ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ: ಸಿಎಂಗೆ ಪತ್ರ ಬರೆದ ಎಚ್ ಕೆ ಪಾಟೀಲ್
ಬೆಂಗಳೂರು, ಮೇ 14: ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ""ಪ್ರಸ್ತುತ ಎಪಿಎಂಸಿ ಕಾಯ್ದೆಯಲ್ಲಿ ಮುಗ್ಧ ರೈತರನ್ನು ಶೋಷಿಸುವವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ನೀವು ಈ ಕಾಯ್ದೆಗೆ ಸುಗ್ರಿವಾಜ್ಞೆ ತಂದು ಎಪಿಎಂಸಿ ಹೊರಗಿನ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದೀರಿ.ಇದು ಸರಿಯಾದ ಕ್ರಮವಲ್ಲ'' ಎಂದು ಹೇಳಿದ್ದಾರೆ.
ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಅದಕ್ಕೆ ಅಷ್ಟೊಂದು ವಿರೋಧ ಯಾಕೆ?
""ಕಾಯ್ದೆಗೆ ತಿದ್ದುಪಡಿ ತಂದು ಸುಗ್ರಿವಾಜ್ಞೆ ಹೊರಡಿಸುವುದರಿಂದ ರೈತರ ಶೋಷಣೆಗೆ ಮಣೆ ಹಾಕಿದಂತಾಗುತ್ತದೆ, ಎಪಿಎಂಸಿ ಯಾರ್ಡನಲ್ಲಿನ ವ್ಯಾಪಾರಸ್ಥರಿಗೆ ಒಂದು ಕಾನೂನು ಯಾರ್ಡ್ ಹೊರಗೆ ಇರುವ ವ್ಯಾಪಾರಸ್ಥರಿಗೆ ಒಂದು ಕಾನೂನು ಮಾಡಿದಂತಾಗುತ್ತದೆ. ಶೋಷಣೆ ಮುಕ್ತ ವ್ಯಾಪಾರಕ್ಕೆ ತಿಲಾಂಜಲಿ ನೀಡಿದಂತಾಗುತ್ತದೆ. ಅತ್ಯಂತ ಶೋಷಣೆಯುಕ್ತ ಕಾನೂನು ಮಾಡಿದಂತಾಗುವುದು'' ಎಂದು ಎಚ್ ಕೆ ಪಾಟೀಲ್ ಪತ್ರದಲ್ಲಿ ಎಚ್ಚರಿಸಿದ್ದಾರೆ.
""ಕೆಲವು ಅಧಿಕಾರಿಗಳ ಒತ್ತಡದಿಂದ ಮುಖ್ಯಮಂತ್ರಿಗಳು ಸುಗ್ರಿವಾಜ್ಞೆ ತರಲು ಹೊರಟಿದ್ದಾರೆ ಎಂದು ತಿಳಿದು ಬಂದಿದೆ. ಈ ತಿದ್ದುಪಡಿಯು ರೈತರ ಮೇಲೆ ಯಾವ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯದೇ ಸರ್ಕಾರ ಸುಗ್ರಿವಾಜ್ಞೆ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲ. ಒಂದು ವೇಳೆ ಕಾಯ್ದೆಗೆ ತಿದ್ದುಪಡಿ ತರುವುದಾದರೆ ಶಾಸನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಜಾರಿಗೆ ತನ್ನಿ'' ಎಂದು ಎಚ್ ಕೆ ಪಾಟೀಲ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸುಗ್ರಿವಾಜ್ಞೆಯನ್ನು ಸಚಿವ ಸಂಪುಟದ ಒಪ್ಪಿಗೆ ತೆಗೆದುಕೊಂಡಿಲ್ಲ ಎಂದು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಹೀಗಾಗಿ ಇಂದು ಈ ವಿಷಯ ಇಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ.