ಗಲಭೆಗೆ ಸಂಬಂಧ ಪಡದವರನ್ನೆಲ್ಲಾ ಬಂಧಿಸಿದ್ದಾರೆ: ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಆರೋಪ
ಬೆಂಗಳೂರು, ಆಗಸ್ಟ್ 15: ಕಳೆದ ಮಂಗಳವಾರ ನಡೆದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಸಂಬಂಧಪಡದೆ ಇರುವವರನ್ನೆಲ್ಲಾ ಬಂಧಿಸಿದ್ದಾರೆ. ಕೆಜೆ ಜಾರ್ಜ್ ಅವರ ಕ್ಷೇತ್ರದ ಮೌಲ್ವಿಯೊಬ್ಬರು ಮಸೀದಿಗೆ ಪ್ರಾರ್ಥನೆ ಮಾಡಲು ಬಂದರೆ ಅವರನ್ನು ಬಂಧಿಸಿದ್ದಾರೆ. ಈಗ ಅಲ್ಲಿನ ಜನ ಭಯಬೀತರಾಗಿದ್ದಾರೆ. ಇದಕ್ಕೆ ಕೇವಲ ಮ್ಯಾಜಿಸ್ಟ್ರೇಟ್ ತನಿಖೆ ಸಾಲುವುದಿಲ್ಲ. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಮುಖ್ಯಸ್ಥ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ 400 ಜನರನ್ನು ಅರೆಸ್ಟ್ ಮಾಡಿದ್ದಾರೆ. ಹತ್ತು ಹನ್ನೆರಡು ವರ್ಷದ ಹುಡುಗರನ್ನು ಸಹ ಬಂಧಿಸುತ್ತಿದ್ದಾರೆ. ಈ ಘಟನೆ ಹಿಂದೆ ಎಸ್ ಡಿಪಿಐ ಇದೆ, ಪಿಎಫ್ ಐ ಇದೆ ಎನ್ನಲಾಗುತ್ತಿದೆ. ನೀವು ಕಂಡು ಹಿಡಿಯಿರಿ. ನಮಗೂ ಸಾಕಷ್ಟು ಸತ್ಯ ಸಂಗತಿ ಗೊತ್ತಾಗಿದೆ. ಈಗ ಅದನ್ನು ಬಹಿರಂಗ ಪಡಿಸುವುದಿಲ್ಲ. ವರದಿ ಕೊಡುವಾಗ ಅದನ್ನೆಲ್ಲಾ ಉಲ್ಲೇಖಿಸುತ್ತೇನೆ ಎಂದರು.
ಆಗಸ್ಟ್ 11ರಂದು ಪುಲಿಕೇಶಿ ನಗರದಲ್ಲಿ ನಡೆದ ಘಟನೆ ವಿಷಾದನೀಯ. ಈ ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತನಿಖೆಯ ನಂತರ ಗೊತ್ತಾಗುತ್ತದೆ. ಈ ಘಟನೆಯಲ್ಲಿ ನಮ್ಮ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನು ಸಂಪೂರ್ಣ ಸುಟ್ಟು ಹಾಕಿದ್ದಾರೆ ಎಂದು ತಿಳಿಸಿದರು. ಮುಂದೆ ಓದಿ.
