'ಸಿಡಿ' ಮಾಡಿದ್ದು ಯಾರು? ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಫೋಟಕ ಹೇಳಿಕೆ!
ಬೆಂಗಳೂರು, ಮಾ. 10: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. 'ಸಿಡಿ' ಬಿಡುಗಡೆ ಮಾಡಿದ್ದ ದಿನೇಶ್ ಕಲ್ಲಹಳ್ಳಿ ತಮಗೆ ಹೋರಾಟ ಮಾಡುವುದು ಕಷ್ಟವಾಗುತ್ತಿದೆ ಎಂದು 'ಕೈ' ಚೆಲ್ಲಿದ್ದಾರೆ. ಜೊತೆಗೆ 'ಸಿಡಿ' ಯೊಂದಿಗೆ ಸಲ್ಲಿಸಿದ್ದ ದೂರು ವಾಪಾಸ್ ಪಡೆದಿದ್ದಾರೆ. ಹೀಗಾಗಿ ಇಡೀ 'ಸಿಡಿ' ಪ್ರಕರಣ ಕ್ಷಣಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ.
Recommended Video
ಇದೇ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು 'ಸಿಡಿ' ನಿರ್ಮಾತೃರು ಯಾರು ಎಂಬುದರ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಅವರು, 'ಸಿಡಿ' ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ಹಿಂದೆ ಯಾರಿದ್ದಾರೆ? ಯಾಕೆ ಈ ಸಿಡಿ ಮಾಡಿದ್ದಾರೆ? ತಾವು ಕೋರ್ಟ್ ಮೊರೆ ಹೋಗಿದ್ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ.
'ಸಿಡಿ' ಪ್ರಕರಣಕ್ಕೆ ಮಹತ್ವದ ತಿರುವು; 'ಸಿಡಿ' ಪ್ರಕರಣದ ಸಂತ್ರಸ್ತ ಯುವತಿ ಈಗೆಲ್ಲಿದ್ದಾರೆ?
'ಸಿಡಿ' ನಿರ್ಮಾತೃರ ಮಾಹಿತಿ ನೀಡಿದ ಎಸ್ಟಿಎಸ್!
ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟು ಒಂದು ವಾರವಾಯಿತು. ಸಂತ್ರಸ್ತ ಯುವತಿಯ ಪರವಾಗಿ ದೂರು ಕೊಟ್ಟು 'ಸಿಡಿ' ಬಿಡುಗಡೆ ಮಾಡಿದ್ದ ದಿನೇಶ್ ಕಲ್ಲಹಳ್ಳಿ ಅವರು ದೂರು ವಾಪಾಸ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ 'ಸಿಡಿ' ಪ್ರಕರಣದಲ್ಲಿ ದಿನೇಶ್ ಕೂಡ ದಾಳವಾಗಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ.
ಹೀಗಾಗಿ 'ಸಿಡಿ' ನಿರ್ಮಾತೃರು ಯಾರು ಎಂಬುದರ ಕುರಿತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಸ್ಫೋಟಕ ಮಾಹಿತಿ ನೀಡಿದ್ದರೆ. ಹಾಗಾದ್ರೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ 'ಸಿಡಿ' ತಯಾರಿಸಿದ್ದು ಯಾರು?
ಇಂಥ ಮನೆಹಾಳ ಕೆಲಸ ಅವ್ರೇ ಮಾಡೋದು!
