ಪೇಸಿಎಂ ಪೋಸ್ಟರ್' ಅಭಿಯಾನ: ಸಿದ್ದು, ಡಿಕೆಶಿ ವಿರುದ್ಧ ಎನ್ಸಿಆರ್
ಬೆಂಗಳೂರು, ಸೆಪ್ಟಂಬರ್ 25: 'ಪೇಸಿಎಂ ಪೋಸ್ಟರ್' ಅಭಿಯಾನದ ಭಾಗವಾಗಿ ಪೂರ್ವಾನುಮತಿ ಇಲ್ಲದೇ ರಸ್ತೆಗೆ ಕಾಂಗ್ರೆಸ್ ನಾಯಕರು ಇಳಿದಿದ್ದರು. ಈ ಸಂಬಂಧ ವಿರೋಧ ಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಇನ್ನಿತರರ ವಿರುದ್ಧ ಪೊಲಿಸರು ಶನಿವಾರ ನಾನ್ ಕಾಗ್ನಿಸೇಬಲ್ ವರದಿ (ಎನ್ಸಿಆರ್) ದಾಖಲಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ನಾನುಮತಿ ಇಲ್ಲದೇ ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಬೃಹತ್ ಗುಂಪು ಸಹಿತ ರಸ್ತೆ ಇಳಿದರು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನಸವಾರರು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು. ಹೀಗೆಂದು ಉಲ್ಲೇಖಿಸಿ ಹೈಗ್ರೌಂಡ್ಸ್ ಪೊಲೀಸರು ನಾನ್ ಕಾಗ್ನಿಸೇಬಲ್ ವರದಿ (ಎನ್ಸಿಆರ್) ಹಾಕಿದ್ದಾರೆ. ಇದು ಘೋರ ಅಲ್ಲದ ಸಾಮಾನ್ಯ ಪ್ರಕರಣಗಳಿಗೆ ಎನ್ಸಿಆರ್ ದಾಖಲಿಸಬಹುದಾದರೂ ಸಹ ಈ ವರದಿಯನ್ನು ಎಫ್ಐಆರ್ ಆಗಿ ಪರಿವರ್ತಿಸಬಹುದು. ಇಲ್ಲವೇ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂಗಳಡಿ ತನಿಖೆಗೆ ಒಳಪಡಿಸುವ ಅವಕಾಶವೂ ಇದೆ.
ಪೇಸಿಎಂ ಅಭಿಯಾನದಿಂದ ರಾಜ್ಯದ ಘನತೆ ಮಣ್ಣುಪಾಲು: ಸಚಿವ ಸುಧಾಕರ್
ಬಿಜೆಪಿ 40ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ ಎಂದು ಕಾಂಗ್ರೆಸ್ ಆಪಾದಿಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖಚಿತ್ರವುಳ್ಳ ಕ್ಯೂಆರ್ಕೋಡ್ ಇರುವ 'ಪೇಸಿಎಂ' ಪೋಸ್ಟರ್ ಅನ್ನು ನಗರದೆಲ್ಲಡೆ ಅಂಟಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿಯೇ ಶನಿವಾರ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ರಸ್ತೆ ಗಿಳಿದಿದ್ದರು. ಈ ವೇಳೆ ಸಿದ್ದರಾಮಯ್ಯ, ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತಿತರರನ್ನು ಆಕ್ಷಣಕ್ಕೆ ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಈ ಕುರಿತು ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಗ್ಗದ ರಾಜಕೀಯ ಪ್ರಚಾರಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಕೊಳಕು ರಾಜಕಾರಣ ಇದು. ಬೇಕಿದ್ದರೆ ಸೂಕ್ತ ಸಾಕ್ಷ್ಯಾಧಾರ ಸಹಿತ ಚರ್ಚೆಗೆ ಬರಲಿ. ದಾಖಲೆಗಳು ಇದ್ದರೆ ವಿಸ್ತೃತ ತನಿಖೆಯಾಗಲಿ. ಕಾಂಗ್ರೆಸ್ ನಾಯಕರು ಹತಾಶರಾಗಿದ್ದು, ನೈತಿಕ ಮೌಲ್ಯ ಕಳೆದುಕೊಂಡಿದ್ದಾರೆ ಎಂದು ಅವರು ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ವಿರುದ್ಧ ಸುಧಾಕರ್ ವಾಗ್ದಾಳಿ
ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಪ್ರಮುಖ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಸಹಿಸಲಾಗದೇ ಹೀಗೆ ಮಾಡುತ್ತಿದೆ. ವಿನಾಕಾರಣ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪೇಸಿಎಂ ಅಭಿಯಾನ ಪ್ರಾರಂಭಿಸಿದೆ ಎಂದು ಕಿಡಿ ಕಾರಿದರು.
ಬೇರೆ ಜಿಲ್ಲೆಗಳಲ್ಲೂ 'ಪೇಸಿಎಂ' ಪೋಸ್ಟರ್
ಈ ಮಧ್ಯೆ ಬೆಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಹ 'ಪೇಸಿಎಂ ಪೋಸ್ಟರ್' ಕಾಣಿಸಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ ಶನಿವಾರ ಪೇಸಿಎಂ ಪೋಸ್ಟರ್ ಕಂಡಿವೆ. ಇನ್ನೂ ಶಿವಮೊಗ್ಗದ ಡಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಹೆಚ್.ಎಂ.ರೇವಣ್ಣ, ಮಧು ಬಂಗಾರಪ್ಪ ಪೇಸಿಎಂ ಪೋಸ್ಟರ್ಗಳನ್ನು ಅಂಟಿಸಿದ ದೃಶ್ಯ ಕಂಡು ಬಂತು.