ಸಿದ್ದಗಂಗಾ ಶ್ರೀಗಳಿಗೆ ಸಿಗದ ಭಾರತ ರತ್ನ, ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಜನವರಿ 28: ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯರಾಗಿರುವ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಕಾಂಗ್ರೆಸ್ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದೆ.
ಸಿದ್ದಗಂಗಾ ಸ್ವಾಮೀಜಿಯವರು ಅಕ್ಷರ ದಾಸೋಹದ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಿದ್ದಾರೆ, ಭಾರತದಲ್ಲಿ ಜ್ಯೋತಿಯಾಗಿ ಬೆಳಗಿದಂತಹ ತಪಸ್ವಿಗೆ ಭಾರತ ರತ್ನ ಪ್ರಶಸ್ತಿ ದೊಡ್ಡದೇನಲ್ಲ ಆದರೆ ಪ್ರಶಸ್ತಿಯಿಂದ ಶ್ರೀಗಳಿಗೆ ಗರಿ ಬರುತ್ತಿರಲಿಲ್ಲ ಆದರೆಅವರಿಗೆ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಗೆ ಯೋಗ್ಯತೆ ಹೆಚ್ಚುತ್ತಿತ್ತು ಎಂದು ಹೇಳಿದ್ದಾರೆ.
ಭಾರತ ರತ್ನದ ಸುತ್ತಾ ಸುತ್ತಿಕೊಂಡಿರುವ ವಿವಾದಗಳು
ಆರ್ಎಸ್ಎಸ್ ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡಿದರೆ ಜನರು ಒಪ್ಪಬೇಕಲ್ಲ, ಬಿಜೆಪಿಯವರು ಧರ್ಮ, ಸಂಸ್ಕೃತಿ ನಮ್ಮ ಸ್ವತ್ತು ಅಂದುಕೊಂಡಿದ್ದಾರೆ, ಆದರೆ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ಬೆಳಗಿದರನ್ನು ಗುರುತಿಸಲು ವಿಫಲರಾಗಿದ್ದಾರೆ, ಅವರು 111 ವರ್ಷ ಶತಾಯುಷಿಗಳಾಗಿ ಬದುಕಿ , ಜಗತ್ತಿನಾದ್ಯಂತ ಹೆಸರು ಮಾಡಿದ್ದರು.
ಆದರೆ ಸಿದ್ದಗಂಗಾ ಶ್ರೀ ಹೆಸರನ್ನು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ, ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನಿರಾಕರಿಸಿದ್ದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಫ್ರೀಡಂ ಪಾರ್ಕ್ ವರೆಗೆ ಕರ್ನಾಟಕ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.