ಇಂತಹ ಮನೆಹಾಳ ತೇಜೋವಧೆ ಕೆಲಸ ಮಾಡುವವರು ರಾಜ್ಯದಲ್ಲಿ ಯಾರಿದ್ದಾರೆ? ಎಂದು ಸಚಿವ ಎಸ್.ಟಿ. ಸೋಮಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಸಿಡಿ ಮಾಡಿಸಿದ್ದು, ಕಾಂಗ್ರೆಸ್ ನವ್ರೇ. ನೂರಕ್ಕೆ ನೂರು ಸಿಡಿ ಮಾಡಿದ್ದೇ ಕಾಂಗ್ರೆಸ್ ನವ್ರು, ಇನ್ಯಾರು ಮಾಡಿರ್ತಾರೆ? ಇಂಥ ಮನೆಹಾಳ ತೇಜೋವಧೆ ಕೆಲಸ ಅವ್ರೇ ಮಾಡೋದು ಎಂದು 'ಸಿಡಿ' ಎಲ್ಲಿಂದ ಬಂದಿದೆ ಎಂಬ ಕುರಿತು ಆರೋಪಿಸಿದ್ದಾರೆ.
ತಾಕತ್ತಿದ್ದರೇ ರಮೇಶ್ ವಿರುದ್ಧ ಸ್ಪರ್ಧೆ ಮಾಡಲಿ!
ಕಾಂಗ್ರೆಸ್ 'ಸಿಡಿ' ತಯಾರಿಸಿದೆ ಎಂಬುದಕ್ಕೆ ಸಚಿವ ಎಸ್ಟಿಎಸ್ ವಿವರಣೆಯನ್ನೂ ಕೊಟ್ಟಿದ್ದಾರೆ. ನಾನು 20 ವರ್ಷ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೆ. ಅವರು ಏನೇನು ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ. ಸಿಡಿ ಪ್ರಕರಣ ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ. ಸಿಬಿಐ ತನಿಖೆಯಿಂದ ಎಲ್ಲವೂ ಆಚೆ ಬರುತ್ತದೆ. ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ. ತಾಕತ್ತಿದ್ದರೇ ನನ್ನ ವಿರುದ್ಧ, ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ ನೋಡೋಣ. ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಸವಾಲು ಹಾಕಿದ್ದಾರೆ.
ಅವರ ಅನೈತಿಕತೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣ
ಸಮ್ಮಿಶ್ರ ಸರ್ಕಾರ ಪತನಾಗಿದ್ದು ನಮ್ಮಿಂದಲ್ಲ. ಸಮ್ಮಿಶ್ರ ಸರ್ಕಾರ ಪತನವಾಗಬೇಕಾದ್ರೆ ಈ ಇವರ ಅನೈತಿಕತೆ ಕಾರಣ. ವಿಧಾನಸಭೆಯಲ್ಲಿ ನಮ್ಮ ಬಗ್ಗೆ ಎನೆಲ್ಲಾ ಮಾತಾಡಿದ್ದರು ಅಂತಾ ನಮಗೆ ಗೊತ್ತಿದೆ. ರಮೇಶ್ ಜಾರಕಿಹೊಳೆ ಅವರ ಮಾನ ಹೋಯ್ತಲ್ಲ ಇವರ ಕೈನಲ್ಲಿ ಕೊಡುವುದಕ್ಕೆ ಆಗುತ್ತಾ ಈಗ? ಯಾವುದೇ ಸವಾಲನ್ನೂ ಎದುರಿಸುವ ಶಕ್ತಿಯನ್ನು ಭಗವಂತ ನಮಗೆ ಕೊಟ್ಟಿದ್ದಾನೆ ಎಂದು ಎಸ್ಟಿಎಸ್ ಹೇಳಿದ್ದಾರೆ.
ಇವರ ಬೇರೆ ಬೇರೆ ದಾರಿಯಲ್ಲಿ ಹೋಗುತ್ತಾರೆ ಎಂದು ನಾವು ಕೋರ್ಟ್ಗೆ ಹೋಗಿದ್ದೇವೆ ಎಂದು ತಾವು ಸಿಟಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ತಡೆ ಆದೇಶ ಪಡೆದಿರುವುದರ ಹಿಂದಿನ ಕಾರಣವನ್ನು ಸೋಮಶೇಖರ್ ವಿವರಿಸಿದ್ದಾರೆ.