ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ: ರೋಷನ್ ಬೇಗ್, ಜಮೀರ್ ಅಹ್ಮದ್ ಕಿತ್ತಾಟ
ಬೆಂಗಳೂರು, ಆ 17: ನಗರದ ಡಿಜೆ ಹಲ್ಲಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಮುಸ್ಲಿಂ ಸಮುದಾಯದ ಇಬ್ಬರು ಮುಖಂಡರ ನಡುವೆ ಕಿತ್ತಾಟ ಆರಂಭವಾಗಿದೆ.
Recommended Video
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್, ಶಿವಾಜಿನಗರದ ಮಾಜಿ ಶಾಸಕ, ಬಿಜೆಪಿ ಮುಖಂಡ ರೋಷನ್ ಬೇಗ್ ವಿರುದ್ದ ಕಿಡಿಕಾರಿದ್ದಾರೆ. "ಅಮಾಯಕ ಮುಸ್ಲಿಮರನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಈಗ ಕಣ್ಣೀರು ಹಾಕುತ್ತಿದ್ದೀರಾ'ಎಂದು ಜಮೀರ್ ಪ್ರಶ್ನಿಸಿದ್ದಾರೆ.
ಅವರಿಗೆ ಬುದ್ದಿ ಬರೋದು ಇನ್ಯಾವಾಗ? ತೀವ್ರ ವಿಷಾದ ವ್ಯಕ್ತ ಪಡಿಸಿದ ರೋಷನ್ ಬೇಗ್
ಗಲಭೆಯ ಸಂಬಂಧ, ಗೃಹಸಚಿವರನ್ನು ಭೇಟಿಯಾಗಿದ್ದ ರೋಷನ್ ಬೇಗ್, "ಇವರೆಲ್ಲಾ ಬುದ್ದಿ ಕಲಿಯುವುದು ಯಾವಾಗ, ಹಿಂದೆಯೂ ಈ ರೀತಿಯ ಘಟನೆಯು ನಡೆದಿತ್ತು. ಇಂತವರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು"ಎಂದು ಹೇಳಿಕೆಯನ್ನು ನೀಡಿದ್ದರು.
ಡಿಜೆ ಹಳ್ಳಿ ಗಲಭೆಕೋರರಿಂದಲೇ ಆಸ್ತಿ ಪಾಸ್ತಿ ನಷ್ಟ ವಸೂಲಿ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ
"ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಗಲಾಟೆ ಮಾಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಇದ್ಯಾವುದಕ್ಕೂ ಸ್ಥಾನವಿಲ್ಲ"ಎಂದು ಬೇಗ್ ಹೇಳಿದ್ದರು. ಇದಕ್ಕೆ ಜಮೀರ್ ನೀಡಿರುವ ಪ್ರತಿಕ್ರಿಯೆ ಹೀಗಿದೆ:
ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ
"ಮೂರು ದಶಕಗಳಿಗಿಂತ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದ @rroshanbaig ಅವರು ಈಗ ಮುಸ್ಲಿಮರ ಪರ ಕಣ್ಣೀರು ಹಾಕುತ್ತಿರುವುದು ತಮಾಷೆಯಾಗಿದೆ" ಜಮೀರ್ ಟ್ವೀಟ್.
ಶಿವಾಜಿನಗರ ವಿಧಾನಸಭಾ ಉಪಚುನಾವಣೆ
"ಶಿವಾಜಿನಗರದಲ್ಲಿ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್ಡಿಪಿಐ ಇತ್ತೀಚಿನ ಶಿವಾಜಿನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು" ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.
ಡಿಜೆಹಳ್ಳಿ ಗಲಭೆ
"ಡಿಜೆಹಳ್ಳಿ ಗಲಭೆ ಬಗ್ಗೆ ಇಲ್ಲಿಯ ವರೆಗೆ ಮೌನವಹಿಸಿದ್ದ @rroshanbaig ಅವರು ಇದ್ದಕ್ಕಿದ ಹಾಗೆ ಎಸ್ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಮತ್ತು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದನ್ನು ಕಂಡಾಗ ಪೊಲೀಸರ ತನಿಖೆಯ ಸುಳಿವು ಅವರಿಗೆ ಸಿಕ್ಕ ಹಾಗೆ ಕಾಣುತ್ತಿದೆ" ಜಮೀರ್ ಟ್ವೀಟ್.
ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್
"ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಎಂಬ ಆರೋಪಿಯ ಕುಕೃತ್ಯವನ್ನು ಕನಿಷ್ಠ ಖಂಡಿಸುವ ಧೈರ್ಯ ತೋರದ @rroshanbaig ಅವರು ಕಾಂಗ್ರೆಸ್ ಮತ್ತು ಎಸ್ಡಿಪಿಐ ಸಂಬಂಧದ ಕತೆ ಹೆಣೆಯುತ್ತಿರುವುದು ಅವರ ಆತ್ಮವಂಚಕ ನಡವಳಿಕೆಗೆ ಸರಿಯಾಗಿ ಹೊಂದಿಕೊಳ್ಳುತ್ತಿದೆ" ಜಮೀರ್ ಅಹ್ಮದ್ ಮಾಡಿದ ಟ್ವೀಟ್.
ಜಮೀರ್ ಅಹ್ಮದ್, ರೋಷನ್ ಬೇಗ್
"ಮಾನ್ಯ @rroshanbaig ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿ" ಎಂದು ಜಮೀರ್ ಅಹ್ಮದ್, ರೋಷನ್ ಬೇಗ್ ಗೆ ಬುದ್ದಿಮಾತನ್ನು ಹೇಳಿದ್ದಾರೆ.