ನಕಲಿ ಮತದಾರರ ಚೀಟಿ ದೂರು: ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಮತ್ತೆ ಸಂಕಷ್ಟ?
ಬೆಂಗಳೂರು, ನ. 02: ನಕಲಿ ಮತದಾರರ ಗುರುತಿನ ಚೀಟಿ, ಚುನಾವಣಾ ಅಕ್ರಮ ಹಿನ್ನೆಲೆಯಲ್ಲಿ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ಅವರ ಮೇಲೆ ಬಿಜೆಪಿ ಪ್ರಕರಣ ದಾಖಲಿಸಿತ್ತು. ಅದಾದ ಬಳಿಕ ಬದಲಾದ ಸಂದರ್ಭದಲ್ಲಿ ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು. ಅವರು ಬಿಜೆಪಿ ಸೇರಿದ ಬಳಿಕವೂ ಕಳೆದ ಚುನಾವಣೆಯಲ್ಲಿ ಮುನಿರತ್ನ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತುಳಸಿ ಮುನಿರಾಜುಗೌಡ ಅವರು ಪ್ರಕರಣವನ್ನು ಹಿಂದಕ್ಕೆ ಪಡೆದಿರಲಿಲ್ಲ.
ಬಿಜೆಪಿ ಮುಖಂಡ ತುಳಸಿ ಮುನಿರಾಜುಗೌಡ ಅವರಿಗೆ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದ್ದರಿಂದ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಸುಪ್ರೀಂಕೋರ್ಟ್ ಚುನಾವಣೆ ನಡೆಸಬಹುದು ಎಂದು ತೀರ್ಪು ಕೊಟ್ಟಿದ್ದರಿಂದ ಇದೀಗ ಆರ್ ಆರ್ ನಗರ ಉಪ ಚುನಾವಣೆ ನಡೆಯುತ್ತಿದೆ. ಆದರೆ ಇದೀಗ ಅಕ್ರಮ ಮತದಾರರ ಚೀಟಿ ಆರೋಪವನ್ನು ಕಾಂಗ್ರೆಸ್ ಮುನಿರತ್ನ ಅವರ ವಿರುದ್ಧ ಮಾಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಕಾಂಗ್ರೆಸ್ ನಾಯಕರು ಕೊಟ್ಟಿರುವ ಸಾಕ್ಷಿ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕ್ಷೇತ್ರದಲ್ಲಿ 42 ಸಾವಿರ ನಕಲಿ ಮತದಾರರು
ನಕಲಿ ಮತದಾರರ ಚೀಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನನ್ನ 40 ವರ್ಷದ ರಾಜಕಾರಣದಲ್ಲಿ ಅಚ್ಚರಿಯಾಗುವ ರೀತಿ ಬಿಜೆಪಿ ಅಭ್ಯರ್ಥಿ ನಕಲಿ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಅಕ್ರಮ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಕಳೆದೊಂದು ತಿಂಗಳಿಂದ ಮನೆ ಮನೆಗೂ ಹೋಗಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ 42 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಖಾಲಿ ನಿವೇಶನದಲ್ಲಿ ಮತದಾರರು
ಖಾಲಿ ನಿವೇಶನಗಳ ವಿಳಾಸದಲ್ಲಿ ನಕಲಿ 5 ರಿಂದ 10 ಮತದಾರರ ಹೆಸರು ಸೇರಿಸಲಾಗಿದೆ. ಕೊಟ್ಟಿಗೆಪಾಳ್ಯದ ಡೋಬಿಘಾಟ್ನ ಖಾಲಿ ಜಾಗದ ಶೆಡ್ ವೊಂದರಲ್ಲೇ ಬರೋಬ್ಬರಿ 56 ಮಂದಿ ಹೆಸರು ಸೇರಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು, ತಮಿಳುನಾಡಿನಿಂದ ನಕಲಿ ಮತದಾರರನ್ನು ಕರೆದುಕೊಂಡು ಬಂದು ಇಲ್ಲಿ ಹೆಸರು ಸೇರಿಸಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಮನೆಯವರಿಗೆ ಗೊತ್ತಿಲ್ಲದ ಮತದಾರರು
