ಅಂಗಿ ಬಿಚ್ಚಿದ್ದಕ್ಕೆ ಕಾರಣ ಕೊಟ್ಟ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್!
ಬೆಂಗಳೂರು, ಮಾ. 04: ಅಂಗಿ ಬಿಚ್ಚಿ ಪ್ರತಿಭಟನೆ ಮಾಡಿದ್ದ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನು ವಿಧಾನಸಭೆಯಿಂದ ಒಂದು ವಾರ ಕಾಲ ಅಮಾನತು ಮಾಡಲಾಗಿದೆ. ಶಾಸಕ ಸಂಗಮೇಶ್ ಅವರು ಈ ರೀತಿ ಪ್ರತಿಭಟಿಸಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಂಗಮೇಶ್ ಅವರ ನಡುವಳಿಕೆ ಸದನಕ್ಕೆ ತಕ್ಕುದಾಗಿರಲಿಲ್ಲ, ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ಘೋಷಣೆ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯದ ಮೇಲೆ ಚರ್ಚೆ ಮಾಡುವುದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾಗ ಶಾಸಕ ಸಂಗಮೇಶ್ ಅವರು ತಮ್ಮ ಶರ್ಟ್ ಬಿಚ್ಚಿ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯ ಬಜೆಟ್ ಅಧಿವೇಶನ: ಕಾಂಗ್ರೆಸ್ ಶಾಸಕ ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ್ದು ಯಾಕೆ?
ಇದೀಗ ತಾವು ಹಾಗೆ ಮಾಡಿದ್ದೇಕೆ ಎಂದು ಶಾಸಕ ಸಂಗಮೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೋಮು ದ್ವೇಷ ಹಬ್ಬಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನನ್ನ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ನನ್ನ ಪುತ್ರ, ತಮ್ಮನ ಮೇಲೂ ದಾಖಲಿಸಿದ್ದಾರೆ. ಅದನ್ನು ವಿರೋಧಿಸಿ ಸದನದಲ್ಲಿ ಶರ್ಟ್ ಬಿಚ್ಚಿ ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಶಾಸಕ ಸಂಗಮೇಶ್ ಹೇಳಿದ್ದಾರೆ.
ನಾನು ಮಾತನಾಡಲು ಸ್ಪೀಕರ್ ಅವಕಾಶ ಕೊಡಬೇಕಿತ್ತು. ಆದರೆ ಅವರು ಪಕ್ಷಪಾತಿಯಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಯಾವುದಕ್ಕೂ ಹೆದರವುದಿಲ್ಲ. ಭದ್ರಾವತಿಯಲ್ಲಿ ಬಿಜೆಪಿ ನೆಲ ಕಚ್ಚಿದೆ. ಕ್ಷೇತ್ರದಲ್ಲಿ ಇಲ್ಲಿವರೆಗೆ ಬಿಜೆಪಿಗೆ ತಳವೂರಲು ಸಾಧ್ಯವಾಗಿಲ್ಲ. ಅದಕ್ಕಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ಸಂಗಮೇಶ್ ಆರೋಪಿಸಿದ್ದಾರೆ.
Recommended Video
ಒಡೆದು ಆಳುವ ನೀತಿಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಾನು ಕೂಡ ಹಿಂದೂ. ದೇಶದಲ್ಲಿ ಇರುವ ಎಲ್ಲರೂ ಭಾರತೀಯರೇ. ಕಾಂಗ್ರೆಸ್ ಪಕ್ಷದ ನಾವು, ಶ್ರೀರಾಮನ ನಿಜವಾದ ಭಕ್ತರು. ಅವರಂತೆ ಡೋಂಗಿ ಭಕ್ತಿಯನ್ನು ನಾವು ತೋರಿಸುವುದಿಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ ಆರೋಪಿಸಿದ್ದಾರೆ.