ಕೊಂಡಯ್ಯ ವಿರುದ್ಧ ಶಿಸ್ತು ಕ್ರಮ : ಪರಮೇಶ್ವರ್
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ್, ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆಂದು ನಿವೇಶನ ಮಂಜೂರು ಮಾಡಿಸಿಕೊಂಡು, ಸದ್ಯ ಅಲ್ಲಿ ಬೇರೆ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿರುವುದು ನಿಜ. ಈ ಕುರಿತು ಅವರಿಂದ ವಿವರಣೆ ಪಡೆದ ನಂತರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬಳ್ಳಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಆಂಜನೇಯಲು ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಪಡೆದ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ನ ಟ್ರಸ್ಟಿಗಳು ಬದಲಾಗಿದ್ದು, ನಿವೇಶನ ಮಂಜೂರು ಉದ್ದೇಶ ಕೂಡ ಬದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಿವೇಶನದ ಕುರಿತು ಮಾಹಿತಿ ನೀಡಿದ ಪರಮೇಶ್ವರ್, 2001 ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಅಡಿ ಕಾಂಗ್ರೆಸ್ ಕಚೇರಿ ಕಟ್ಟಲು 99 ವರ್ಷಕ್ಕೆ 86*65 ಚದರ ಅಡಿ ಸರ್ಕಾರಿ ಜಾಗವನ್ನು ಗುತ್ತಿಗೆ ನೀಡಲಾಗಿತ್ತು. ಟ್ರಸ್ಟಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಎಂ.ವೈ.ಘೋರ್ಪಡೆ, ದಿವಾಕರ್ ಬಾಬು, ಸಿರಾಜ್ ಶೇಖ್ ಅವರನ್ನು ಟ್ರಸ್ಟಿಗಳಾಗಿ ಮಾಡಲಾಗಿತ್ತು.
ಆದರೆ, 2005ರಲ್ಲಿ ಪಕ್ಷದ ಹಿರಿಯ ನಾಯಕ ಕೆ.ಸಿ.ಕೊಂಡಯ್ಯ ಉಳಿದ ಟ್ರಸ್ಟಿಗಳನ್ನು ಬದಲಾವಣೆ ಮಾಡಿದ್ದಾರೆ. ತಮ್ಮ ಪತ್ನಿ ಮೀನಾಕ್ಷಿ, ಮಗ ಕೆ.ವಿ.ಆರ್. ಪ್ರಸಾದ್ ಅವರನ್ನು ಟ್ರಸ್ಟಿಗಳನ್ನಾಗಿ ಕೊಂಡಯ್ಯ ನೇಮಕ ಮಾಡಿದ್ದಾರೆ ಎಂದು ತಿಳಿಸಿದರು. ಟ್ರಸ್ಟಿಗಳು ಬದುಕಿದ್ದಾಗಲೇ ಅವರನ್ನು ಬದಲಿಸಿದ್ದು ಏಕೆ? ಎಂಬುದು ತಿಳಿಯುತ್ತಿಲ್ಲ ಎಂದರು.
ಸದ್ಯ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ನಿವೇಶನದಲ್ಲಿ ವಾಣ್ಯಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ. ಟ್ರಸ್ಟಿಗಳು ಬದಲಾವಣೆಯಾಗಿದ್ದಾರೆ. ಕೆ.ಸಿ.ಕೊಂಡಯ್ಯ ಅವರಿಂದ ಈ ಕುರಿತು ವಿವರಣೆ ಪಡೆದು, ಜಿಲ್ಲಾಧಿಕಾರಿಗಳಿಂದಲೂ ಸಮಗ್ರ ವರದಿ ಪಡೆದು ಕೊಂಡಯ್ಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.