ಎಲ್ಲಿದ್ದೀರಾ ಮುಖ್ಯಮಂತ್ರಿ ಯಡಿಯೂರಪ್ಪ ಎಂದಿದ್ದೇಕೆ ಈ ಕಾಂಗ್ರೆಸ್ ನಾಯಕ?
ಬೆಂಗಳೂರು, ಡಿಸೆಂಬರ್.16: ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದರು. ಭೀಕರ ನೆರೆಗೆ ರಾಜ್ಯದ ಜನರ ಬದುಕು ಬೀದಿಗೆ ಬಂದು ನಿಂತಿದೆ. ಸಂತ್ರಸ್ತರಿಗೆ ಪರಿಹಾರ ನೀಡಬೇಕಿರುವ ಸರ್ಕಾರ ಮಾತ್ರ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಹಣ ಮತ್ತು ಅಧಿಕಾರದ ಬಲದಿಂದ ಉಪ ಚುನಾವಣೆ ನಡೆಸಿದ್ದು, 12 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಮಾಲೋಕದಲ್ಲಿದ್ದಾರೆ. ಶೇ.75ರಷ್ಟು ಜನರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ರಾಜ್ಯ ಚುನಾವಣಾ ಆಯೋಗ ಕೂಡಾ ಈ ನಿಟ್ಟಿನಲ್ಲಿ ಗಮನ ನೀಡಿಲ್ಲ ಎಂದು ದೂರಿದರು. ಮುಕ್ತ ನಿರ್ಭೀತ ಚುನಾವಣೆಗಳು ನಡೆಯಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತರಿಗೆ ಪರಿಹಾರ ನೀಡಿದ್ದೀರಾ ಸಿಎಂ?
ಬಿಜೆಪಿ ಸರ್ಕಾರವೇನೋ ಅಧಿಕಾರಕ್ಕೆ ಬಂದಿದೆ. ಆದರೆ, ಭ್ರಮಾ ಲೋಕದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ರಾಜ್ಯದ ಸಮಸ್ಯೆ ಬಗೆಹರಿಸುವಲ್ಲಿ ಏನಾದ್ರೂ ಬದ್ದಯೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಸಂತ್ರಸ್ತರಿಗೆ 10 ಸಾವಿರ ಕೊಡಲು 203 ಕೋಟಿ. ವಸತಿ ಯೋಜನೆಯಡಿ 742 ಕೋಟಿ, ಆರ್ ಡಿಪಿಆರ್ 1,200 ಕೋಟಿ, ಕಂದಾಯ ಇಲಾಖೆಯಿಂದ 500 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ, 1100 ಕೋಟಿ ಬೆಳೆ ನಾಶ ಸೇರಿದಂತೆ ಒಟ್ಟಾರೆ 4800 ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ ನೆರೆಗೆ ಹಾನಿಯಾಗಿದ್ದು, ಒಂದು ಲಕ್ಷ ಕೋಟಿಗೂ ಹೆಚ್ಚು ಎಂದು ಉಗ್ರಪ್ಪ ಕಿಡಿ ಕಾರಿದ್ದಾರೆ.
