ಉಪ ಚುನಾವಣೆ ಬಳಿಕ ಒಂದಾಗಲಿರುವ ಹಳೆ ದೋಸ್ತಿ: ಪರಂ
ಬೆಂಗಳೂರು, ಡಿಸೆಂಬರ್ 01: ಹಳೇ ದೋಸ್ತಿ ಜೆಡಿಎಸ್ ಜೊತೆ ಮತ್ತೆ ಕೈ ಜೋಡಿಸುವ ಕುರಿತು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮತ್ತೊಮ್ಮೆ ಮಾತನಾಡಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಪುನಃ ಮೈತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಡುವೆ ಹೆಚ್ಚಿನ ಭಿನ್ನಾಭಿಪ್ರಾಯಗಳಿಲ್ಲ. ಬಿಜೆಪಿ ಜೊತೆಯಂತೂ ಹೊಂದಾಣಿಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೆ ಮೈತ್ರಿ, ಸರ್ಕಾರ ರಚನೆ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಪರಮೇಶ್ವರ ಹೇಳಿದರು.
ಪುನಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಯಾರು, ಏನು ಹೇಳಿದರು?
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರಬಹುದು ಇಲ್ಲವೇ ಜೆಡಿಎಸ್ ಜೊತೆ ಮೈತ್ರಿ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ, ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಸೋನಿಯಾ ಗಾಂಧಿ ಅವರ ನಿರ್ಧಾರ ಮೇಲೆ ಬೆಂಬಲ ನೀಡುವ ಬಗ್ಗೆ ತೀರ್ಮಾನ ಎಂದು ತಿಳಿಸಿದ್ದಾರೆ.
ಯಾರೂ ಗೆಲ್ಲಲ್ಲ: ಅನರ್ಹರಾದ ಶಾಸಕರು, ಪಕ್ಷಾಂತರ ಮಾಡೋರಿಗೆ ರಾಜ್ಯದ ಜನ ಪಾಠ ಕಲಿಸಲು ಮುಂದೆ ಬಂದಿದ್ದಾರೆ, ಈ ಮೂಲಕ ಉತ್ತಮ ಸಂದೇಶ ಕೊಡಲಿದ್ದಾರೆ. ಸದ್ಯ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಕಡಿಮೆಯಾದರೂ ನಾವು ಎಲ್ಲದಕ್ಕೂ ಸಜ್ಜಾಗಿದ್ದೇವೆ ಎಂದರು.
ಒಂದು ವೇಳೆ ಈ ಉಪ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಕಳೆದುಕೊಂಡರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಕೈ ಜೋಡಿಸುವ ಸಾಧ್ಯತೆ ಇದೆ, 17ರ ಪೈಕಿ 15 ಕ್ಷೇತ್ರಗಳಲ್ಲಿ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರ ಬರಲಿದೆ.
ಬಿಜೆಪಿಗೆ ಪಾಠ ಕಲಿಸಲು, ಜಾತ್ಯಾತೀತ ಶಕ್ತಿಗಳು ಒಂದಾಗಬೇಕಿದೆ. ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡಲು ಜೆಡಿಎಸ್ ಜೊತೆ ಕಾಂಗ್ರೆಸ್ ಕೈಜೋಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.