ಒಂದು ಮನೆಯಲ್ಲಿ ಇಬ್ಬರು ಮೂವರು ಸದಸ್ಯರಿದ್ದರೆ ಅವರಿಗೆ ಗೊತ್ತಿಲ್ಲದೆ ಸುಮಾರು ಐದು, ಹತ್ತು, ಹದಿನೈದು ಜನರ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ನಮ್ಮ ಕಾರ್ಯಕರ್ತರು ನಿಮ್ಮ ಮನೆಯಲ್ಲಿ ಎಂಟು ಮತ ಇದೆ ಎಂದು ಕೇಳಿದರೆ, ಮನೆಯವರೇ ಗಾಬರಿ ಬಿದ್ದು, ಇರುವುದು ಬರೀ ಇಬ್ಬರು, ಮೂವರು ಮಾತ್ರ ಎಂದಿದ್ದಾರೆ. ಈ ಎಲ್ಲದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಇಲ್ಲಿ ಬಂದು ಸುಮ್ಮನೆ ಆರೋಪ ಮಾಡುತ್ತಿಲ್ಲ. ಸಾಕ್ಷಿ ಸಮೇತ ಹೇಳುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಅಧಿಕಾರಿಗಳು ಶಾಮೀಲು
ಹೀಗೆ ರಾಜರಾಜೇಶ್ವರಿ ವಾರ್ಡ್ನ 160 ಖಾಲಿ ನಿವೇಶನದಲ್ಲಿ, ಬೂತ್ 362 ಮನೆ ಸಂ.14 ರಲ್ಲಿ 15 ನಕಲಿ ಮತಗಳು ಸೃಷ್ಟಿಯಾಗಿವೆ. ಇವು ಕೇವಲ ಉದಾಹರಣೆ. ಇಂತಹ ನಕಲಿ ಮತಗಳು ಎಲ್ಲೆಡೆ ಇವೆ. ಎಲ್ಲಿ ಎಷ್ಟು ಜನ ಇದ್ದಾರೆ, ಯಾವುದು ಖಾಲಿ ನಿವೇಶನ ಅಂತಾ ವಿಡಿಯೋ ಸಾಕ್ಷಿಯನ್ನು ಆಯೀಗಕ್ಕೆ ಸಲ್ಲಿಸಿದ್ದೇವೆ. ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ನೆರವಿಲ್ಲದೆ ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಡಿಕೆಶಿ ಆರೋಪಿಸಿದರು.
ಸೆಟ್ಟಾಪ್ ಬಾಕ್ಸ್ ಹಂಚಿಕೆ
ಜೊತೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಅವರು ಮಾಧ್ಯಮಗಳ ಜತೆ ಮಾತನಾಡುವಾಗ 34 ಸಾವಿರ ಸೆಟ್ಟಾಪ್ ಬಾಕ್ಸ್ ಹಂಚಿರುವುದಾಗಿ ಒಪ್ಪಿಕೊಂಡಿದ್ದಾರೆ ಚುನಾವಣಾ ಆಯೋಗ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುವುದಾಗಿ ಹೇಳಿದೆ. ನಾವು 50 ಸಾವಿರ ಸೆಟ್ ಟಾಪ್ ಬಾಕ್ಸ್ ಅಂತಾ ಹೇಳಿದ್ದೆವು. ಆದರೆ 34 ಸಾವಿರ ಕೊಟ್ಟಿದ್ದೇನೆ ಅಂತಾ ಬಿಜೆಪಿ ಅಭ್ಯರ್ಥಿ ಒಪ್ಪಿಕೊಂಡಿದ್ದಾರೆ.
ಸ್ಪರ್ಧೆಯಿಂದ ಅನರ್ಹ ಮಾಡಿ
34 ಸಾವಿರ ಸೆಟ್ ಟಾಪ್ ಬಾಕ್ಸ್ ಗೆ ತಲಾ ಸಾವಿರದಂತೆ ಅಂದಾಜು 3.40 ಕೋಟಿ ರೂಪಾಯಿ ಆಗುತ್ತದೆ. ಇದನ್ನು ಉಚಿತವಾಗಿ ಹಂಚಿದ್ದಾರೆ. ಕನೆಕ್ಷಬ್ ಒಂದು ತಿಂಗಳ ಶುಲ್ಕ 150 ರೂ. ಫ್ರೀ ಕೊಟ್ಟರೂ ಹೆಚ್ಚುವರಿ 51 ಲಕ್ಷ ರುಪಾಯಿ ಆಗುತ್ತದೆ. ಚುನಾವಣಾ ಆಯೋಗ ಹಾಗೂ ರಿಟರ್ನಿಂಗ್ ಆಫೀಸರ್ ಸೇರಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 173 (62) ಪ್ರಕಾರ ಅವರನ್ನು ಇವತ್ತೇ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಸಂಕಷ್ಟ ಶುರುವಾಗಿದೆ ಎನ್ನಲಾಗಿದೆ.
Recommended Video