸಿಕೊಳ್ಳಲು ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ಗೆ ಮರುಪ್ರವೇಶ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ : ಸಿ. ಪಿ. ಯೋಗೇಶ್ವರ
ಸಿದ್ದರಾಮಯ್ಯ ಅವರಿಂದಲೇ ಸಿ.ಪಿ.ಯೋಗೇಶ್ವರ್ಗೆ ಕರೆ?
ಸಿ.ಪಿ.ಯೋಗೇಶ್ವರ್ಗೆ ಸ್ವತಃ ಕಾಂಗ್ರೆಸ್ ಹಿರಿಯ ಸಿದ್ದರಾಮಯ್ಯ ಅವರಿಂದಲೇ ಕರೆ ಹೋಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಡಿ.ಕೆ.ಶಿವಕುಮಾರ್-ಡಿ.ಕೆ.ಸುರೇಶ್ಗೆ ಪರ್ಯಾಯವಾಗಿ ಒಕ್ಕಲಿಗ ನಾಯಕನನ್ನು ಸೃಷ್ಟಿಸುವ ಕಾರಣದಿಂದ ಸಿದ್ದರಾಮಯ್ಯ ಅವರೇ ಯೋಗೀಶ್ವರ್ಗೆ ಬುಲಾವ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಸುದ್ದಿ ತಳ್ಳಿ ಹಾಕಿರುವ ಸಿ.ಪಿ.ಯೋಗೇಶ್ವರ್
ಆದರೆ ಈ ಸುದ್ದಿಯನ್ನು ಸಿ.ಪಿ.ಯೋಗೇಶ್ವರ್ ತಳ್ಳಿ ಹಾಕಿದ್ದಾರೆ. 'ನನಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಬಂದಿಲ್ಲ' ಎಂದು ಯೋಗೀಶ್ವರ್ ಹೇಳಿದ್ದಾರೆ. ಯೋಗೇಶ್ವರ್ ಬೆಂಬಲಿಗರೂ ಇದನ್ನೇ ಹೇಳುತ್ತಿದ್ದು, 'ಹಿಂದೆ ಪಕ್ಷಾಂತರ ಮಾಡಿದ್ದರು ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ಡಿ.ಕೆ.ಎಸ್ ಸಹೋದರರೊಂದಿಗೆ ವೈರತ್ವ ತಾರಕಕ್ಕೆ ಏರಿದೆ ಈ ಸಮಯದಲ್ಲಿ ಯೋಗೇಶ್ವರ್ಗೆ ಕಾಂಗ್ರೆಸ್ಗೆ ಹೋಗಲಾರರು ಎಂದಿದ್ದಾರೆ ಯೋಗೀಶ್ವರ್ ಬೆಂಬಲಿಗರು.
ಅನಿಲ್ ಚಿಕ್ಕಮಾದುಗೆ 100 ಕೋಟಿಯ ಡೀಲ್ ಕೊಟ್ಟರೆ ಸಿಪಿ ಯೋಗೀಶ್ವರ್?
ಯೋಗೇಶ್ವರ್ಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು
ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಗೇಶ್ವರ್ಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ಈಗ ಅವರನ್ನು ಮೂಲೆಗುಂಪು ಮಾಡಲಾಗಿದೆ. ಆದರೆ ಪ್ರಸ್ತುತ ಬರುತ್ತಿರುವ ಉಪಚುನಾವಣೆಯ ಉಸ್ತುವಾರಿ ಅವರಿಗೆ ವಹಿಸುವ ಸಾಧ್ಯತೆ ಇದೆ. ಯಾವುದಾದರೂ ಎರಡು ಕ್ಷೇತ್ರಗಳ ಉಸ್ತುವಾರಿಯನ್ನು ಯೋಗೇಶ್ವರ್ಗೆ ವಹಿಸಿ ಅವರನ್ನು ಸುಮ್ಮನಾಗಿಸುವ ಪ್ರಯತ್ನ ಬಿಜೆಪಿ ಮಾಡಬಹುದು.