ಕಾಂಗ್ರೆಸ್ ಕಡೆ ವಾಲಿರುವುದು ಸುಳ್ಳು ಎಂದು ಹೇಳಲ್ಲ : ಸೋಮಣ್ಣ
ಬೆಂಗಳೂರು, ಜನವರಿ 19: 'ಕಾಂಗ್ರೆಸ್ ಪಕ್ಷದ ಕಡೆ ವಾಲಿರುವುದು ಸುಳ್ಳು ಎಂದು ನಾನು ಹೇಳುವುದಿಲ್ಲ ಮಾಧ್ಯಮಗಳಲ್ಲಿ ವರದಿ ಬಂದಿದೆ' ಎಂದು ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಹೇಳಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಾರುವ ಮುನ್ಸೂಚನೆಯನ್ನು ನೀಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ್ದ ವಿ.ಸೋಮಣ್ಣನವರನ್ನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೀರಂತೆ ಹೌದಾ? ಎಂದು ಕೇಳಿದ ಪ್ರಶ್ನೆಗೆ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂಬ ವರದಿ ಸುಳ್ಳು ಎಂದು ಹೇಳಲಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಿಮ್ಮನ್ನು ಪಕ್ಷದಲ್ಲಿ ಕಡೆಗಣಿಸುತ್ತಿದ್ದಾರೆಯೇ ಎಂದು ಕೇಳಿದರೆ ಯಾವ ಉತ್ತರವನ್ನೂ ನೀಡದೇ ಮುಂದೆ ಸಾಗಿದರು.[ಅಕ್ರಮ ಅಸ್ತಿ ಗಳಿಕೆ :ಶಾಸಕ ಸೋಮಣ್ಣ ವಿರುದ್ಧದ ತನಿಖೆಗೆ ತಡೆ]
ಬಿಜೆಪಿಯಲ್ಲಿ ಬ್ರಿಗೇಡ್ ಸಮರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ರಾಜ್ಯದ ವಿವಿಧೆಡೆ ಯಡಿಯೂರಪ್ಪ ಬಣ, ಈಶ್ವರಪ್ಪ ಬಣಗಳು ಸೃಷ್ಟಿಯಾಗಿ ಪರಸ್ಪರ ವಾಗ್ದಾಳಿ, ತಳ್ಳಾಟ ನೂಕಾಟ ನಡೆಸಿವೆ. ಪಕ್ಷದಲ್ಲಿ ಸ್ವೇಚ್ಚಾಚಾರದಿಂದಾಗಿ ಅರಾಜಕತೆ ಪ್ರಾರಂಭವಾಗಿದ್ದು, ಸೋಮಣ್ಣನವರಿಗೆ ವಿರಸ ಮೂಡಿಸಿರುವಂತಿದೆ.
ವಿ. ಸೋಮಣ್ಣನವರು ಬಿಜೆಪಿಯಲ್ಲಿ ಶಿಸ್ತನ್ನು ರೂಢಿಸಿಕೊಂಡಿದ್ದು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ಬೇರೆ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ರಾಜಕೀಯ ಚಿಂತಕರು ಮಾತನಾಡಿಕೊಳ್ಳುತ್ತಿದ್ದಾರೆ.