ಸಿದ್ದರಾಮಯ್ಯ ವಿರುದ್ಧ ಮಾತನಾಡುವವರನ್ನು ನಾಯಿಗೆ ಹೋಲಿಸಿದ 'ಕೈ' ಶಾಸಕ
ಬೆಂಗಳೂರು, ಮೇ 13: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ- ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡುವಿನ ವಾಗ್ವಾದ, ಜೆಡಿಎಸ್-ಕಾಂಗ್ರೆಸ್ ನಡುವಿನ ಕಿತ್ತಾಟವಾಗಿ ರೂಪುಗೊಳ್ಳುತ್ತಿದೆ. ಪ್ರತಿ ಶಾಸಕರು, ಮುಖಂಡರು ತಮ್ಮ-ತಮ್ಮ ಮೆಚ್ಚಿನ ನಾಯಕನ ಪರವಾಗಿ ಮಾತಿನ ಕತ್ತಿ ಬೀಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸಿದ್ದರಾಮಯ್ಯ ಅವರ ಆಪ್ತ ಬೆಂಬಲಿಗ ಕಾಂಗ್ರೆಸ್ ಶಾಸಕ ಎಸ್.ಟೊ.ಸೋಮಶೇಖರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಸಿದ್ದರಾಮಯ್ಯ ವಿರುದ್ಧವಾಗಿ ಮಾತನಾಡುವವರನ್ನೆಲ್ಲಾ ನಾಯಿಗೆ ಹೋಲಿಸಿಬಿಟ್ಟಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ಗೆ ವಿಶ್ವನಾಥ್ ಪ್ರತಿಟ್ವೀಟ್
'ಸಿದ್ದರಾಮಯ್ಯ ಆನೆ ಇದ್ದಂತೆ, ಅವರು ನಡೆದು ಹೋಗುತ್ತಿದ್ದರೆ ನಾಯಿಗಳು ಬೊಗಳುವುದು ಸಾಮಾನ್ಯ, ಸಿದ್ದರಾಮಯ್ಯ ಅವರು ಹೊಗಳಿಕೆಗೆ ಉಬ್ಬುವುದಿಲ್ಲ, ತೆಗಳಿಕೆಗೆ ಕುಗ್ಗುವುದಿಲ್ಲ' ಎಂದು ಬಿಡಿಎ ಅಧ್ಯಕ್ಷರೂ ಆಗಿರುವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ವಿಶೇಷವಾಗಿ ಜೆಡಿಎಸ್ನ ಕುಪೇಂದ್ರ ರೆಡ್ಡಿ ವಿರುದ್ಧ ಸೋಮಶೇಖರ್ ಅವರು ಈ ಮೇಲಿನ ಮಾತುಗಳನ್ನು ಹೇಳಿದ್ದಾರಾದರೂ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರನ್ನೂ ಸೇರಿಸಿಯೇ ಹೇಳಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮುಂದುವರೆದು ಮಾತನಾಡಿರುವ ಸೋಮಶೇಖರ್, ಯಾರು ಕುಪೇಂದ್ರ ರೆಡ್ಡಿ, ಅವರು ರಾಜ್ಯಸಭಾ ಸದಸ್ಯರಾಗಿರಬಹುದು, ಅವರು ಸಮ್ಮಿಶ್ರ ಸರ್ಕಾರ ಮಾಡಿಲ್ಲ, ಅದು ಆಗಿರುವುದು ರಾಹುಲ್ ಗಾಂಧಿ, ದೇವೇಗೌಡ ಅವರ ಮಾತುಕತೆಯಿಂದ ಎಂದು ಸೋಮಶೇಖರ್ ಹೇಳಿದ್ದಾರೆ.
'ಸಿದ್ದರಾಮಯ್ಯ ಸಿಎಂ ಆಗಲೆಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ'
ಕುಪೇಂದ್ರರೆಡ್ಡಿಗೆ ದೇವೇಗೌಡರು ಮಾತನಾಡಲು ಅಧಿಕಾರ ಕೊಟ್ಟಿದ್ದಾರಾ? ದೇವೇಗೌಡರು ಮಾತನಾಡೋದನ್ನೆಲ್ಲಾ ಕುಪೇಂದ್ರ ರೆಡ್ಡಿ ಮಾತನಾಡ್ತಾರೆ ಅಂತಾ ಜಿಪಿಎ ಕೊಟ್ಟಿದ್ದಾರಾ ಎಂದು ಸೋಮಶೇಖರ್ ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಅವರು ಸಿದ್ದರಾಮಯ್ಯ ಬೆಂಬಲಿಗರನ್ನು ಚಮಚಾಗಳು ಎಂದ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರು ಅವರ ಮಟ್ಟಕ್ಕೆ ನಾವಿಲ್ಲ. ನಾವು ಸಣ್ಣಪುಟ್ಟ ಕ್ಷೇತ್ರಗಳ ಶಾಸಕರು ಎಂದು ವ್ಯಂಗ್ಯವಾಗಿ ಕಿಡಿಕಾರಿದರು.