ಬೆಂಬಲದ ನಿರೀಕ್ಷೆಯಲ್ಲಿದ್ದ ಪ್ರಕಾಶ್ ರೈ ಗೆ ಕೈ ಕೊಟ್ಟ ಕಾಂಗ್ರೆಸ್
Recommended Video
ಬೆಂಗಳೂರು, ಫೆಬ್ರವರಿ 19: ಕಾಂಗ್ರೆಸ್ ಪಕ್ಷವು ಬೆಂಬಲ ನೀಡುತ್ತದೆ ಎಂಬ ಅಲ್ಪ ನಿರೀಕ್ಷೆಯಲ್ಲಿದ್ದ ನಟ ಪ್ರಕಾಶ್ ರೈಗೆ ನಿರಾಸೆ ಆಗಿದೆ. ಪ್ರಕಾಶ್ ರೈಗೆ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಪ್ರಕಾಶ್ ರೈ ಅವರು ಕಾಂಗ್ರೆಸ್ ಪಕ್ಷ ಸೇರಿದರೆ ಬೆಂಬಲ ನೀಡುವ ಯೋಚನೆ ಮಾಡಬಹುದು ಎಂದಿದ್ದಾರೆ.
ಬೆಂಗಳೂರು ಸೆಂಟ್ರಲ್: ಐದಕ್ಕೇರಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ತಮಗೆ ಬೆಂಬಲ ನೀಡುವಂತೆ ಪ್ರಕಾಶ್ ರೈ ಅವರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಆಗಿ ಮನವಿ ಮಾಡಿದ್ದರು. ಆದರೆ ಬೆಂಬಲ ನೀಡಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಿರಾಕರಿಸಿದ್ದಾರೆ.
ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಪಕ್ಷವು ಬೆಂಬಲ ನೀಡುತ್ತದೆ ಎಂಬ ಸಣ್ಣ ನಿರೀಕ್ಷೆ ಇತ್ತು ಆದರೆ ಅದು ಹುಸಿಯಾಗಿದೆ. ಲೋಕಸಭೆ ಚುನಾವಣೆ ಕಣದಲ್ಲಿ ಪ್ರಕಾಶ್ ರೈ ಒಬ್ಬರೇ ತಮ್ಮ ಸ್ವಂತ ಬಲದಿಂದಲೇ ಹೋರಾಡಬೇಕಿದೆ.
ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಪ್ರಕಾಶ್ ರೈ ಹೋರಾಡಬೇಕಿದೆ. ಪ್ರಸ್ತುತ ಬೆಂಗಳೂರು ಸೆಂಟ್ರಲ್ ಕ್ಷೇತ್ರವು ಬಿಜೆಪಿಯ ವಶದಲ್ಲಿದ್ದು, ಪಿ.ಸಿ.ಮೋಹನ್ ಸಂಸದರಾಗಿದ್ದಾರೆ.
ಚುನಾವಣಾ ಪ್ರಚಾರ ಆರಂಭಿಸಿದ್ದಾರೆ ಪ್ರಕಾಶ್ ರೈ
ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಕಾಶ್ ರೈ, ಕ್ಷೇತ್ರದಲ್ಲಿ ಅಡ್ಡಾಡಿ ಮತದಾರರನ್ನು ಭೇಟಿ ಆಗುತ್ತಿದ್ದಾರೆ. 'ಥಿಂಕ್ ಮಾಡಿ ಓಟ್ ಮಾಡಿ' ಅಭಿಯಾನವನ್ನು ಪ್ರಕಾಶ್ ರೈ ಪ್ರಾರಂಭಿಸಿದ್ದು, ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆಯನ್ನೂ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಮೋದಿ ಏನು ನನ್ನ ದೊಡ್ಡಪ್ಪನ ಮಗನಾ? : ಪ್ರಕಾಶ್ ರಾಜ್ ಸಂದರ್ಶನ
ಕಾಂಗ್ರೆಸ್ನಿಂದ ಐದು ಅಭ್ಯರ್ಥಿಗಳ ನಡುವೆ ಪೈಪೋಟಿ
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ಗಾಗಿ ಆಂತರಿಕವಾಗಿ ಸ್ಪರ್ಧೆ ಇದೆ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಮಾಜಿ ಸಚಿವ ರೋಷನ್ ಬೇಗ್, ನಿವೃತ್ತ ಐಎಎಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ಅವರು ಈಗಾಗಲೇ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಪಟ್ಟಿಗೆ ಸಲೀಂ ಅಹಮದ್ ಎಂಬ ಹೊಸ ಹೆಸರು ಸೇರ್ಪಡೆಯಾಗಿದೆ.
ಪ್ರಕಾಶ್ ರೈಗೆ ಬೆಂಬಲ ಬಿಜೆಪಿಗೆ ವರ?
ಇಷ್ಟೋಂದು ಸ್ಪರ್ಧೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಪಕ್ಷೇತರ ಅಭ್ಯರ್ಥಿಗೆ ಚುನಾವಣೆಯಲ್ಲಿ ಬೆಂಬಲ ನೀಡಿದರೆ ಪಕ್ಷದಲ್ಲಿ ಅಸಮಾಧಾನ ಏರ್ಪಟ್ಟು ಅದು ಬಿಜೆಪಿ ಪಕ್ಷಕ್ಕೆ ವರವಾಗಿ ಪರಿಣಮಿಸಲಿದೆ ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ, 'ಕಾಂಗ್ರೆಸ್ ರಾಷ್ಟ್ರೀಯ ಪಕ್ಷ, ಪಕ್ಷೇತರರಿಗೆ ಬೆಂಬಲ ನೀಡುವುದು ಸಾಧ್ಯವಿಲ್ಲ' ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೆಂಬ ವೈವಿಧ್ಯ, ವೈಶಿಷ್ಟ್ಯ
ಪ್ರಕಾಶ್ ರೈಗೆ ಹಾದಿ ಸುಗಮವಿಲ್ಲ
ಪ್ರಕಾಶ್ ರೈಗೆ ಆಮ್ಆದ್ಮಿ ಪಕ್ಷ ಬೆಂಬಲ ನೀಡಿದೆ, ತೆಲಂಗಾಣದ ಟಿಆರ್ಎಸ್ ಪಕ್ಷ ಬೆಂಬಲ ನೀಡಿ, ತಮ್ಮ ಪಕ್ಷಕ್ಕೂ ಆಹ್ವಾನಿಸಿತ್ತು. ಆದರೆ ಪ್ರಕಾಶ್ ರೈ ತಾವು ಬೆಂಗಳೂರು ಸೆಂಟ್ರಲ್ನಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯೇ ಗೆದ್ದಿದ್ದು, ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಕಾಶ್ ರೈ ಹೇಗೆ ಚುನಾವಣೆ ಗೆಲ್ಲುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರ ಸುತ್ತಾಡಿ ಪ್ರಣಾಳಿಕೆ ತಯಾರಿಸಲಿದ್ದಾರೆ ಪ್ರಕಾಶ್ ರೈ