ಮಂಗಳೂರು ಗೋಲಿಬಾರ್ ವಿಡಿಯೋ ಬಹಿರಂಗ: ಉಗ್ರಪ್ಪ ಏನಂದ್ರು?
ಬೆಂಗಳೂರು, ಜನವರಿ 11: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿಡಿಗಳ ಬಗ್ಗೆ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸತ್ಯ ಯಾವಾಗಲೂ ಕಹಿ ಇರುತ್ತೆ ಎಂಬುದಕ್ಕೆ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋಗಳೇ ಸಾಕ್ಷಿ. ಈ ವಿಡಿಯೋಗಳು ಬಯಲಾದ ಮೇಲೆ ಬಿಜೆಪಿ ಸರ್ಕಾರದ ಸಾಚಾತನ ಬಯಲಾಗಿದೆ. ಗೋಲಿಬಾರ್ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್ ತನಿಖೆ ಹೇಗೆ ಆಗುತ್ತೆ ಎಂಬುದು ನಮಗೆ ಗೊತ್ತಿದೆ. ನಿಜವಾಗಲೂ ತನಿಖೆ ಮಾಡುವುದಾದರೆ ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ' ಎಂದು ಸವಾಲು ಹಾಕಿದರು.
ಬಿಜೆಪಿಯದು 'ಕಟ್ ಆಂಡ್ ಪೇಸ್ಟ್' ಸರ್ಕಾರ: ವಿಡಿಯೋ ವಿವಾದಕ್ಕೆ ಎಚ್ಡಿಕೆ ತಿರುಗೇಟು
'ಜನವರಿ 12 ಕ್ಕೆ ವಿವೇಕಾನಂದರ ಜಯಂತಿ ಇದೆ. ವಿವೇಕಾನಂದರು ಇಡೀ ವಿಶ್ವದ ಜನರನ್ನು 'ಸಹೋದರ ಸಹೋದರಿಯರೇ' ಎಂದು ಸಂಬೋಧಿಸಿದ್ದವರು . ಅವರ ಜಯಂತಿಯ ಸಂದರ್ಭದಲ್ಲಾದರೂ ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದಾಳುವ ನೀತಿಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ಬಿಜೆಪಿ ರಾಷ್ಡ್ರೀಯ ಅಧ್ಯಕ್ಷರು, ಪ್ರಧಾನಿ ಹಾಗೂ ಮುಖ್ಯಮಂತ್ರಿಯವರು ಧರ್ಮಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳಬೇಕು' ಎಂದು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
'ಸಾಹಿತಿ ಎಸ್ ಎಲ್ ಬೈರಪ್ಪನವರು ಯಾವಾಗ ಬಿಜೆಪಿಗೆ ಸೇರಿದ್ರು? ಪ್ರಧಾನಿಯವರು ಬೈರಪ್ಪನವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರೆ ಬಿಜೆಪಿಯ ವಿಚಾರಧಾರೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಈ ಇಳಿ ವಯಸ್ಸಿನಲ್ಲಿ ಕಾಂಗ್ರೆಸ್ ವಿರೋಧಿ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಬಾಂಗ್ಲಾದೇಶ ವಿಮೋಚನೆ ಮಾಡಿದ್ದೂ ಕಾಂಗ್ರೆಸ್. ಈ ವಿಷಯ ಬೈರಪ್ಪನವರಿಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದರು.