ಜಯನಗರದಲ್ಲಿ ಬಿಜೆಪಿಯನ್ನು ಸೋಲಿಸಲು ಏದುಸಿರುಬಿಟ್ಟ ಮೈತ್ರಿಕೂಟ
ಬೆಂಗಳೂರು, ಜೂನ್ 13 : ಜಯನಗರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ 2ನೇ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ.
ಜೂನ್ 11ರಂದು ನಡೆದಿದ್ದ ಬೆಂಗಳೂರಿನ ಜಯನಗರ ಕ್ಷೇತ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಜಯನಗರ ಕ್ಷೇತ್ರ 'ಕೈ' ವಶವಾಗಿದೆ, 2008, 2013ರ ಚುನಾವಣೆಯಲ್ಲಿ ಬಿಜೆಪಿಯ ದಿ.ಬಿ.ಎನ್.ವಿಜಯ ಕುಮಾರ್ ಕ್ಷೇತ್ರದಲ್ಲಿ ಗೆದಿದ್ದರು. ಈಗ ಕ್ಷೇತ್ರವನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ.
ಜಯನಗರದಲ್ಲಿ ಸೌಮ್ಯ ರೆಡ್ಡಿ ಕೊರಳಿಗೆ ವಿಜಯಮಾಲೆ
ಜಯನಗರ ಚುನಾವಣೆಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ 54 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು, ಬಿಜೆಪಿಯ ಬಿ.ಎನ್.ಪ್ರಹ್ಲಾದ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಅಪ್ಪ-ಮಗಳು ಇಬ್ಬರೂ ವಿಧಾನಸಭೆ ಪ್ರವೇಶಿಸಿದ್ದಾರೆ.
ಮೈತ್ರಿ ಸರ್ಕಾರದ ಗೆಲುವಲ್ಲ, ಕಾಂಗ್ರೆಸ್ ಗೆಲುವು: ಸಿದ್ದರಾಮಯ್ಯ
ಬಿ.ಎನ್.ವಿಜಯ ಕುಮಾರ್ ಅವರ ಸಾವಿನ ಅನುಕಂಪದ ಅಲೆ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ರಣತಂತ್ರ, ಪ್ರಭಾವಿ ನಾಯಕ ಆರ್.ಅಶೋಕ್ ಅವರ ತಂತ್ರಗಾರಿಕೆ ಜಯನಗರದಲ್ಲಿ ಫಲ ಕೊಟ್ಟಿಲ್ಲ. ಆದ್ದರಿಂದ, ಬಿಜೆಪಿಗೆ ಸೋಲು ಉಂಟಾಗಿದೆ. ಜಯನಗರ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪಾತ್ರವೇನು?...
ಹೊಸ ಸರ್ಕಾರ ರಚನೆ
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯುವ ಚುನಾವಣೆಯಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷ ಗೆಲುವು ಸಾಧಿಸುತ್ತದೆ. ಜಯನಗರ ಚುನಾವಣೆಯಲ್ಲಿಯೂ ಇದೇ ಸಂಪ್ರದಾಯ ಮುಂದುವರೆದಿದೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ರಾಜರಾಜೇಶ್ವರಿ ನಗರ, ಜಯನಗರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜಯನಗರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಿಜೆಪಿ ಭದ್ರಕೋಟೆಯನ್ನು 'ಕೈ' ವಶ ಮಾಡಿಕೊಂಡಿದೆ.
ಬಿಜೆಪಿ ಸೋಲಿಸಲು ಒಂದಾದ ಕಾಂಗ್ರೆಸ್-ಜೆಡಿಎಸ್
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಜಯನಗರ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಂಡಿದ್ದವು. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಬಿಜೆಪಿಗೆ ಸೋಲಿನ ರುಚಿ ತೋರಿಸಿವೆ.
ಚುನಾವಣೆ ದಿನಾಂಕ ಘೋಷಣೆಯಾದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರಲಿಲ್ಲ. ಜೂನ್ 5ರಂದು ರಾಮಲಿಂಗಾ ರೆಡ್ಡಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಡಿ ಮಾಡಿದ್ದರು. ಅಂದು ಅಧಿಕೃತವಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡವು. ಇದರಿಂದಾಗಿ ಬಿಜೆಪಿಗೆ ಸೋಲು ಉಂಟಾಯಿತು.
ಕಾಂಗ್ರೆಸ್ ಬೆಂಬಲಿಸಿದ ಜೆಡಿಎಸ್
ಜೆಡಿಎಸ್ ಪಕ್ಷ ಕಾಳೇಗೌಡ ಅವರನ್ನು ಜಯನಗರ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಿತ್ತು. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅವರು ಪ್ರಚಾರವನ್ನು ಆರಂಭಿಸಿದ್ದರು. ಆದರೆ, ಜೂನ್ 3ರಂದು ಅವರು ಪ್ರಚಾರವನ್ನು ಸ್ಥಗಿತಗೊಳಿಸಿದ್ದರು.
ಜೂನ್ 5ರಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸೂಚನೆಯಂತೆ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ನ ಸೌಮ್ಯಾ ರೆಡ್ಡಿ ಅವರಿಗೆ ಬೆಂಬಲ ಘೋಷಣೆ ಮಾಡಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಮಲಿಂಗಾ ರೆಡ್ಡಿ ಅವರು ಜೆಡಿಎಸ್ ವರಿಷ್ಠರ ಜೊತೆ ಮಾತನಾಡಿ, ಪುತ್ರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.
ಬಿಜೆಪಿ ಅಸಮಾಧಾನ
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿವುದು ಸುಲಭವಾಯಿತು. ಬಿಜೆಪಿಯಲ್ಲಿಯೂ ಅಭ್ಯರ್ಥಿ ಘೋಷಣೆ ಬಳಿಕ ಸ್ಥಳೀಯರನ್ನು ಕಡೆಗಣಿಸಿದ್ದಾರೆ ಎಂಬ ಆರೋಪವಿತ್ತು. ಇದನ್ನು ಬಂಡವಾಳ ಮಾಡಿಕೊಂಡ ಮೈತ್ರಿ ಸರ್ಕಾರ ಜಯನಗರ ಚುನಾವಣೆಯಲ್ಲಿಯೂ ಒಟ್ಟಾಗಿ ಬಿಜೆಪಿಗೆ ಸೋಲಿನ ರುಚಿ ತೋರಿಸಿತು.
2008, 2013ರ ಫಲಿತಾಂಶ
* 2013ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ವಿಜಯ ಕುಮಾರ್ ಅವರು 43,990 ಮತಗಳನ್ನು ಪಡೆದು ಜಯಗಳಿಸಿದ್ದರು.
ಕಾಂಗ್ರೆಸ್ನ ಎಂ.ಸಿ.ವೇಣುಗೋಪಾಲ್ ಅವರು 31,678 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಕೆ.ಎಸ್.ಸಮೀವುಲ್ಲಾ 12,097 ಮತಗಳನ್ನು ಪಡೆದಿದ್ದರು.
* 2008ರ ಚುನಾವಣೆಯಲ್ಲಿ ಬಿ.ಎನ್.ವಿಜಯ ಕುಮಾರ್ 43,164 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎಂ.ಸುರೇಶ್ 20,570 ಮತ ಪಡೆದಿದ್ದರು. ಜೆಡಿಎಸ್ನ ಕೆ.ನಾರಾಯಣ ರಾಜು 10,444 ಮತಗಳನ್ನು ಪಡೆದಿದ್ದರು.