"ಬಿಜೆಪಿ ನಾಯಕರಿಗೇ ಬುದ್ಧಿಭ್ರಮಣೆ ಆಗಿದೆ"
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾರತ ಸಂವಿಧಾನದ ಬಗ್ಗೆ ಅರಿವಿಲ್ಲದೇ ಮಾತಮಾಡುತ್ತಾರೆ. ಬುದ್ಧಿಭ್ರಮಣೆ ಆಗಿರುವುದು ಪ್ರಲ್ಹಾದ್ ಜೋಶಿ ಅವರಿಗೇ ಹೊರತೂ ರಾಹುಲ್ ಗಾಂಧಿ ಅವರಿಗಲ್ಲ. ಈ ಹಿಂದೆ ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಅತ್ಯಾಚಾರಗಳು ನಡೆದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರೇ ಕ್ಯಾಪಿಟಲ್ ಆಫ್ ರೇಪ್ ಸಿಟಿ ಅಂತ ಕರೆದಿದ್ದರು ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
'ಬೆಂಕಿ' ಹಚ್ಚುವುದು ಕಾಂಗ್ರೆಸ್ ಕೆಲಸವಲ್ಲ ಎಂದ ಉಗ್ರಪ್ಪ
ದೆಹಲಿಯಲ್ಲಿ ನಡೆದ ಭಾರತ್ ಬಚಾವೋ ಆಂದೋಲನದಲ್ಲಿ ಜನರನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಮನ ಬಂದಂತೆ ಮಾತನಾಡುತ್ತಿದ್ದಾರೆ. ಗಲಭೆ, ಬೆಂಕಿ ಹಚ್ಚೋದಕ್ಕೆ ಕಾಂಗ್ರೆಸ್ ಕಾರಣ ಅಂತ ಪ್ರಧಾನಮಂತ್ರಿಗಳೇ ಹೇಳುತ್ತಿದ್ದಾರೆ. ಬಿಜೆಪಿಯ ಮೈಂಡ್ ಸೆಟ್ ಪ್ರಧಾನಿಗಳ ಹೇಳಿಕೆಯಲ್ಲಿ ಕಾಣುತ್ತಿದೆ. ಮಂಡಲ್ ವರದಿ, ಬಾಬ್ರಿ ಮಸೀದಿ, ಗೋದ್ರಾ ಹತ್ಯಾಕಾಂಡ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಯಾರು.
ಸಮಾಜದ ಸ್ವಾಸ್ಥ್ಯ ಕೆಡಿಸೋದಕ್ಕೆ ಆ ರೀತಿ ನಡೆದುಕೊಂಡಿದ್ದು ಯಾರು ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ ಜನರು ಎಚ್ಚೆತ್ತುಕೊಂಡಿದ್ದಾರೆ - ಉಗ್ರಪ್ಪ
ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ತೇಜೋವಧೆ ಮಾಡುವುದನ್ನು ಮೊದಲು ಬಿಡಬೇಕು. ಅವರ ಸಿದ್ದಾಂತದಂದ ಅವರ ರಾಜ್ಯವೇ ಹಿಡಿತಕ್ಕೆ ಸಿಗುತ್ತಿಲ್ಲ. ಬಡತನ, ನಿರೋದ್ಯೋಗದಿಂದ ಜನರು ಎಚ್ಚೆತ್ತು ಕೊಂಡಿದ್ದಾರೆ. ದೇಶದಲ್ಲಿ ಆಗುತ್ತಿರುವ ಅತ್ಯಾಚಾರ ಪ್ರಕರಣ ತಡೆಯಲು ಬಿಜೆಪಿ ವಿಫಲವಾಗಿದೆ. ಮೋದಿ, ಅಮಿತ್ ಶಾ ಮಾತುಗಳಲ್ಲಿ ಹತಾಶೆ ಭಾವನೆ ಕಾಣುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಈಗ ಜನರೇ ಬಿಜೆಪಿ ಮುಕ್ತ ಭಾರತ ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒರಿಸ್ಸಾ, ದೆಹಲಿ, ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ಕಡೆ ಬಿಜೆಪಿ ಇದ್ದ ಅಧಿಕಾರವನ್ನೇ ಕಳೆದುಕೊಂಡಿದೆ ಎಂದು ಕಿಡಿ ಕಾರಿದ್ದಾರೆ.
ವಿ.ಎಸ್.ಉಗ್ರಪ್ಪನನ್ನು ರೂಂನಲ್ಲಿ ಕೂಡಿ ಹಾಕಿ ಬೀಗ ಜಡಿದು ಪರಾರಿಯಾಗಿದ್ದು ಯಾರು?