ಸುಧಾಕರ್ 'ಓಪನ್ ಚಾಲೆಂಜ್'ಗೆ ಕಾಂಗ್ರೆಸ್ ನಾಯಕರ ಪ್ರತಿ ಸವಾಲು
ಬೆಂಗಳೂರು, ಮಾರ್ಚ್ 24: ಆರೋಗ್ಯ ಸಚಿವ ಕೆ. ಸುಧಾಕರ್ ಅವರ ಹೇಳಿಕೆಗೆ ವಿವಿಧ ಪಕ್ಷಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಸುಧಾಕರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಸಂಬಂಧ ಬುಧವಾರ ಸಂಜೆ ಕಾಂಗ್ರೆಸ್ ಮುಖಂಡರು ಸೇರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪತ್ರ ಬರೆದಿದ್ದಾರೆ.
ಸಚಿವ ಸುಧಾಕರ್ ವಿರುದ್ಧ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ
"ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ. ಎಲ್ಲಾ ಮಂತ್ರಿಗಳದ್ದೂ, ಶಾಸಕರದ್ದೂ, ವಿರೋಧ ಪಕ್ಷದವರದ್ದು ಕೂಡ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧವಿದೆ? ಎಂಬುದು ತಿಳಿಯಲಿ ಬಿಡಿ" ಎಂದು ಸುಧಾಕರ್ ಹೇಳಿಕೆ ನೀಡಿದ್ದರು. ಮುಂದೆ ಓದಿ...
"ಶಾಸಕರ ನೈತಿಕತೆಯನ್ನೇ ಪ್ರಶ್ನಿಸುವಂಥದ್ದು"
ಡಾ. ಸುಧಾಕರ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ರಾಜ್ಯದ ಗೌರವಾನ್ವಿತ ಸಚಿವರಾಗಿರುವವರು. ಅವರ ಹೇಳಿಕೆ ಗಂಭೀರ ಸ್ವರೂಪದ್ದಾಗಿದೆ. ಎಲ್ಲಾ ಶಾಸಕರ ನೈತಿಕತೆಯನ್ನು ಪ್ರಶ್ನಿಸುವಂಥದ್ದಾಗಿದೆ. ಸದನ ನಡೆಯುತ್ತಿರುವಾಗ ಸಚಿವರು ನೀಡಿರುವ ಈ ಹೇಳಿಕೆ ಸದನದ ನಿಂದನೆಯಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಆಯಾ ಶಾಸಕರ ಕುಟುಂಬದ ಸದಸ್ಯರಲ್ಲಿ ಅನುಮಾನ ಮೂಡಲು ಆಸ್ಪದ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.
"ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು"
ಈ ಎಲ್ಲಾ ಕಾರಣಗಳಿಂದಾಗಿ ಸಚಿವ ಸುಧಾಕರ್ ಅವರ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಕರಣ ಹಾಗೂ ಡಾ.ಸುಧಾಕರ್ ಸೇರಿದಂತೆ ಆರು ಮಂದಿ ಸಚಿವರು ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್ಐಟಿ ತನಿಖೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ಸುಧಾಕರ್ ಅವರು ಹೆಸರಿಸಿರುವ ಪೈಕಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಅವರಾದ ನಾವು ಕೂಡ ಕೋರ್ಟ್ ಉಸ್ತುವಾರಿಯ ಎಸ್ಐಟಿ ತನಿಖೆಗೆ ಒಳಪಡಲು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಕುಮಾರಸ್ವಾಮಿ ಕೊಟ್ಟ ಮುತ್ತಿನಂತಹ ಪ್ರತಿಕ್ರಿಯೆ
ಮುಖ್ಯಮಂತ್ರಿ, ಸ್ಪೀಕರ್ಗೆ ಪತ್ರ
ಸಚಿವ ಸುಧಾಕರ್ ಅವರು ಮಹಿಳಾ ಶಾಸಕರೂ ಸೇರಿದಂತೆ ವಿಧಾನಸಭೆಯ ಎಲ್ಲ 225 ಶಾಸಕರ ವಿರುದ್ಧ ಮಾನಹಾನಿಕಾರಿ ಆಪಾದನೆ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಲಿ. ಸುಧಾಕರ್ ಅವರು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸ್ಪೀಕರ್, ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ.
ಓಪನ್ ಚಾಲೆಂಜ್ ಹಾಕಿದ್ದ ಸುಧಾಕರ್
ವಿಧಾನಸಭೆಯ ಎಲ್ಲಾ ಸಚಿವರು ಸೇರಿ ಆಡಳಿತ ಮತ್ತು ವಿರೋಧ ಪಕ್ಷದ 225 ಶಾಸಕರ ಬಗ್ಗೆ ತನಿಖೆಯಾಗಲಿ. ಯಾರು ಯಾರು ಏಕಪತ್ನಿ ವ್ರತಸ್ಥರು, ಯಾರು ಯಾರಿಗೆ ವಿವಾಹೇತರ ಸಂಬಂಧಗಳಿವೆ, ಯಾರು ಯಾರಿಗೆ ಅನೈತಿಕ ಸಂಬಂಧಗಳಿವೆ ಎಂಬುದರ ಬಗ್ಗೆ ತನಿಖೆಯಾಗಲಿ. ಆಗ ಎಲ್ಲರ ಬಂಡವಾಳ ಜನಕ್ಕೆ ಗೊತ್ತಾಗುತ್ತದೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇವರೆಲ್ಲರೂ ಸತ್ಯ ಹರಿಶ್ಚಂದ್ರರು, ಏಕ ಪತ್ನೀ ವ್ರತಸ್ಥರು, ಸಮಾಜಕ್ಕೆ ಮಾದರಿಯಾದವರು ಎಂಬುದು ಎಲ್ಲರಿಗೂ ಗೊತ್ತಾಗಲಿ. ಆಗ ಯಾರ ಯಾರ ಬಂಡವಾಳ ಏನು ಎಂಬುದು ಗೊತ್ತಾಗುತ್ತದೆ. ನಾನು ಈ ಬಗ್ಗೆ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ ಹಾಗೂ ಇದನ್ನು ಸವಾಲಾಗಿ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.