ನಾನು ನನ್ನ ಗಂಡನ ಹೆಸರು ಬಳಸಬಾರದು ಅಂತಾರೆ!
ಬೆಂಗಳೂರು, ಅ. 30: ಮಹಿಳೆಯರು ತಮಗಿಂತ ತಮ್ಮ ಮನೆಯವರ ಬಗ್ಗೆ ಯೋಚಿಸುವುದೇ ಹೆಚ್ಚು. ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಸಿಗುವುದು ಕಡಿಮೆ. ಆ ಅವಕಾಶವನ್ನು ಕಾಂಗ್ರೆಸ್ ನನಗೆ ನೀಡಿದೆ ಎಂದು ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ರೋಡ್ ಶೋ ನಡೆಸಿದ ಕುಸುಮಾ ಅವರು ತಮ್ಮ ಅಭಿಪ್ರಾಯವನ್ನು ಮತದಾರರೊಂದಿಗೆ ಹಂಚಿಕೊಂಡರು.
Recommended Video
ಇಂದು ನಾನು ಮತ್ತೆ ನಿಮ್ಮ ಮನೆ ಮುಂದೆ ಬಂದು ನಿಂತಿದ್ದೇನೆ. ಈ ಬಾರಿ ನಮ್ಮ ಪಕ್ಷದ ಪ್ರಮುಖ ನಾಯಕರ ಜತೆ ಬಂದಿದ್ದೇನೆ. ಮಹಿಳೆಯರು ತಮಗಿಂತ ತಮ್ಮ ಮನೆಯಲ್ಲಿರುವ ಗಂಡ, ಮಕ್ಕಳು, ತಂದೆ, ತಾಯಿ, ಸೋದರ, ಸೋದರಿ ಬಗ್ಗೆ ಯೋಚಿಸುವುದೇ ಹೆಚ್ಚು. ಅವರಿಗೆ ಅಷ್ಟು ದೊಡ್ಡ ಮನಸ್ಸಿರುತ್ತದೆ. ಆದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಸಿಗುವುದೇ ಕಡಿಮೆ. ಆ ಅವಕಾಶವನ್ನು ಕಾಂಗ್ರೆಸ್ ನನಗೆ ನೀಡಿದೆ. ನಿಮ್ಮ ಸೇವೆಗಾಗಿ ಅದನ್ನು ಮುಡಿಪಾಗಿಡುತ್ತೇನೆ ಎಂದರು.
ನನ್ನ ಗಂಡನ ಹೆಸರು ಬಳಸಬಾರದಂತೆ
ಈ ಚುನಾವಣೆಯಲ್ಲಿ ನನ್ನ ಹೆಸರು ಕೇಳಿಬರುತ್ತಿದ್ದಂತೆ ನನ್ನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ನಾನು ನನ್ನ ಗಂಡನ ಹೆಸರು ಬಳಸಬಾರದು ಅಂತಾರೆ. ನನ್ನ ಮೇಲೆ ಎಫ್ಐಆರ್ ಹಾಕ್ತಾರೆ. ಪ್ರಚಾರಕ್ಕೆ ಹೋದಲ್ಲೆಲ್ಲಾ ತೊಂದರೆ ಕೊಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?
ರಾಜಕೀಯಕ್ಕೆ ಬರೋದು ತಪ್ಪಾ?
ನಾನು ಅವರಿಗೆ ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ. ಹೆಣ್ಣು ಮಗಳಾಗಿ ನಾನು ರಾಜಕೀಯಕ್ಕೆ ಬರೋದು ತಪ್ಪಾ? ಜನರ ಸೇವೆ ಮಾಡೋದು ತಪ್ಪಾ? ಇಲ್ಲಿರುವ ಯುವಕರು, ಮಹಿಳೆಯರು ಒಟ್ಟಾಗಿ ನಿಲ್ಲಬೇಕು. ಒಂದು ಹೆಣ್ಣಿಗೆ ಅವಕಾಶ ಸಿಕ್ಕಾಗ ಆಕೆಯೂ ದೇಶ ಕಟ್ಟುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಾಳೆ ಎಂಬುದನ್ನು ತೋರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ-ಡಿಕೆಶಿ ಜಂಟಿ ಪ್ರಚಾರ
ಇನ್ನು ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಂಟಿ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದರು. ಮುಂದಿನ ಮುಖ್ಯಮಂತ್ರಿ ವಿಚಾರ ಮತಗಳನ್ನು ಒಡೆಯಬಹುದು ಎಂಬ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಒಟ್ಟಾಗಿ ಒಗ್ಗಟ್ಟನ್ನು ಪ್ರದರ್ಶನ ಮಾಡಿದರು ಎಂದು ಹೇಳಲಾಗುತ್ತಿದೆ.
ಮಂಗಳಮುಖಿಯರ ಸಭೆಯಲ್ಲಿ ಕಣ್ಣೀರು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ!
ಮೋದಿ ಮೂರು ನಾಮ ಹಾಕಿದ್ದಾರೆ
ರೋಡ್ ಶೋನಲ್ಲಿ ಪ್ರಚಾರ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿ ಮೋದಿ ಎಂದು ಕೂಗುವ ಯುವಕರಿಗೆ ನರೇಂದ್ರ ಮೋದಿ ಅವರು ಮೂರು ನಾಮ ಹಾಕಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಪ್ರಧಾನಿ ಮೋದಿ. ಈಗ ಇದ್ದ ಉದ್ಯೋಗ ಕಳೆದುಕೊಂಡು ಯುವಕರು ಬೀದಿ ಪಾಲಾಗಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.