ಜಂಟಿ ಪ್ರಚಾರ ಸಮಾವೇಶ: ಬೆಂಗಳೂರಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ
ಬೆಂಗಳೂರು, ಏಪ್ರಿಲ್ 10: ಬೆಂಗಳೂರಲ್ಲಿ ದೋಸ್ತಿ ಪಕ್ಷಗಳು ಇಂದು ಶಕ್ತಿ ಪ್ರದರ್ಶಿಸಿವೆ. ಜೆಡಿಎಸ್-ಕಾಂಗ್ರೆಸ್ ನಾಯಕರು ಒಟ್ಟಾಗಿ ಕೃಷ್ಣಬೈರೇಗೌಡ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಪರವಾಗಿ ಬೃಹತ್ ಪ್ರಚಾರ ಸಮಾವೇಶ ನಡೆಸಿದ್ದಾರೆ.
ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ, ಶರವಣ ಇನ್ನೂ ಹಲವು ಪ್ರಮುಖ ಮುಖಂಡರು ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಜಂಟಿಯಾಗಿ ಪ್ರಚಾರ ಸಭೆಯಲ್ಲಿ ಇಂದು ನಡೆಸಿದರು.
ಎಲ್ಲ ನಾಯಕರು ವೇದಿಕೆ ಮೇಲೆ ಪರಸ್ಪರ ಕೈ-ಕೈ ಹಿಡಿದುಕೊಂಡು ಒಗ್ಗಟ್ಟಿನ ಸಂದೇಶವನ್ನು ಕಾರ್ಯಕರ್ತರಿಗೆ ನೀಡಿದರು.
ದೇವೇಗೌಡ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗಿನಿಂದಲೂ ವಿವಿಧ ಕ್ಷೇತ್ರಗಳಲ್ಲಿ ಜಂಟಿಯಾಗಯೇ ಪ್ರಚಾರ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಜಂಟಿ ಸಮಾವೇಶ ಮತ್ತು ಮೆರವಣಿಗೆಗಳಲ್ಲಿ ಈ ಇಬ್ಬರೂ ನಾಯಕರು ಇಂದು ಭಾಗವಹಿಸಿದ್ದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಪ್ರಣಾಳಿಕೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಸುರಿದಂತಿದೆ ಎಂದು ಟೀಕಿಸಿದರು. ಬಿಜೆಪಿಯವರು ದಶಕಗಳಿಂದಲೂ ರಾಮಮಂದಿರ ಕಟ್ಟುತ್ತೇವೆ ಎಂದು ಭರವಸೆ ನೀಡುತ್ತಲೇ ಇದ್ದಾರೆ, ಆದರೆ ಈ ವರೆಗೆ ಒಂದು ಕಲ್ಲು ಸಹ ಕದಲಿಸಿಲ್ಲ, ಮಂದಿರಕ್ಕಾಗಿ ಸಂಗ್ರಹಿಸಿದ್ದ ಹಣದ ಲೆಕ್ಕವೂ ಇಲ್ಲ ಎಂದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡ ಪರ ಮತಯಾಚಿಸಿದ ದೇವೇಗೌಡ ಅವರು, ಬುದ್ಧಿವಂತ, ಸೇವಾ ಮನೋಭಾವ ಹೊಂದಿರುವ, ದೂರದೃಷ್ಟಿಯುಳ್ಳ ವ್ಯಕ್ತಿಯಾದ ಕೃಷ್ಣಬೈರೇಗೌಡ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.