ಕೈಲಾಗದವರು ಮೈ ಪರಚಿಕೊಂಡರು: ಪ್ರಧಾನಿ ಮೋದಿಗೆ ದಿನೇಶ್ ಗುಂಡೂರಾವ್ ವ್ಯಂಗ್ಯ
ಬೆಂಗಳೂರು, ಫೆಬ್ರವರಿ 18: ಮಧ್ಯಮ ವರ್ಗದ ಜನರು ಬೆಲೆ ಏರಿಕೆಯ ಹೊರೆಯನ್ನು ಹೊರುವಂತಾಗಲು ಹಿಂದಿನ ಸರ್ಕಾರಗಳು ಸ್ವದೇಶಿ ಅವಲಂಬನೆಯ ಬದಲು ಆಮದು ಉತ್ಪನ್ನಗಳ ಮೇಲೆ ಮಿತಿ ಮೀರಿ ಅವಲಂಬನೆ ಮಾಡಿಕೊಂಡಿದ್ದು ಕಾರಣ ಎನ್ನುವ ಮೂಲಕ ತೈಲ ಬೆಲೆ ಏರಿಕೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಪರೋಕ್ಷವಾಗಿ ದೂಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಕೈಲಾಗದವರು ಮೈಪರಚಿಕೊಂಡಂತೆ ಮೋದಿ ಅವರು ತಮ್ಮ ವೈಫಲ್ಯಗಳಿಗೆ ಹಿಂದಿನ ಸರ್ಕಾರಗಳ ಮೇಲೆ ಆರೋಪ ಮಾಡುವ ಚಾಳಿ ಇನ್ನೂ ಬಿಟ್ಟಿಲ್ಲ. ಈ ರೀತಿಯ ಆತ್ಮವಂಚನೆ ಏಕೆ ಮಾಡಿಕೊಳ್ಳುತ್ತೀರಿ? ಎಂದು ಅವರು ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ: ಹಿಂದಿನ ಸರ್ಕಾರಗಳನ್ನು ಹೊಣೆ ಮಾಡಿದ ಪ್ರಧಾನಿ ಮೋದಿ
ತಮ್ಮ ಸರ್ಕಾರದ ಅವಧಿಯಲ್ಲಿ ಇದ್ದ ಕಚ್ಚಾ ತೈಲದ ಮೂಲಬೆಲೆ ಹಾಗೂ ಈಗ ಇರುವ ಮೂಲ ಬೆಲೆಯನ್ನು ಅವರು ಹೋಲಿಕೆ ಮಾಡಿದ್ದಾರೆ. ಆಮದು ಅವಲಂಬನೆಯ ಮಾತನಾಡುವ ಅವರು ಸರ್ಕಾರ ವಿಧಿಸುತ್ತಿರುವ ಹೆಚ್ಚಿನ ತೆರಿಗೆ ಬಗ್ಗೆ ಕೂಡ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ನೈಸರ್ಗಿಕ ಅನಿಲದ ಬಳಕೆಗೆ ಆದ್ಯತೆ ನೀಡಲು ಹೇಳುತ್ತಿರುವುದು ಒಎನ್ಜಿಸಿಯನ್ನೂ ಮಾರಾಟ ಮಾಡಲು ಮುಂದಾದ ಸೂಚನೆ ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ದಿನೇಶ್ ಗುಂಡೂರಾವ್ ಅವರು ಸರಣಿ ಟ್ವೀಟ್ಗಳಲ್ಲಿ ಮಾಡಿರುವ ಆರೋಪಗಳು ಇಲ್ಲಿವೆ.
ಹಿಂದಿನ ಸರ್ಕಾರಗಳು ಅರ್ಹ ನಾಯಕರನ್ನು ಕಡೆಗಣಿಸಿವೆ: ಮೋದಿ ಆರೋಪ
ಯಾಕೀ ಆತ್ಮವಂಚನೆ ಮೋದಿಯವರೇ?
ಕೈಲಾಗದವರು ಮೈ ಪರಚಿಕೊಂಡರು. ಪ್ರಧಾನಿಯವರು ತಮ್ಮ ವೈಫಲ್ಯಕ್ಕೆ ಹಿಂದಿನ ಸರ್ಕಾರಗಳನ್ನು ಹೊಣೆ ಮಾಡುವ ಕೆಟ್ಟ ಚಾಳಿ ಬಿಟ್ಟಿಲ್ಲ. 6ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿಯವರು ಸರ್ಕಾರಿ ಸಂಸ್ಥೆಗಳನ್ನು ಮಾರಿದ್ದು ಬಿಟ್ಟು, ತೈಲ ಆಮದು ತಗ್ಗಿಸಲು ಕ್ರಮ ತೆಗೆದುಕೊಂಡಿದ್ದಾರೆಯೇ? ಯಾಕೀ ಆತ್ಮವಂಚನೆ ಮೋದಿಯವರೆ?
