ಸ್ಪೀಕರ್ ಭೇಟಿಯಾಗಿ ಎರಡು ವಿಷಯಗಳ ಬಗ್ಗೆ ಸಲಹೆ ಪಡೆದ ಮೈತ್ರಿ ಮುಖಂಡರು
ಬೆಂಗಳೂರು, ಜುಲೈ 17: ಸ್ಪೀಕರ್ ರಮೇಶ್ ಕುಮಾರ್ ಅವರನ್ನು ವಿಧಾನಸೌಧದಲ್ಲಿ ಕುಮಾರಸ್ವಾಮಿ-ಸಿದ್ದರಾಮಯ್ಯ ಸೇರಿದಂತೆ ಇನ್ನೂ ಕೆಲವು ಕೈ ಮುಖಂಡರು ಭೇಟಿ ಆಗಿ ಬಹು ಸಮಯ ಚರ್ಚೆ ನಡೆಸಿದರು.
ಎರಡು ಪ್ರಮುಖ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ವಿಷಯಗಳ ಬಗ್ಗೆ ಸ್ಪೀಕರ್ ಅವರ ಸಲಹೆ ಕೇಳಲು ಭೇಟಿ ನೀಡಿ ಚರ್ಚೆ ನಡೆಸಿದ್ದಾಗಿ ಭೇಟಿಯ ನಂತರ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದರು.
ಮೊದಲನೆಯದಾಗಿ ವಿಧಾನಸಭೆ ನಿಯಮಾವಳಿಗಳ ಪ್ರಕಾರ ಯಾರೇ ಸದನದಿಂದ ಹೊರಗೆ ಉಳಿಯ ಬೇಕೆಂದರೆ ಸಭಾಧ್ಯಕ್ಷರ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಅತೃಪ್ತ ಶಾಸಕರಿಗೆ ವಿನಾಯಿತಿ ಇದೆಯೇ? ಎಂಬ ಬಗ್ಗೆ ಸ್ಪೀಕರ್ ಅವರನ್ನು ಮೈತ್ರಿ ನಾಯಕರು ಕೇಳಿದ್ದಾರೆ.
ವಿಧಾನಸಭೆ ನಿಯಮಾವಳಿಗಳಲ್ಲಿ ಬದಲಾವಣೆ ಇಲ್ಲ
ವಿಧಾನಸಭೆ ನಿಯಮಾವಳಿಗಳಲ್ಲಿ ಬದಲಾವಣೆ ಇಲ್ಲ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅತೃಪ್ತರು ವಿಧಾನಸಭೆಗೆ ಬರಲೂ ಬಹುದು, ಬಾರದೆಯೂ ಇರಬಹುದು, ಆದರೆ ಬರದೇ ಇರುವ ಬಗ್ಗೆ ಸಭಾಧ್ಯಕ್ಷರ ಅಥವಾ ಸದನದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ ಇದಕ್ಕೆ ವಿನಾಯಿತಿ ಇಲ್ಲವೆಂದು ಸಭಾಧ್ಯಕ್ಷರು ಹೇಳಿದ್ದಾಗಿ ಕೃಷ್ಣಬೈರೇಗೌಡ ಹೇಳಿದರು.
ಅತೃಪ್ತರಿಗೆ ವ್ಹಿಪ್ ಜಾರಿ ಮಾಡಬಹುದೇ?
ಎರಡನೇಯದಾಗಿ, ಪಕ್ಷೇತರರು ಸದನಕ್ಕೆ ಬರುವಂತೆ ಬಲವಂತ ಪಡಿಸುವಂತಿಲ್ಲ, ಸದನದ ಯಾವುದೇ ಪ್ರಕ್ರಿಯೆಗಳು ಅವರಿಗೆ ಸಂಬಂಧಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಹೀಗಿದ್ದಾಗ ಪಕ್ಷಗಳು ಅತೃಪ್ತ ಶಾಸಕರಿಗೆ ವ್ಹಿಪ್ ಜಾರಿ ಮಾಡಬಹುದೇ, ಬೇಡವೇ? ಎಂಬ ಬಗ್ಗೆಯೂ ಸಲಹೆ ಕೇಳಲಾಗಿದೆ.
'ಅತೃಪ್ತರಿಗೆ ವ್ಹಿಪ್ ಜಾರಿ ಮಾಡಿ, ಉಲ್ಲಂಘನೆಯ ನಂತರ ಪರಿಶೀಲಿಸೋಣ'
ಇದಕ್ಕೆ ಉತ್ತರಿಸಿರುವ ಸ್ಪೀಕರ್ ಅವರು, ಈ ಬಗ್ಗೆ ಸ್ಪಷ್ಟತೆ ತಮಗಿಲ್ಲ. ವ್ಹಿಪ್ ಜಾರಿ ಮಾಡುವುದು ಪಕ್ಷಗಳ ಹಕ್ಕು, ನಿಮ್ಮ ಹಕ್ಕು ಚಲಾಯಿಸಿ, ವ್ಹಿಪ್ ಉಲ್ಲಂಘನೆ ಆದಲ್ಲಿ ಆ ನಂತರ ಶೆಡ್ಯೂಲ್ 10 ರ ಅನ್ವಯ ನನಗೆ ದೂರು ನೀಡಿ ಆ ಬಗ್ಗೆ ಆಗ ಪರಿಶೀಲನೆ ನಡೆಸೋಣ ಎಂದು ಸ್ಪೀಕರ್ ಸಲಹೆ ನೀಡಿದರು ಎಂದು ಕೃಷ್ಣಬೈರೇಗೌಡ ಹೇಳಿದರು.
ಸುಪ್ರೀಂಕೋರ್ಟ್ ತೀರ್ಪು ವಿಮರ್ಶಿಸಿದ ಕೃಷ್ಣಬೈರೇಗೌಡ
ಸುಪ್ರೀಂಕೋರ್ಟ್ ತೀರ್ಪು ಪಕ್ಷಗಳ ಹಕ್ಕುಗಳನ್ನು ಪರೋಕ್ಷವಾಗಿ ಮೊಟಕುಗೊಳಿಸುತ್ತಿದೆ. ನಾವು ಸಹ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡನೆಗೆ ಅವಕಾಶ ಬೇಡಿದ್ದೆವು ಆದರೆ ಅವಕಾಶ ದೊರೆಯಲಿಲ್ಲ ಎಂದು ಕೃಷ್ಣಬೈರೇಗೌಡ ಅವರು ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪನ್ನು ವಿಮರ್ಶಿಸಿದರು.