ಅವಹೇಳನೆಗೆ ಪ್ರತಿಕ್ರಿಯೆ ರೂಪದಲ್ಲಿ ಗಲಭೆ
ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲೂ ಪೊಲೀಸ್ ವಾಹನಗಳಿಗೆ ಹಾಗೂ ಜಪ್ತಿ ಮಾಡಿದ್ದ ವಾಹನಗಳಿಗೆ, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮುನೇಗೌಡರ ಮನೆ ಬಳಿ ದಾಂಧಲೆ ಮಾಡಿದ್ದಾರೆ. ಈ ಎಲ್ಲ ಘಟನೆಗಳಿಗೆ ಹಿನ್ನೆಲೆ ನವೀನ್ ಎಂಬ ಯುವಕ ಫೇಸ್ ಬುಕ್ ನಲ್ಲಿ ಮಹಮದ್ ಪೈಗಂಬರ್ ರನ್ನು ಅವಹೇಳನ ಮಾಡಿದ್ದು. ಅದರ ಪ್ರತಿಕ್ರಿಯೆ ರೂಪದಲ್ಲಿ ಹೀಗೆ ಮಾಡಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಂಗಳೂರು ಗಲಭೆ: ಗೋಲಿಬಾರ್ನಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಶಾಸಕರ ಜತೆಗಿದ್ದೇವೆ
ನಾವು ನಮ್ಮ ಶಾಸಕರಿಗೆ ಆಗಿರುವ ನೋವು, ನಷ್ಟ ಹಾಗೂ ರಾಜಕೀಯ ತೊಂದರೆಗಾಗಿ ಇಡೀ ಕಾಂಗ್ರೆಸ್ ಪಕ್ಷ ಅವರ ಜೊತೆಗಿದ್ದೇವೆ. ಅವರಿಗೆ ನ್ಯಾಯಕೊಡಿಸಲು ನಾವೆಲ್ಲ ಹೋರಾಟ ಮಾಡುತ್ತೇವೆ. ನಮ್ಮ ನೇತೃತ್ವದ ಸತ್ಯಶೋಧನಾ ಸಮಿತಿ ಎರಡು ಸಭೆ ಮಾಡಿದೆ. ಸ್ಥಳೀಯ ನಾಯಕರು, ಬಿಬಿಎಂಪಿ ಸದಸ್ಯರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದೇವೆ. ಶಾಸಕರಿಂದಲೂ ವಿವರಣೆ ಪಡೆದಿದ್ದೇವೆ. ಇಂದು ಸ್ಥಳಕ್ಕೆ ಭೇಟಿ ಮಾಡಿ ಪೊಲೀಸ್ ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದ್ದೇವೆ. ಇನ್ನೂ ಹಲವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಬಳಿಕ ನಮ್ಮ ಪಕ್ಷದ ಅಧ್ಯಕ್ಷರಿಗೆ ವರದಿ ಕೊಡುತ್ತೇವೆ ಎಂದು ತಿಳಿಸಿದರು.
ತನ್ನದೇ ಶಾಸಕನ ಮನೆಗೆ ಬೆಂಕಿ ಹಚ್ಚುತ್ತೇವಾ?
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ತನಿಖೆ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ. ಅದು ಬಿಟ್ಟು ಕಾಂಗ್ರೆಸ್ ಪಕ್ಷದ ಒಳ ಜಗಳ ಇದಕ್ಕೆ ಕಾರಣ ಎಂದು ಸಚಿವರೇ ಹೇಳಿಕೆ ಕೊಡುತ್ತಿದ್ದಾರೆ. ನಿಮಗೆ ಪೂರ್ಣ ಮಾಹಿತಿ ಸಿಕ್ಕಿದೆಯಾ? ಯಾವ ಆಧಾರದ ಮೇಲೆ ಹೇಳುತ್ತೀರಿ? ಕಾಂಗ್ರೆಸ್ ಪಕ್ಷ ತನ್ನ ಶಾಸಕನ ಮನೆಗೆ ಬೆಂಕಿ ಹಚ್ಚಲು ಸಾಧ್ಯವೇ? ನೀವೂ ಹೀಗೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು.
ದಲಿತ ಶಾಸಕರಿಗೆ ರಕ್ಷಣೆ ಯಾರು ಕೊಡಬೇಕು? ಸರ್ಕಾರ ಕೊಡಬೇಕು. ನಾವೂ ಕೂಡ ಪಕ್ಷವಾಗಿ ಅವರಿಗೆ ರಕ್ಷಣೆ ಕೊಡುತ್ತೇವೆ. ಅಂದು ನಿಮ್ಮ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು. ಪೊಲೀಸ್ ಠಾಣೆ ಸುಡುತ್ತಿದ್ದರೆ ತಡೆಯಲು ಫೋರ್ಸ್ ಕಳಿಸಲು ಸಾಧ್ಯವಾಗಲಿಲ್ಲ ಎಂದರೆ ಇದು ಪೊಲೀಸ್ ಇಲಾಖೆ, ಗೃಹ ಇಲಾಖೆಯ ವೈಫಲ್ಯ ಎಂದು ಟೀಕಿಸಿದರು.
ಗೃಹ ಸಚಿವ ಬೊಮ್ಮಾಯಿ ಬಗ್ಗೆ ಏಕವಚನ ಬಳಕೆ: ಡಿ.ಕೆ. ಶಿವಕುಮಾರ್ ವಿಷಾದ
ಜಮೀರ್ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ
ಜಮೀರ್ ಅಹಮದ್ ಮಾನವೀಯತೆ ದೃಷ್ಟಿಯಿಂದ ಸತ್ತವರ ಮನೆಗೆ ಹೋಗಿ ಪರಿಹಾರ ಕೊಟ್ಟಿದ್ದಾರೆ. ಆದರೆ ಸತ್ತವರು ಅಮಾಯಕರು ಎಂದು ಹೇಳಿಕೆ ನೀಡಿದ್ದು ಜಮೀರ್ ಅವರ ವೈಯಕ್ತಿಕ ಅಭಿಪ್ರಾಯ. ಅದು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು. ಯಾವುದೇ ಸಂಘಟನೆ ನಿಷೇಧ ಮಾಡಬೇಕಾದರೆ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು. ನಾವು ಗೃಹ ಸಚಿವರಾಗಿದ್ದಾಗ ಈ ಪ್ರಕ್ರಿಯೆ ಪ್ರಾರಂಭಿಸಿದ್ದೆವು. ಈಗ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಆ ಪ್ರಕ್ರಿಯೆ ಮುಂದುವರಿಸಿ, ಸೂಕ್ತ ಸಾಕ್ಷಾಧಾರಗಳು ಸಿಕ್ಕಿದ್ದರೆ ಆಗ ಬೇಕಾದರೆ ಬ್ಯಾನ್ ಮಾಡಲಿ ಎಂದರು.
ನಮಗೆ ಭದ್ರತೆ ನೀಡಿಲ್ಲ
ನಮ್ಮ ಮನೆಗೆ ಬೆಂಕಿ ಹಚ್ಚಿದ್ದು ಯಾಕೆ? ನಾನು ಏನು ತಪ್ಪು ಮಾಡಿದೆ ಎಂದು ನನ್ನ ಮನೆಗೆ ಬೆಂಕಿ ಹಚ್ಚಿದರು? ಇದು ನನಗೆ ಮೊದಲು ಸ್ಪಷ್ಟವಾಗಬೇಕು. ನಮ್ಮ ಮನೆಯಲ್ಲಿ ಆವತ್ತು ಯಾರೊಬ್ಬರು ಇದ್ದಿದ್ದರೂ ನಾವು ಅನಾಥರಾಗಿರುತ್ತಿದ್ದೆವು. ನನಗೂ, ನಮ್ಮ ಕುಟುಂಬದವರಿಗೂ ಪ್ರಾಣಭಯ ಇದೆ. ನಮಗೆ ಮೊದಲು ರಕ್ಷಣೆ ಕೊಡಿ. ಇಲ್ಲಿಯವರೆಗೆ ಸರ್ಕಾರದಿಂದ ಯಾವ ರಕ್ಷಣೆಯನ್ನೂ ಕೊಟ್ಟಿಲ್ಲ. ಭದ್ರತೆ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ನಮ್ಮ ಗನ್ ಮ್ಯಾನ್ ಬಿಟ್ಟರೆ ಯಾರೂ ನನ್ನ ಜತೆಗೆ ಇಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.
ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸುದ್ದಿಗೋಷ್ಟಿಯಲ್ಲಿ ಡಾ.ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್, ಅಖಂಡ ಶ್ರೀನಿವಾಸಮೂರ್ತಿ, ಬಿ.ಕೆ. ಹರಿಪ್ರಸಾಸ್, ಸಲೀಂ ಅಹಮದ್, ನಸೀರ್ ಅಹಮದ್, ಕೃಷ್ಣ ಬೈರೇಗೌಡ ಇದ್ದರು.