ತೆರಿಗೆ ಹೆಚ್ಚಳದ ಬಗ್ಗೆ ಮಾತನಾಡಲಿ
2014 ರಲ್ಲಿ ಪೆಟ್ರೋಲ್ ಮೂಲ ಬೆಲೆ 47.12 ರಷ್ಟಿತ್ತು. ಇಂದು ಮೂಲಬೆಲೆ ₹29.34 ಕ್ಕೆ ಇಳಿದಿದೆ. ಆದರೆ ಹಾಲಿ ಸರ್ಕಾರ 200% ರಷ್ಟು ತೆರಿಗೆ ಹೆಚ್ಚಿಸಿ 'ತೆರಿಗೆ ಲೂಟಿ' ಮಾಡುತ್ತಿರುವುದೇಕೆ? ಆಮದಿನ ಬಗ್ಗೆ ಮಾತನಾಡುವ ಪ್ರಧಾನಿಯವರು ತೆರಿಗೆ ಹೆಚ್ಚಳದ ಬಗ್ಗೆಯೂ ಮಾತಾಡಲಿ.
ಪೆಟ್ರೋಲ್, ಡೀಸೆಲ್ ತುಮ್ ಆಗೇಬಡೋ ಎಲ್ಪಿಜಿ ತುಮಾರ ಸಾಥ್ ಹೇ..
ಒನ್ಜಿಸಿಗೂ ಕುತ್ತು ಬಂತೇ?
ಪ್ರಧಾನಿಯವರು ನೈಸರ್ಗಿಕ ಅನಿಲ ಬಳಕೆಗೆ ಒತ್ತು ಕೊಡಲು ಹೇಳಿದ್ದಾರೆ. ಅಂದರೆ ಇನ್ನೇನು ಕೆಲವೇ ದಿನಗಳಲ್ಲಿ ONGC ಗೂ ಕುತ್ತು ಬಂತು ಎಂದರ್ಥ. ಲಾಭದಲ್ಲಿ ನಡೆಯುತ್ತಿರುವ ONGCಯನ್ನು ಖಾಸಗೀಕರಣಗೊಳಿಸಲು ಈಗಿಂದಲೇ ಪೀಠಿಕೆ ಹಾಕುವಂತಿದೆ ಅವರ ಮಾತಿನ ಅರ್ಥ. ಉತ್ಪಾದನೆ ಹೆಚ್ಚಿಸುವ ನೆಪದಲ್ಲಿ ONGC, ಖಾಸಗಿಯವರಿಗೆ ಮಾರಾಟವಾದರೂ ಆಶ್ಚರ್ಯವಿಲ್ಲ.
Recommended Video
ಮುಂದೆ ಜನರೇ ಕಾರಣ ಎನ್ನಬಹುದು
ತಮ್ಮ ಹುಳುಕು ಮುಚ್ಚಿಡಲು, ತಪ್ಪನ್ನು ಬೇರೆಯವರ ತಲೆಗೆ ಕಟ್ಟುವ ಕೆಟ್ಟ ಅಭ್ಯಾಸವನ್ನು ಪ್ರಧಾನಿಯವರು ಬಿಡಲಿ. ತೈಲಬೆಲೆ ಏರಿಕೆಗೆ ಹಿಂದಿನ ಸರ್ಕಾರ ಕಾರಣ ಎಂಬಂತೆ ಪೀಪಿ ಊದುವ ಪ್ರಧಾನಿಯವರು ಈ ಮೂಲಕ ತಮ್ಮದು ಕೇವಲ ಬಡಾಯಿ ಸರ್ಕಾರ ಎಂದು ತೋರಿಸಿದ್ದಾರೆ. ಮುಂದೊಂದು ದಿನ ಪ್ರಧಾನಿಯವರು ಬೆಲೆ ಏರಿಕೆಗೆ ಜನರೇ ಕಾರಣ ಎನ್ನಲು ಹಿಂಜರಿಯುವುದಿಲ್ಲ.