ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ, ಮಾ.6 ರಂದು ಬಿಜೆಪಿಗೆ
Recommended Video
ಬೆಂಗಳೂರು, ಮಾರ್ಚ್ 04: ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಮಾ.4ರಂದು ರಾಜೀನಾಮೆ ನೀಡುವುದು ಖಚಿತ ಎಂದು ಅವರ ಸಹೋದರ ರಾಮಚಂದ್ರ ಜಾಧವ್ ನಿನ್ನೆಯೇ ತಿಳಿಸಿದ್ದರು.
ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿಗೆ?
ಸೋಮವಾರ ಬೆಳಿಗ್ಗೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಉಮೇಶ್ ಜಾಧವ್ ನೀದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ. ಕಳೆದ ಹಲವು ದಿನಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಮುನಿಸಕೊಂಡಿದ್ದ ಉಮೇಶ್ ಜಾದವ್ ಎಂದೋ ಪಕ್ಷ ಬಿಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಈ ವದಂತಿ ಇದೀಗ ಸತ್ಯವಾಗಿದೆ.
ಮಾ.6 ರಂದು ಬಿಜೆಪಿಗೆ
ಉಮೇಶ್ ಅವರು ಕಾಂಗ್ರೆಸ್ ಅತೃಪ್ತ ಶಾಸಕರಾಗಿದ್ದು ಬಿಜೆಪಿಗೆ ಹೋಗಲು ದಿನೇದಿನೆ ಅವರ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ. ಮಾ.6ರಂದು ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಬಿಜೆಪಿಗೆ ಸೇರಲಿದ್ದಾರೆ.
ಸೂಚನೆ ನೀಡಿದ್ದ ಉಮೇಶ್ ಜಾಧವ್
ಕಳೆದ ಜನವರಿಯಲ್ಲಿ ಆಹಾರ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಉಮೇಶ್ ಜಾಧವ್ ಅವರನ್ನು ನೇಮಿಸಿ ಕಾಂಗ್ರೆಸ್ ಆದೇಶ ಹೊರಡಿಸಿದ್ದರೂ ಅವರು ಅದಕ್ಕೇ ಕ್ಯಾರೇ ಎಂದಿರಲಿಲ್ಲ. ಕಳೆದ ತಿಂಗಳು ಮೈತ್ರಿ ಸರ್ಕಾರವನ್ನು ಬೀಳಿಸುವ ಬಿಜೆಪಿಯ ಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದ ಉಮೇಶ್ ಜಾಧವ್ ಬಿಜೆಪಿ ಸೇರುವುದು ಬಹುತೇಕ ಖಚಿತ ಎಂದು ಹಲವು ದಿನಗಳಿಂದಲೂ ವದಂತಿ ಹಬ್ಬಿತ್ತು.
ಖರ್ಗೆ ಸೋಲಿಸಲು ಕಾಂಗ್ರೆಸ್ ಶಾಸಕನನ್ನು ಕಣಕ್ಕಿಳಿಸಲಿದೆ ಬಿಜೆಪಿ?
ಬಿಜೆಪಿ ಲೆಕ್ಕಾಚಾರವೇನು?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅವರ ವಿರುದ್ಧ ಉಮೇಶ್ ಜಾಧವ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಯೋಚಿಸಿದೆ ಎನ್ನಲಾಗಿದೆ. ಲಂಬಾಣಿ ಸಮುದಾಕ್ಕೆ ಸೇರಿದ ಜಾಧವ್ ಈ ಭಾಗದಲ್ಲಿ ಉತ್ತಮ ಹೆಸರು ಮಾಡಿದ್ದಾರೆ.
ಸ್ಪರ್ಧೆ ಸುಲಭವಿಲ್ಲ
2018 ರ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಾಧವ್ 73000 ಕ್ಕೂ ಹೆಚ್ಚು ಮತ ಗಳಿಸಿದ್ದರು. ಆದ್ದರಿಂದ ಅವರೊಂದಿಗೆ ಸ್ಪರ್ಧೆ ಸುಲಭವೇನಿಲ್ಲ. ಈ ಭಾಗದಲ್ಲಿ ಜನಪ್ರಿಯತೆಯನ್ನೂ ಹೊಂದಿರುವ ಕಾರಣಕ್ಕೆ ಖರ್ಗೆ ಅವರಿಗೆ ಜಾಧವ್ ಬಿಸಿತುಪ್ಪ ಎನ್ನಿಸಿದರೆ ಅಚ್ಚರಿಯಿಲ್ಲ.