ಜೂ. 29ರಂದು ಸೈಕಲ್ ಏರಲಿದ್ದಾರೆ ಕಾಂಗ್ರೆಸ್ ನಾಯಕರು!
ಬೆಂಗಳೂರು, ಜೂ. 28: ನಾಳೆ ಸೋಮವಾರ (ಜೂ. 29) ಬೆಳಗ್ಗೆ 9.30ಕ್ಕೆ ಸೈಕಲ್ ಮೇಲೆ ಕೆಪಿಸಿಸಿ ಕಚೇರಿಗೆ ತೆರಳಲು ಕಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ತಮ್ಮ ಮನೆಗಳಿಂದ ಸೈಕಲ್ ಹೊಡೆದುಕೊಂಡು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ತೆರಳಲಿದ್ದಾರೆ.
ರಾಜ್ಯದಲ್ಲಿ ಸತತವಾಗಿ ಕಳೆದ 21 ದಿನಗಳ ಕಾಲ ನಿರಂತರವಾಗಿ ತೈಲ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏಕರೂಪವಾದಂತಿದೆ. ಹೀಗಾಗಿ ಕೊದಲೇ ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರ ಮೇಲೆ ಸರ್ಕಾರಗಳು ಮತ್ತಷ್ಟು ತೆರಿಗೆ ಹೇರಿವೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಾಳೆ ಸೈಕಲ್ ಸವಾರಿ ಮೂಲಕ ಕೆಪಿಸಿಸಿ ಕಚೇರಿಗೆ ತೆರಳುವ ಮೂಲಕ ಸಾಂಕೇತಿಕ ಪ್ರತಿಭಟನೆಯನ್ನು ಮಾಡಲಿದ್ದಾರೆ.
21ದಿನಗಳ ಬಳಿಕ ಏನಿದು ಅಚ್ಚರಿ, ತೈಲ ಬೆಲೆ ಏರಿಕೆ ಸ್ಥಗಿತ
ಪ್ರತಿಭಟನೆಯ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೂ. 29 (ಸೋಮವಾರ) ರಂದು ಬೆಳಗ್ಗೆ 9.30ಕ್ಕೆ ತಮ್ಮ ಮನೆಗಳಿಂದ ಪಕ್ಷದ ಕಚೇರಿಗೆ ಸೈಕಲ್ನಲ್ಲಿ ಬರಲಿದ್ದಾರೆ. ಬಳಿಕ ಕೇಂದ್ರ ಸರ್ಕಾರದ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.
ಸಿದ್ಧರಾಮಯ್ಯ ಸೈಕಲ್ ಖರೀದಿ: ಟಿಕ್ಟಾಕ್ನಲ್ಲಿ 'ಟಗರು' ಸೌಂಡ್
ಜಿಲ್ಲಾ ಕೇಂದ್ರಗಳಲ್ಲಿ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಏಕ ಕಾಲಕ್ಕೆ ನಡೆಯಲಿದೆ. ಕೊರೊನಾ ವೈರಸ್ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ, ಭೂ ಸುಧಾರಣೆ ಕಾಯಿದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯಿದೆ ತಿದ್ದುಪಡಿ ವಿರೋಧಿಸಿಯೂ ಮುಂದೆ ಚಳವಳಿ ಹಮ್ಮಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ.