ಇಳಿದು ಬಾ, ಇಳಿದು ಬಾ... ಸಿದ್ದರಾಮಯ್ಯಗೆ ಅಹಂಕಾರ ಇಳಿಯಿತೇ?: ರೋಷನ್ ಬೇಗ್
ಬೆಂಗಳೂರು, ಜೂನ್ 4: ಚುನಾವಣಾ ಫಲಿತಾಂಶಕ್ಕೂ ಮುನ್ನ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿದ್ದ ಮಾಜಿ ಸಚಿವ ರೋಷನ್ ಬೇಗ್, ಸ್ವಪಕ್ಷೀಯರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದ ಬೆನ್ನಲ್ಲೇ ರೋಷನ್ ಬೇಗ್ ಪುನಃ ಅಖಾಡಕ್ಕೆ ಇಳಿದಿದ್ದಾರೆ.
ಸಿಡಿದೆದ್ದ ರಾಮಲಿಂಗಾ ರೆಡ್ಡಿ, ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ!
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಸೋಲಲು ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಆರೋಪಿಸಿದ್ದಾರೆ. ತಮಗೆ ನೋಟಿಸ್ ನೀಡುವ ಪಕ್ಷ, ಸೋಲಿಗೆ ಕಾರಣರಾದ ಮುಖಂಡರಿಗೆ ಏಕೆ ನೋಟಿಸ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕೆಲವು ನಾಯಕರು ರಾಹುಲ್ ಗಾಂಧಿ ಅವರ ದಾರಿ ತಪ್ಪಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ಒಬ್ಬ ಅಪ್ರಬುದ್ಧ ಮತ್ತು ಫ್ಲಾಪ್ಷೋ. ಅವರು ಹಾಗೂ ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಮೇಲೆ ಕೆಂಡಕಾರಿದ ರೋಷನ್ ಬೇಗ್: ಸೋತ್ರೆ ನೀವೇ ಕಾರಣ
ತಮಗೆ ಮಂತ್ರಿ ಸ್ಥಾನ ಬೇಡ. ಪಕ್ಷ ಬಿಡುವುದೂ ಇಲ್ಲ. ತಾವು ಕಾಂಗ್ರೆಸ್ನ ಶಿಸ್ತಿನ ಸಿಪಾಯಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯಗೆ ಅಹಂಕಾರ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಂಕಾರದ ಸಮಸ್ಯೆ. ಅದರಿಂದಲೇ ರಾಜ್ಯ ರಾಜಕಾರಣದಲ್ಲಿ ಈ ಸಮಸ್ಯೆಗಳು ಉದ್ಭವಿಸುತ್ತಿವೆ. ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದರಲ್ಲ. ಲೋಕಸಭೆ ಚುನಾವಣೆ ಬಳಿಕ ದುರಂಹಂಕಾರ ಸ್ವಲ್ಪ ಇಳಿದಿದೆಯೇ? ಇಳಿದು ಬಾ... ಇಳಿದು ಬಾ... ಎಂದು ರೋಷನ್ ಬೇಗ್ ವ್ಯಂಗ್ಯವಾಗಿ ಹೇಳಿದರು.
ರಾಮಲಿಂಗಾರೆಡ್ಡಿ ಹೇಳಿದ್ದು ಸತ್ಯ
ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರು ಹೇಳಿದ್ದನ್ನು ಒಪ್ಪುತ್ತೇನೆ. ಅವರ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯ. ಇಂದಿಗೂ ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿ. ಕೆಲವು ನಾಯಕರು ಬೇಕಂತಲೇ ಹಲವು ನಾಯಕರನ್ನು ದೂರ ಇಟ್ಟಿರುವುದು ನಿಜ. ರಾಮಲಿಂಗಾ ರೆಡ್ಡಿ ಅವರಿಗೆ ನೋವಾಗಿದೆ. ಅದನ್ನು ಒಪ್ಪುತ್ತೇನೆ.
ಕೆಪಿಸಿಸಿ ಶೋಕಾಸ್ ನೋಟಿಸ್ಗೆ ರೋಷನ್ ಬೇಗ್ ಖಡಕ್ ಉತ್ತರ!
ಮೊದಲು ಆ ಮುಖಂಡರಿಗೆ ನೋಟಿಸ್ ನೀಡಿ
ಕಾಂಗ್ರೆಸ್ ಮುಖಂಡರು ನೋಟಿಸ್ ಬಗ್ಗೆ ಹೇಳುತ್ತಿದ್ದಾರಲ್ಲ. ಯಾವ ನೋಟಿಸ್? ಕೋಲಾರದಲ್ಲಿ ದಲಿತ ಸಂಸದ ಮುನಿಯಪ್ಪ ಅವರನ್ನು ಸೋಲಿಸಿದ ನಮ್ಮ ಪಕ್ಷ ಶಾಸಕರು ನಾಯಕರಿಗೆ ಮೊದಲು ನೋಟಿಸ್ ನೀಡಿ. ದೇಶದ ಪ್ರಧಾನಿಯಾದ ಮೊದಲ ಕನ್ನಡಿಗ ದೇವೇಗೌಡರನ್ನು ನಾಚಿಕೆಯಿಲ್ಲದಂತೆ ಸೋಲಿಸುತ್ತಾರಲ್ಲ, ನಮ್ಮವರೇ. ಯಾಕೆ ಅವರಿಗೆ ನೋಟಿಸ್ ನೀಡೊಲ್ಲ. ನಮ್ಮ ಪಕ್ಷದ ನಾಯಕರೇ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಗೌಡ ವಿರುದ್ಧವಾಗಿ ಕೆಲಸ ಮಾಡಿದರಲ್ಲ. ಮೊದಲು ಅವರಿಗೆಲ್ಲ ನೋಟಿಸ್ ಕಳಿಸಿ.
ಈ ಸರ್ಕಾರದಲ್ಲಿ ನಾನು ಮಂತ್ರಿಯಾಗೊಲ್ಲ
ಪಕ್ಷದ ನಾಯಕರು ನನಗೆ ನೀಡಿದ ನೋಟಿಸ್ ನೋಡಿ ನಗುಬಂತು. ನಾನು ಯಾವ ನೋಟಿಸ್ಗೂ ಉತ್ತರ ನೀಡುವುದಿಲ್ಲ. ನನ್ನ ಬಳಿ ಯಾರನ್ನೋ ಕಳಿಸಿ ಮಂತ್ರಿ ಮಾಡುತ್ತೇನೆ ಎಂದರು. ನಾನು ಯಾವ ಮಂತ್ರಿ ಸ್ಥಾನವೂ ಬೇಡ ಎಂದಿದ್ದೇನೆ. ರಾಮಲಿಂಗಾರೆಡ್ಡಿ, ಎಚ್ಕೆ ಪಾಟೀಲ್ ಅವರನ್ನು ಮಂತ್ರಿ ಮಾಡಲಿ. ಥೂ ಥೂ ಈ ಸರ್ಕಾರದಲ್ಲಿ ನಾನು ಮಂತ್ರಿ ಆಗುವುದಿಲ್ಲ. ಸ್ನೇಹಿತ ರಾಮಲಿಂಗಾರೆಡ್ಡಿ ಅವರೊಂದಿಗೆ ನಾನೂ ಇದ್ದೇನೆ. ಕಾಂಗ್ರೆಸ್ ಬಿಡುವುದೂ ಇಲ್ಲ, ಬೇರೆ ಪಕ್ಷ ಸೇರುವುದೂ ಇಲ್ಲ. ಅದೇನೋ ಫ್ಯಾಕ್ಟ್ ಫೈಂಡಿಂಗ್ ಸಮಿತಿ ಮಾಡಿದ್ದಾರಂತೆ. ಏನದು ಫ್ಯಾಕ್ಟ್ ಫೈಂಡಿಂಗ್. ಅವರಿಗೆ ನೊಟಿಸ್ ನೀಡಿ ಎನ್ನುವುದಕ್ಕೇ?
ಐ ಫೀಲ್ ಸಾರಿ ಫಾರ್ ರಾಹುಲ್ ಗಾಂಧಿ
ಐ ಫೀಲ್ ಸಾರಿ ಫಾರ್ ರಾಹುಲ್ ಗಾಂಧಿ. ನಮ್ಮ ಕೆಪಿಸಿ ಅಧ್ಯಕ್ಷ, ಅಪ್ರಬುದ್ಧ ವ್ಯಕ್ತಿ, ಫ್ಲಾಪ್ ಷೋ ಮತ್ತು ಕೆಲವು ನಾಯಕರು ರಾಹುಲ್ ಗಾಂಧಿ ಅವರ ದಾರಿ ತಪ್ಪಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ಲೀಡರ್ ಇವರೆಲ್ಲ ರಾಜೀನಾಮೆ ಕೊಡಲಿ. ಆಮೇಲೆ ಎಲ್ಲರೂ ಸೇರಿ ಪಕ್ಷ ಕಟ್ಟೋಣ ಎಂದರು.